ಕಾಡು ಮತ್ತು ಮನುಷ್ಯನ ಸಂಬಂಧಗಳ ಬಣ್ಣಿಸುವ ಗೋವಿನ ಹಾಡು ಓದಿ, ಕೇಳಿ ಬೆಳೆದವರು ನಾವು. ಪಠ್ಯವಾಗಿಯೂ ಮತ್ತು ಕಾಡಿನ ಪರಿಚಯವಾಗಿಯೂ ಗೋವಿನ ಹಾಡು ಬೆಟ್ಟ, ಗುಡ್ಡ, ಹುಲ್ಲುಗಳನ್ನು ಪರಿಚಯಿಸಿದೆ. ಇಂತಹ ಪರಿಸ್ಥಿತಿಯಲ್ಲಿ ದನಕರು, ಮೇಕೆ, ಕುರಿಗಳನ್ನು ಕಾಡೊಳಗೆ ಬಿಡುವುದಿಲ್ಲ ಎಂದು ಹೇಳಿರುವ ಸಚಿವ ಈಶ್ವರ್ ಖಂಡ್ರೆಯವರ ನಿಲುವು ಖಂಡನೀಯ ಎಂದು ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾ ಸಭಾ ರಾಜ್ಯ ಉಪಾಧ್ಯಕ್ಷ ಉಜ್ಜಜ್ಜಿ ರಾಜಣ್ಣ ಹೇಳಿದ್ದಾರೆ.
ಅರಣ್ಯ ಪ್ರದೇಶಗಳನ್ನು ಭಾರತೀಯ ಪಶುಪಾಲನಾ ಕ್ಷೇತ್ರ ಇಂದಿಗೂ ಅವಲಂಭಿಸಿರುವುದು. ಕರ್ನಾಟಕದಲ್ಲಿ ಪಶುಪಾಲನಾ ಮಾರ್ಗಗಳನ್ನು ಅರಣ್ಯಗಳ ಮೂಲಕವಾಗಿಯೇ ಗುರುತಿಸಲ್ಪಡುವ ಜಾನಪದ ಭಾಷಾ ಸಾಹಿತ್ಯ ಬೆಳೆದಿದೆ. ಖಂಡ್ರೆಗೆ ಇಂತಹ ಜಾನುವಾರು ಸಾಕಾಣಿಕೆಯ ಜಾನಪದ ಸೊಬಗಿನ ಪರಿಚಯ ಇಲ್ಲದಿರಬಹುದು. ಹಾಗೆಂದು ಬದುಕಿನ ಮಾರ್ಗಗಳಿಗೆ ಬೇಲಿ ಹಾಕಲು ಸಚಿವರು ಹೊರಟಿರುವುದು ಆಕ್ಷೇಪಣೀಯ ಎಂದಿದ್ದಾರೆ.
ಗೋಪಾಲಕರಾದ ಪಶುಪಾಲಕ ಸಮುದಾಯ ರೈತರು ಮತ್ತು ಅರಣ್ಯದ ನಡುವಿನ ಸಂಬಂಧವನ್ನು ಸಚಿವ ಖಂಡ್ರೆಯವರ ತೀರ್ಮಾನ ಹತ್ತಿಕ್ಕುತ್ತದೆ. ಖಂಡ್ರೆಯ ಸೂಚನೆಯನ್ನು ಖಂಡ್ರಿಸಿ ನಾವೂ ಹೋರಾಟಕ್ಕೆ ಮುಂದಾಗೋಣ ಎಂದು ಮನವಿ ಮಾಡಿದ್ದಾರೆ.
ಜಾನುವಾರು ಸಾಕಾಣಿಕೆದಾರರು ಮತ್ತು ಕಾಡಿಗೂ ಇರುವ ಅವಿನಾಭಾವ ಸಂಬಂದಗಳು ನಾಡಿನ ನೆಲದಲ್ಲಿ ಕತನಗಳಾಗಿ ಬೆಳೆದಿವೆ. ಜುಂಜಪ್ಪನನಿಂದ ಹಿಡಿದು ಮಲೆಯಮಹದೇಶ್ವರರ ಕಾವ್ಯಗಳವರೆಗೆ ಅರಣ್ಯಗಳನ್ನು ಆಧರಿಸಿ ಜನಪದರು ಕಟ್ಟಿ ಹಾಡಿದ ಕತನಕಾವ್ಯಗಳು ನೂರಾರು. ಹುಲ್ಲು, ಸೊಪ್ಪು, ನೀರಿಗೆ ನೆರವಾದುದರ ಜೊತೆಗೆ ಹಾಡುಕಟ್ಟುವ ಭಾಷೆಯನ್ನೂ ಕಲಿಸಿಕೊಟ್ಟಿರುವಳು ಅಡವಿ ತಾಯಿ.
ಯಕ್ಕೆ, ಯಲಚಿ ಲೆಕ್ಕೆ ಗಿಡಗಳು, ಸೊಕ್ಕಿ ಬೆಳೆವಾ ಸೀಗೆ ಗಿಡಗಳು, ಉಕ್ಕಿ ಬೆಳೆವಾ ನೆಲ್ಲಿ ಗಿಡಗಳು, ಆಡು ಸೋಗೆಯು,
ಕಾಡು ನುಗ್ಗೆಯು, ಹೆಚ್ಚಿ ಬೆಳೆವಾ ಬಿಕ್ಕೆ ಗಿಡಗಳು ಇವುಗಳನ್ನೆಲ್ಲಾ ಉಣ್ಣಿಸದೆ ಜಾನುವಾರು ಸಾಕಾಣಿಕೆ ಮಾಡುವುದು ಅಸಾಧ್ಯ. ನಮ್ಮ ಬದುಕಿನ ಭಾಷಾ ಸೊಬಗನ್ನೇ ಹೀನಾಯಗೊಳಿಸುತ್ತದೆ ಸಚಿವರ ಸೂಚನೆ. ಖಂಡ್ರೆಯ ನಿರ್ಣಯ ಖಂಡನೀಯ ಎಂದು ಹೇಳಿದ್ದಾರೆ.


