ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿ ಹೊಡೆದು ನಾಲ್ವರು ಶಬರಿಮಲೆ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಬೆಳ್ಳಾವಿ ಕ್ರಾಸ್ ಬಳಿ ಸಂಭವಿಸಿದೆ.
ಮೃತರನ್ನು ಏಳು ವರ್ಷದ ಸಾಕ್ಷಿ, 45 ವರ್ಷದ ಮಾರುತಪ್ಪ, 30 ವರ್ಷದ ವೆಂಕಟೇಶ್ ಮತ್ತು 28 ವರ್ಷದ ಗವಿಸಿದ್ದಪ್ಪ ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಕೊಪ್ಪಳದ ಗದ್ದಿಗೆರೆ ತಾಂಡ ಮತ್ತು ಕುಕ್ಕನೂರು ಗ್ರಾಮದವರು ಎಂದು ಗುರುತಿಸಲಾಗಿದೆ.
ಶಬರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದು ಕ್ರೂಸರ್ ನಲ್ಲಿ ವಾಪಸ್ ಕೊಪ್ಪಳಕ್ಕೆ ತೆರಳುತ್ತಿದ್ದ ವೇಳೆ ತುಮಕೂರು ಜಿಲ್ಲೆಯ ಕೋರಾ ಪೊಲೀಸ್ ಠಾಣೆಯ ಬೆಳ್ಳಾವಿ ಕ್ರಾಸ್ ಬಳಿ ಶುಕ್ರವಾರ ಬೆಳಗಿನಜಾವ 5.30ರ ಸುಮಾರಿನಲ್ಲಿ ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.
ಅಪಘಾತದಲ್ಲಿ ಗಾಯಗೊಂಡವರನ್ನು ಗದ್ದಿಗೆರೆ ತಾಂಡ ಶ್ರೀನಾಥ್, ಕುಕ್ಕನೂರಿನ ಪ್ರದೀಪ್ಕುಮಾರ್, ರಾಜಪ್ಪ (ಗಂಭೀರ ಗಾಯ), ಹುಲಿಗಪ್ಪೆ, ರಾಕೇಶ್, ತಿರುಪತಿ, ಶ್ರೀನಿವಾಸ್. ಪ್ರವೀಣ್ ಎಂದು ಗುರುತಿಸಲಾಗಿದೆ.
ಭೀಕರ ಅಪಘಾತದಲ್ಲಿ ಹುಲಿಗಪ್ಪ ಮಗಳನ್ನು ಕಳೆದುಕೊಂಡಿದ್ದು ಕಣ್ಣೀರು ಹಾಕಿದರು. ಈ ಸಂದರ್ಭದಲ್ಲಿ ಮಾತನಾಡಿದ ಹುಲಿಗಪ್ಪ, ಆರು ವರ್ಷದ ಸಾಕ್ಷಿ ನನ್ನ ಮಗಳು, ಶಬರಿಮಲೆಗೆ ಜ.5ರಂದು ತೆರಳಿದ್ದೆವು. ದೇವರ ದರ್ಶನ ಪಡೆದುಕೊಂಡು ವಾಪಸ್ ಆಗುತ್ತಿದ್ದೆವು.
ನನ್ನ ಮಗಳು ಪಕ್ಕದಲ್ಲೇ ಮಲಗಿದ್ದಳು, ಅಪಘಾತ ಹೇಗಾಯಿತು ಎಂದು ಗೊತ್ತಿಲ್ಲ. ನಾವು ಹನ್ನೊಂದು ಜನ ಪ್ರಯಾಣ ಮಾಡುತ್ತಿದ್ದೆವು. 10 ಜನ ಅಕ್ಕಪಕ್ಕದ ಊರಿನ ನಾವು ಮಾಲೆ ಹಾಕಿದ್ದೆವು ಎಂದು ಘಟನೆ ಬಗ್ಗೆ ವಿವರಿಸಿದರು.
ಗುರುವಾರ ತಮಿಳುನಾಡಿನ ಪಳನಿ ದೇವಸ್ಥಾನಕ್ಕೆ ಭೇಟಿ ನೀಡಿ, ಮಧ್ಯಾಹ್ನ ತಮಿಳುನಾಡಿನ ಪಳನಿಯಿಂದ ಬೆಂಗಳೂರು ಕಡೆಯಿಂದ ತುಮಕೂರು ಮಾರ್ಗವಾಗಿ ಕೊಪ್ಪಳಕ್ಕೆ ತೆರಳುವಾಗ ಈ ಅಪಘಾತ ನಡೆದಿದೆ ಎನ್ನಲಾಗಿದೆ.
ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಶವಗಳನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ.


