ವಿಜ್ಞಾನ, ತಂತ್ರಜ್ಞಾನದಲ್ಲಿ ನ್ಯೂಟನ್ನಿಂದ ಹಿಡಿದು ಇಲ್ಲಿಯವರೆಗೆ ಹಲವಾರು ಹೊಸ ಆವಿಷ್ಕಾರಗಳು ನಡೆದಿದ್ದು, ತಕ್ಷಣದಲ್ಲಿ ಅವರು ಸಮಸ್ಯೆಗಳಿಗೆ ಪರಿಹಾರ ಒದಗಿಸಿದರೂ, ದೀರ್ಘಕಾಲದಲ್ಲಿ ಜೀವ ವಿರೋಧಿಯಾಗಿ ಪರಿವರ್ತಿತವಾಗುವುದನ್ನು ನಾವು ಕಾಣುತಿದ್ದೇವೆ. ಹಾಗಾಗಿ ಕಣ್ಣಿಗೆ ಕಾಣದ ಹಾಗೂ ಕಾಣುವ ಜೀವಿಗಳೆರಡಕ್ಕೂ ಅನುಕೂಲವಾಗುವ ರೀತಿಯ ಸುಸ್ಥಿರ ಸಂಶೋಧನೆಗಳತ್ತ ನಾವೆಲ್ಲರೂ ಗಮನಹರಿಸಬೇಕಾಗಿದೆ ಎಂದು ಕರ್ನಾಟಕ ಸೈನ್ಸ್ ಅಂಡ್ ಟೆಕ್ನಾಲಜಿ ಅಕಾಡೆಮಿ ರಾಜ್ಯಾಧ್ಯಕ್ಷ ಡಾ.ಎ.ಹೆಚ್.ರಾಜಾಸಾಬ್ ಪ್ರತಿಪಾದಿಸಿದ್ದಾರೆ.
ತುಮಕೂರು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿಜ್ಞಾನ ವಿಭಾಗದಿಂದ, ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ್ದ ಒಂದು ದಿನ “ಸೈನ್ಸ್ ಅಂಡ್ ಸೊಸೈಟಿ ಫಾರ್ ಸಸ್ಟೇನಬಲ್ ಪ್ಯೂಚರ್” ಎಂಬ ವಿಷಯ ಕುರಿತ ರಾಷ್ಟಿçÃಯ ವಿಚಾರ ಸಂಕಿರಣದ ಪರಿಚಯ ಭಾಷಣ ಮಾಡಿದ ಅವರು, ಸ್ವಾತಂತ್ರ ನಂತರದಲ್ಲಿ ದೇಶದ 33 ಕೋಟಿ ಜನರಿಗೆ ಆಹಾರ ಒದಗಿಸಲು ಹಸಿರು ಕ್ರಾಂತಿಯನ್ನು ಅಳವಡಿಸಿಕೊಳ್ಳಲಾಯಿತು. ಇದರ ಪರಿಣಾಮವಾಗಿ ಭಾರತ ಆಹಾರ ಸ್ವಾವಲಂಬನೆ ಸಾಧಿಸಿದರೂ, ಅಂತರಜಲ ಬಳಕೆ, ಅತಿಯಾದ ರಸಾಯನಿಕ ಬಳಕೆ, ಹೈಬ್ರಿಡ್ ತಳಿಗಳು, ಕೀಟನಾಶಕಗಳ ಪರಿಣಾಮ ಪರಿಸರ ನಾಶವಾಗಿ, ಕುಡಿಯುವ ನೀರು ಸಹ ವಿಷಯುಕ್ತವಾಯಿತು. ಇದರಿಂದ ಹೊರಬರಬೇಕಾದರೆ ನಾವೆಲ್ಲರೂ ಪರಿಸ್ನೇಹಿ ಸಂಶೋಧನೆಯತ್ತ ಗಮನಹರಿಸಬೇಕಾದ ಅಗತ್ಯವಿದೆ. ಇದೊಂದು ಮುಗಿಯದ ಯುದ್ದ ಎಂದರು.
ಗಾಂಧೀಜಿ ಹೇಳಿದಂತೆ ಭೂಮಿ ನಮ್ಮ ಆಸೆಯನ್ನು ಪೂರೈಸಬಲ್ಲದೇ ಹೊರತು ದುರಾಸೆಯನ್ನಲ್ಲ. ಇದನ್ನು ನಾವೆಲ್ಲರೂ ಅರಿತು ನಡೆಯಬೇಕಿದೆ. ಬುದ್ದ ಹೇಳಿದಂತೆ ಯಾವುದಕ್ಕು ಆರಂಭ, ಅಂತ್ಯ ಎಂಬುದಿಲ್ಲ. ಅದೊಂದು ನಿರಂತರ ಪ್ರಕ್ರಿಯೆ. ಆದರೆ ಆತನನ್ನು ದೇವರ ಸ್ವರೂಪ ಕೊಟ್ಟು ಪೂಜೆಗೆ ಸಿಮೀತಗೊಳಿಸಿದ್ದೇವೆ. ಕೃತಕ ಬುದ್ದಿಮತ್ತೆಯಿಂದ ಬುದ್ದಿವಂತ ವಿದ್ಯಾರ್ಥಿ, ಅವರೆಜ್ಗೆ ಇಳಿದರೆ, ಸಾಮಾನ್ಯ ವಿದ್ಯಾರ್ಥಿ ಅದಕ್ಕಿಂತಲೂ ಕೆಳಮಟ್ಟಕ್ಕೆ ಕುಸಿಯುತ್ತಿದ್ದಾನೆ. ವಿದ್ಯಾರ್ಥಿಗಳ ಅಸೈನ್ಮೆಂಟ್ ಮತ್ತು ಸಂಶೋಧನಾ ಪ್ರಬಂಧಗಳಲ್ಲಿ ಯಾವುದು ನಕಲು ಮಾಡಿದ್ದು ಎಂದು ಕಂಡು ಹಿಡಿಯಲು ಹೊಸ ಸಂಶೋಧನೆಗೆ ಮುಂದಾಗುವಂತಹ ದುಸ್ಥಿತಿಗೆ ನಾವು ತಲುಪಿದ್ದೇವೆ ಎಂದು ಆಧುನಿಕ ಸಂಶೋಧನೆಗಳ ಅನುಕೂಲ, ಅನಾನುಕೂಲಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದರು.
ವಿಜ್ಞಾನ ಮತ್ತು ಸಮಾಜದ ಸುಸ್ಥಿರ ಅಭಿವೃದ್ದಿ ವಿಚಾರ ಸಂಕಿರಣ ಕುರಿತು ಹಿರಿಯ ವಿಜ್ಞಾನಿ ಡಾ.ಶೋಭಾ ದಿಸ್ಕೂಚಿ ಭಾಷಣ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ವಸಂತ.ಟಿ.ಡಿ ವಹಿಸಿದ್ದರು. ಕುವೆಂಪು ವಿವಿಯ ಕುಲಪತಿ ಪ್ರೊ. ಶರತ್ ಅನಂತಮೂರ್ತಿ, ಐಕ್ಯೂಎಸಿ ಸಂಯೋಜಕಿ ಡಾ.ಕೆ.ವಿ.ಅನುಸೂಯ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸಿಇಓ ಡಾ.ಆನಂದ.ಆರ್., ಸಂಘಟನಾ ಕಾರ್ಯದರ್ಶಿ ಡಾ.ಫಾತಿ ಮಥುಜಹಾರ್ ಜಬೀನ್, ವಿಚಾರ ಸಂಕಿರಣದ ಸಂಯೋಜಕ ಡಾ.ಯೋಗೀಶ್.ಎನ್., ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರ ಸಂಘದ ಕಾರ್ಯದರ್ಶಿ ಡಾ.ರೇಣುಕಾ ಪ್ರಸಾದ್ ಇದ್ದರು.


