ಕೆಪಿಸಿಸಿ ಕಾರ್ಯಾಲಯ ಕಾರ್ಯದರ್ಶಿ ನಾರಾಯಣ್, ಉಪಾಧ್ಯಕ್ಷ ಮುರಳೀಧರ ಹಾಲಪ್ಪ, ಪ್ರಧಾನ ಕಾರ್ಯದರ್ಶಿ ಬಸವರಾಜ್ ಹಾಗೂ ಕಾಂಗ್ರೆಸ್ ಮುಖಂಡರು ಸೋಮವಾರ ತುಮಕೂರಿನಲ್ಲಿಇ ಮಾಜಿ ಸಂಸದ ಜಿ.ಎಸ್.ಬಸವರಾಜು ಅವರನ್ನು ಭೇಟಿ ಮಾಡಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಜಿ.ಎಸ್.ಬಸವರಾಜು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಜೊತೆಯೂ ಫೋನ್ನಲ್ಲಿ ಮಾತನಾಡಿದರು. ಇದು ಜಿಲ್ಲೆಯ ರಾಜಕಾರಣದಲ್ಲಿ ಕೂತೂಹಲ ಮೂಡಿಸಿದೆ.
ತುಮಕೂರಿನ ಅಮರಜ್ಯೋತಿ ನಗರದ ಸಾಯಿಬಾಬಾ ಮಂದಿರದ ಕಚೇರಿಯಲ್ಲಿ ಮಾಜಿ ಸಂಸದ ಜಿ.ಎಸ್.ಬಸವರಾಜು ಅವರನ್ನು ಭೇಟಿ ಮಾಡಿದ ಕಾಂಗ್ರೆಸ್ ಮುಖಂಡರು, ‘ಈ ಭೇಟಿ ಕೇವಲ ಸೌಹಾರ್ದತೆಯ ಭೇಟಿ ಅಲ್ಲ’ ಎಂದು ಹೇಳಿರುವುದು ಜಿಲ್ಲೆಯ ರಾಜಕಾರಣದಲ್ಲಿ ಹೊಸ ಬೆಳವಣಿಗೆಗೆ ನಾಂದಿಯಾಗಲಿದೆಯೇ ಎಂಬ ಪ್ರಶ್ನೆ ಮೂಡಿಸಿದೆ.
21 ವರ್ಷಗಳ ದೀರ್ಘ ಕಾಲ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದ, ಕಾಂಗ್ರೆಸ್ ಪಕ್ಷದಿಂದ ಸಂಸದರೂ ಆಗಿದ್ದ ಜಿ.ಎಸ್.ಬಸವರಾಜು ಕೆಲ ವರ್ಷಗಳ ಹಿಂದೆ ಬಿಜೆಪಿ ಸೇರಿ ಸಂಸದರೂ ಆಗಿದ್ದರು. ರಾಜಕೀಯ ಮುತ್ಸದ್ದಿ ಜಿ.ಎಸ್.ಬಸವರಾಜು ಅವರನ್ನು ಭೇಟಿ ಮಾಡಿ ಜಿಲ್ಲೆಯ ಅಭಿವೃದ್ಧಿ ಸಂಬAಧ ವಿಚಾರಗಳನ್ನು ಮಾತನಾಡಿದೆವು. ಅವರೂ ಕಾಂಗ್ರೆಸ್ ಪಕ್ಷದಲ್ಲಿದ್ದಾಗಿನ ನೆನಪುಗಳು, ಕಾಂಗ್ರೆಸ್ ನಾಯಕರೊಂದಿಗಿನ ಒಡನಾಟವನ್ನು ಮೆಲುಕು ಹಾಕಿದರು ಎಂದು ಮುರಳೀಧರ ಹಾಲಪ್ಪ ಹೇಳಿದರು.
ವಿವಿಧೆಡೆ ಇದ್ದ ಜಿಲ್ಲಾ ಕಾಂಗ್ರೆಸ್ ಪಕ್ಷ ಕಚೇರಿಗಳ ಬಗ್ಗೆ ಮಾಹಿತಿ ಪಡೆದ ಜಿ.ಎಸ್.ಬಸವರಾಜು, ಕಾಂಗ್ರೆಸ್ ಮುಖಂಡರಿಗೆ ಸಾಯಿಬಾಬಾರ ಪ್ರಸಾದ ನೀಡಿದರು. ಈ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೆ ಫೋನ್ನಲ್ಲಿ ಗುಪ್ತ ಮಾತುಕತೆ ನಡೆಸಿದರು.
ತಾವು ಸಂಸದರಾಗಿದ್ದ ಅವಧಿಯಲ್ಲಿ ಜಿಲ್ಲೆಯಲ್ಲಿ ಆಗಿರುವ ಕಾರ್ಯಕ್ರಮಗಳು, ಪ್ರಸ್ತುತ ಜಿಲ್ಲೆಯಲ್ಲಿ ಅನುಷ್ಟಾನ ಆಗಬೇಕಾಗಿರುವ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಜಿ.ಎಸ್.ಬಸವರಾಜು ಅವರೊಂದಿಗೆ ಚರ್ಚೆ ಮಾಡಿದ್ದಾಗಿ ಹೇಳಿದರು.
ತುಮಕೂರು ಜಿಲ್ಲೆಯ ಕಾಂಗ್ರೆಸ್ ಮುಖಂಡರಾದ ರೇವಣ್ಣಸಿದ್ದಯ್ಯ, ಹನುಮಂತಯ್ಯ, ಸಿಮೆಂಟ್ ಮಂಜುನಾಥ್, ಮಹೇಶ್, ಮರಿಚೆನ್ನಮ್ಮ, ನಟರಾಜು, ಗೋವಿಂದೇಗೌಡ, ಸುಕನ್ಯ ಹಾಜರಿದ್ದರು.


