ಇಂದಿನ ಯುವಕ ಯುವತಿಯರು ತಮ್ಮೆಲ್ಲ ಸಮಯವನ್ನು ಮೊಬೈಲ್ನಲ್ಲಿ ಕಳೆಯುತ್ತಿದ್ದಾರೆ. ಮೊಬೈಲನ್ನು ಅಗತ್ಯಕ್ಕೆ ತಕ್ಕಷ್ಟು ಮಾತ್ರ ಬಳಸಿಕೊಂಡರೆ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸನ್ನು ಕಾಣಬಹುದು. ಮೊಬೈಲ್ ಬಿಡಿ ಪುಸ್ತಕ ಹಿಡಿ ಅಭಿಯಾನ ಬೆಳೆಯಬೇಕು ಎಂದು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪ್ರಾಂಶುಪಾಲ ಡಾ. ದಾಕ್ಷಾಯಿಣಿ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜು, ವಿಜ್ಞಾನ ಕಾಲೇಜು ಸ್ನಾತಕೋತರ ಮಹಿಳಾ ವಿದ್ಯಾರ್ಥಿನಿಲಯ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಮತ್ತು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಹಾಸ್ಟೆಲ್ನಲ್ಲಿರುವ ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡದೆ ತಮ್ಮ ವಿದ್ಯಾಭ್ಯಾಸದ ಕಡೆ ಗಮನ ಹರಿಸಿದರೆ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಯಶಸ್ಸನ್ನು ಕಾಣಬಹುದು ಎಂದರು.
ದೂರದ ಊರಿಂದ ಬಂದಿರುವ ವಿದ್ಯಾರ್ಥಿಗಳಿಗೆ ಒಂದು ನೆಲೆಯಾಗಿರುವ ಹಾಸ್ಟೆಲ್ ವಿದ್ಯಾರ್ಥಿಗಳ ಜೀವನಕ್ಕೆ ಒಂದು ಅಡಿಪಾಯವಾಗಿದೆ. ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಹಾಸ್ಟೆಲ್ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್. ಶ್ರೀನಿವಾಸ್ ಮಾತನಾಡಿ, ಹಾಸ್ಟೆಲ್ನಲ್ಲಿ ಜೀವನದ ಅನುಭವವನ್ನು ಕಲಿಯುವುದರ ಜೊತೆಗೆ ಸಂಬಂಧಗಳು ಎಷ್ಟು ಮುಖ್ಯ ಎಂಬುದು ಅರ್ಥವಾಗುತ್ತದೆ. ಜೀವನದಲ್ಲಿ ಕಷ್ಟಪಡದಿದ್ದರೆ ಯಾವ ಗುರಿಯನ್ನು ಕೂಡ ತಲುಪಲು ಸಾಧ್ಯವಿಲ್ಲ ಎಂದರು.
ಅಂತಿಮ ವರ್ಷದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದವರನ್ನು ಗೌರವಿಸಲಾಯಿತು. ಅಧ್ಯಾಪಕರಾದ ಪ್ರೊ. ಬಿ. ಕರಿಯಣ್ಣ, ಡಾ. ಇ. ವನಜಾಕ್ಷಿ, ಡಾ. ಶೋಭಾ ಸಿ., ಡಾ. ಸುಮಾದೇವಿ ಎಸ್., ಡಾ. ಚೇತನ್ ಪ್ರತಾಪ್ ಇದ್ದರು.


