ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕೆಲ ಹಳ್ಳಿಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ರಚನೆಗೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಅನುಮೋದನೆ ನೀಡದೆ, ಅನಗತ್ಯ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ತುಮುಲ್ ನಿರ್ದೇಶಕಿ ಭಾರತಿ ಶ್ರೀನಿವಾಸ್ ನೇತೃತ್ವದಲ್ಲಿ ಗುಬ್ಬಿ ತಾಲೂಕಿನ ವಿವಿಧ ಗ್ರಾಮಗಳ ಜನರು ಪ್ರತಿಭಟನೆ ನಡೆಸಿದರು.
ತುಮಕೂರಿನ ಟೌನ್ಹಾಲ್ ಬಳಿಯ ಅಂಬೇಡ್ಕರ್ ಪ್ರತಿಮೆಯ ಬಳಿ ಸಮಾವೇಶಗೊಂಡ ಗುಬ್ಬಿ ತಾಲೂಕಿನ ವಿವಿಧ ಗ್ರಾಮಗಳ ಜನರು ಎ.ಆರ್. ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಕೂಡಲೇ ಗುಬ್ಬಿ ತಾಲೂಕಿನಲ್ಲಿ ಪ್ರಸ್ತಾವನೆ ಸಲ್ಲಿಸಿರುವ ಗ್ರಾಮಗಳಲ್ಲಿ ಹಾಲಿನ ಡೈರಿ ಸ್ಥಾಪಿಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತುಮುಲ್ ನಿರ್ದೇಶಕಿ ಭಾರತಿ ಶ್ರೀನಿವಾಸ್, ತುಮಕೂರು ಡೈರಿಗೆ ಬರುವ ಹಾಲಿನಲ್ಲಿ ಗುಬ್ಬಿ ತಾಲೂಕಿನ ಹಾಲಿನ ಪ್ರಮಾಣ ಹೆಚ್ಚಾಗಿದೆ. ಹೆಚ್ಚು ಹಾಲು ಉತ್ಪಾದಿಸುತ್ತಿರುವ ಸುಮಾರು 32 ಉಪಕೇಂದ್ರಗಳಲ್ಲಿ 9 ಕೇಂದ್ರಗಳಲ್ಲಿ ಮುಖ್ಯ ಡೈರಿಗಳಾಗಿ ಪರಿವರ್ತಿಸಲು ಅನುಮತಿ ಕೋರಿ 6 ತಿಂಗಳ ಹಿಂದೆಯೇ ಸಹಕಾರ ಇಲಾಖೆಗಳ ಸಹಾಯಕ ನಿಬಂಧಕರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಒಂದು ಡೈರಿ ಸ್ಥಾಪನೆಗೂ ಅನುಮತಿ ನೀಡಿಲ್ಲ ಎಂದು ದೂರಿದರು.
ಗುಬ್ಬಿ ತಾಲೂಕಿನ ಕಡಬ ಗ್ರಾಮಕ್ಕೆ ಸಂಬಂಧಪಡದ ವ್ಯಕ್ತಿಯೊಬ್ಬರು ನೀಡಿದ ತಕರಾರು ಅರ್ಜಿಯನ್ನು ಮುಂದಿಟ್ಟುಕೊಂಡು ಹಲವಾರು ಗ್ರಾಮಗಳ ಡೈರಿ ತೆರೆಯಲು ಅನುಮತಿ ನಿರಾಕರಿಸುವ ಕೆಲಸವನ್ನು ಎ.ಆರ್. ಮಾಡಿದ್ದಾರೆ. ನಿಯಮದ ಪ್ರಕಾರ ಖಾಸಗಿ ಡೈರಿಗೆ ಹಾಲು ಹಾಕುತ್ತಿರುವ ವ್ಯಕ್ತಿಯಿಂದ ತುಮುಲ್ ಡೈರಿ ನಿರ್ಮಾಣಕ್ಕೆ ಷೇರು ಸಂಗ್ರಹಿಸಲು ಅವಕಾಶವಿಲ್ಲ. ಆದರೆ ತುಮುಲ್ನ ಎಂ.ಡಿ ಮತ್ತು ಅಧಿಕಾರಿಗಳು ಯಾರದೋ ಮುಲಾಜಿಗೆ ಒಳಗಾದವರಂತೆ ಖಾಸಗಿ ಡೈರಿಗೆ ಹಾಲು ಹಾಕುವವರಿಂದಲೂ ಷೇರು ಸಂಗ್ರಹಿಸಿ ಎಂದು ಮೌಖಿಕವಾಗಿ ಹೇಳುತ್ತಾರೆ.
ಲಿಖಿತ ರೂಪದಲ್ಲಿ ಕೊಡಿ ಎಂದರೆ ನೀಡಲು ಹಿಂಜರಿಯುತ್ತಿದ್ದಾರೆ. ಇದರ ಹಿಂದೆ ಮೂರನೇ ವ್ಯಕ್ತಿಯ ಕೈವಾಡ ಇರುವುದು ಕಂಡು ಬರುತ್ತಿದೆ. ಎ.ಆರ್. ಅವರ ವರ್ತನೆ ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಡೈರಿಗಾಗಿ ಅರ್ಜಿ ಸಲ್ಲಿಸಿರುವ 32 ಗ್ರಾಮಗಳ ಜನರು ತಮ್ಮ ಎಮ್ಮೆ, ಹಸು, ಕರುಗಳೊಂದಿಗೆ ಎ.ಆರ್.ಕಚೇರಿ ಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ಭಾರತಿ ಶ್ರೀನಿವಾಸ್ ಎಚ್ಚರಿಸಿದರು.
ತುಮುಲ್ ಮತ್ತು ಖಾಸಗಿ ಡೈರಿಯವರ ನಡುವೆ ಒಳಒಪ್ಪಂದ ನಡೆದಿದೆಯೇ ಎಂಬ ಅನುಮಾನ ಮೂಡುತ್ತಿದೆ. ಮಾವಿನ ಹಳ್ಳಿಯ ವ್ಯಕ್ತಿ ಕಡಬದಲ್ಲಿ ಡೈರಿ ಮಾಡಲು ಆಕ್ಷೇಪ ಸಲ್ಲಿಸಿದರೆ ಒಪ್ಪಿಕೊಳ್ಳಲು ಸಾಧ್ಯವೇ? ಇದರ ಹಿಂದೆ ಇರುವವರು ಯಾರು ಎಂಬುದು ಜನತೆಗೆ ತಿಳಿಯಬೇಕು. ನಮಗೆ ಜನರು ಕೊಟ್ಟಿರುವ ಅಧಿಕಾರವನ್ನು ಬಳಕೆ ಮಾಡಿಕೊಳ್ಳಲು ಅಡ್ಡಿಪಡಿಸಬಾರದು ಎಂದು ತಾಕೀತು ಮಾಡಿದರು.
ಪ್ರತಿಭಟನೆಯಲ್ಲಿ ಕೋಡಿಯಾಲ ಮಹದೇವ್, ಮಳೆನಹಳ್ಳಿ ನಟರಾಜು, ಲಿಂಗಮನಹಳ್ಳಿ ಚೇತನ್, ಚೇಳೂರು ಸೋಮೇಶ್, ಕಡಬ ದರ್ಶನ್, ಯೋಗೀಶ್ಗೌಡ ಎಂ.ಹೆಚ್.ಪಟ್ನ, ಗುರುರೇಣುಕರಾಧ್ಯ, ಸಣ್ಣ ರಂಗಯ್ಯ ಹೂವಿನಕಟ್ಟೆ, ಯೋಗೀಶ್, ಫಣೀಂದ್ರ ಬಿದರೆ ಹಳ್ಳ ಕಾವಲ್, ಆರೀಫ್ ಸೋನಿ ಲಿಂಗಮನಹಳ್ಳಿ ಭಾಗವಹಿಸಿದ್ದರು.


