ರಾಜ್ಯ ಬಿಜೆಪಿ ನಾಯಕರ ಕಾರ್ಯವೈಖರಿಯ ಬಗ್ಗೆ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಕೆಂಡಾಮಂಡಲರಾಗಿದ್ದಾರೆ. ಅಮಿತ್ ಶಾ ಅವರ ಆಕ್ರೋಶಕ್ಕೆ ಪಕ್ಷದ ಅಧ್ಯಕ್ಷ ವಿಜಯೇಂದ್ರ ತತ್ತರಿಸಿದ್ದಾರೆ.
ಖಾಸಗಿ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಳ್ಳಲು ಕಳೆದ ರಾತ್ರಿ ಬೆಂಗಳೂರಿಗೆ ಆಗಮಿಸಿದ ಅಮಿತ್ ಶಾ ಅವರನ್ನು ರಾಜ್ಯದ ಬಿಜೆಪಿ ಪ್ರಮುಖ ನಾಯಕರು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ರಾಜ್ಯ ಬಿಜೆಪಿಯ ವಿದ್ಯಮಾನಗಳ ಕುರಿತಂತೆ ತಮ್ಮದೇ ಆದ ವರದಿಯೊಂದಿಗೆ ಆಗಮಿಸಿದ್ದ ಅಮಿತ್ ಶಾ ಅವರು ಪಕ್ಷದ ಅಧ್ಯಕ್ಷ ವಿಜಯೇಂದ್ರ ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ.
ಒಂದು ಹಂತದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕರೆಯಿಸಿಕೊಂಡು ಮಾತನಾಡಿದ ಅಮಿತ್ ಶಾ ಪಕ್ಷ ಸಂಘಟನೆ ವಿಷಯದಲ್ಲಿ ನೀವು ಹೇಳಿದಂತೆ ಕೇಳಿದರು ಕೂಡ ರಾಜ್ಯದಲ್ಲಿ ಯಾಕೆ ಪಕ್ಷ ಪ್ರಬಲವಾಗುತ್ತಿಲ್ಲ ಎಂದು ಪ್ರಶ್ನಿಸಿರುವುದಾಗಿ ಗೊತ್ತಾಗಿದೆ.
ವಿಜಯೇಂದ್ರ ಕಾರ್ಯವೈಖರಿ ತಮಗೆ ಸಮಾಧಾನ ತಂದಿಲ್ಲ. ನೀವು ಹೇಳಿದಂತೆ ಅವರಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡಿ ಸ್ವಾತಂತ್ರ್ಯವನ್ನು ಕೂಡ ಕೊಡಲಾಗಿತ್ತು. ಆದರೆ ಅವರು ನಾಯಕತ್ವದ ನೀರಿಕ್ಷೆಗೆ ತಕ್ಕಂತೆ ಕೆಲಸ ಮಾಡಿಲ್ಲ ಹಿರಿಯ ನಾಯಕರು ಒಟ್ಟಿಗೆ ಕರೆದುಕೊಂಡು ಹೋಗುವಂತೆ ಸೂಚನೆ ನೀಡಿದ್ದರೂ ಕೂಡ ಅದನ್ನು ಪಾಲನೆ ಮಾಡಿಲ್ಲ. ಯಾವುದೇ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಮ್ಮ ಪಾಡಿಗೆ ತಾವು ಹೋಗುತ್ತಿರುವ ಕಾರಣಕ್ಕೆ ರಾಜ್ಯದಲ್ಲಿ ಪಕ್ಷದ ಯಾವುದೇ ಕಾರ್ಯಕ್ರಮಗಳು ಯಶಸ್ವಿಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವುದಾಗಿ ಮೂಲಗಳು ತಿಳಿಸಿವೆ.
ಹಿರಿಯ ನಾಯಕರೊಂದಿಗೆ ಸಮನ್ವಯ ಸಾಧಿಸಿ ಎಲ್ಲರ ಜೊತೆ ಚರ್ಚೆ ಮಾಡಿ ಪರಸ್ಪರ ವಿಶ್ವಾಸದೊಂದಿಗೆ ಸಂಘಟನೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ರೂಪಿಸಲು ಹೈಕಮಾಂಡ್ ಹಲವು ಬಾರಿ ಸೂಚನೆ ನೀಡಿದರು ಕೂಡ ವಿಜಯೇಂದ್ರ ಕೇಳುತ್ತಿಲ್ಲ. ಹೀಗಾಗಿ ಅವರಿಗೆ ತಿಳುವಳಿಕೆ ನೀಡಿ ಇಲ್ಲವೇ ಜವಾಬ್ದಾರಿಯನ್ನು ಬೇರೆಯವರಿಗೆ ಕೊಡಬೇಕಾದೀತು ಎಂಬ ಎಚ್ಚರಿಕೆ ನೀಡಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.
ಇದೆ ವೇಳೆ ಎನ್ ಡಿಎ ಮೈತ್ರಿಕೂಟದ ಪಾಲುದಾರವಾಗಿರುವ ಜೆಡಿಎಸ್ ಅನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಹಾಗೂ ಅವರ ಜೊತೆ ಯಾವುದೇ ಸಮನ್ವಯತೆ ಪ್ರಯತ್ನ ನಡೆಸದ ವಿಜಯೇಂದ್ರ ನಡವಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅಮಿತ್ ಶಾ ಅವರು ರಾಷ್ಟ್ರೀಯ ಮಟ್ಟದಲ್ಲಿ ನಾಯಕತ್ವ ಮಾಡಿಕೊಂಡಿರುವ ಹೊಂದಾಣಿಕೆಯನ್ನು ರಾಜ್ಯ ನಾಯಕತ್ವ ಗೌರವಿಸುವುದಿಲ್ಲ ಎಂದು ಹೇಗೆ ಎಂದು ಪ್ರಶ್ನಿಸಿರುವುದಾಗಿ ತಿಳಿದುಬಂದಿದೆ.
ಈ ವೇಳೆ ಮಾತನಾಡಿದ ವಿಜಯೇಂದ್ರ ರಾಜ್ಯದಲ್ಲಿ ಜೆಡಿಎಸ್ ಹೊರತುಪಡಿಸಿ ಬಿಜೆಪಿಗೆ ಉತ್ತಮವಾದ ಭವಿಷ್ಯವಿದೆ. ಇತ್ತೀಚೆಗೆ ನಡೆದ ಹಲವು ಸಮೀಕ್ಷೆಗಳು ಜೆಡಿಎಸ್ ಸಖ್ಯವಿಲ್ಲದೆ ಬಿಜೆಪಿ ಚುನಾವಣೆ ಎದುರಿಸಿದರೆ ಭಾರಿ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ ಎಂದು ತಿಳಿಸಿವೆ. ಅಲ್ಲದೆ ಆ ಪಕ್ಷದ ನಾಯಕತ್ವ ಯಜಮಾನಿಕೆ ಧೋರಣೆ ಹೊಂದಿದೆ. ಹೀಗಾಗಿ ನಾವು ಮುಂಬರುವ ಎಲ್ಲ ಚುನಾವಣೆಗಳನ್ನು ಏಕಾಂಗಿಯಾಗಿ ಎದುರಿಸಿದರೆ ಸೂಕ್ತ ಎಂದು ವಿವರಿಸಿದರು ಎನ್ನಲಾಗಿದೆ.
ಇದರಿಂದ ಮತ್ತಷ್ಟು ಆಕ್ರೋಶಗೊಂಡ ಅಮಿತ್ ಶಾ ಅವರು ಕಾಲ್ತುಳಿತ ಪ್ರಕರಣವನ್ನು ರಾಜ್ಯ ಸರ್ಕಾರದ ವಿರುದ್ಧದ ಪ್ರಮುಖ ಅಸ್ತ್ರವಾಗಿ ಬಳಸಲು ಬಿಜೆಪಿ ವಿಫಲವಾಗಿದೆ. ಜೆಡಿಎಸ್ ನಾಯಕ ಕುಮಾರಸ್ವಾಮಿ ಇದರ ವಿರುದ್ಧ ಮಾಡಿದ ಆರೋಪಗಳು ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತು ಆದರೆ ರಾಜ್ಯ ಬಿಜೆಪಿ ಮಾಡಿದ ಯಾವುದೇ ಹೋರಾಟ ಗಮನ ಸೆಳೆಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


