ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ 75ನೇ ಹುಟ್ಟುಹಬ್ಬದ ಅಮೃತ ಮಹೋತ್ಸವದ ಸ್ಮರಣಾರ್ಥ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ ಹಾಗೂ ವೃಕ್ಷಮಿತ್ರ ಸಂಸ್ಥೆಯಿಂದ ಶುಕ್ರವಾರ ತುಮಕೂರು ತಾಲೂಕಿನ ಬಿದರೆಕಟ್ಟೆಯ ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸ್ನಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು.
ಕಾಲೇಜು ವಿದ್ಯಾರ್ಥಿಗಳೊಂದಿಗೆ ಸೇರಿ ಗಿಡ ನೆಟ್ಟ ಮುಖಂಡರು ಸಚಿವ ಕೆ.ಎನ್.ರಾಜಣ್ಣ ಅವರು ಜಿಲ್ಲೆಗೆ ಕೊಟ್ಟ ಕೊಡುಗೆ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಒಕ್ಕೂಟದ ಅಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ವಿದ್ಯಾರ್ಥಿಗಳೊಂದಿಗೆ ಗಿಡನೆಡುವ ಮೂಲಕ ಅವರಲ್ಲಿ ಪರಿಸರ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿದೆ. ಹಸಿರೇ ಉಸಿರು, ಹಸಿರಿಲ್ಲದೆ ಉಸಿರಿಲ್ಲ ಎನ್ನವಂತೆ ಉಸಿರಾಡುವ ಆಮ್ಲಜನಕ ಪಡೆಯಲು ಗಿಡಮರ ಬೆಳೆಸಿ ಪರಿಸರ ಸಮತೋಲನ ಕಾಪಾಡಬೇಕು ಎಂದು ಹೇಳಿದರು.
ಹಸಿರು ನಾಶವಾಗಿ ಪಕ್ಷಿ ಸಂಕುಲ ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ಪಕ್ಷಿಗಳಿಗೆ ಸಹಾಯವಾಗಲೆಂದು ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ನೆಡಲಾಗಿದೆ. ಸಚಿವ ಕೆ.ಎನ್.ರಾಜಣ್ಣನವರ ನೆನಪಿನಲ್ಲಿ ನೆಟ್ಟ ಗಿಡಗಳು ಹೆಮ್ಮರವಾಗಿ ಬೆಳೆಯುತ್ತವೆ. ಆ ಮರಗಳು ವಿದ್ಯಾರ್ಥಿಗಳಿಗೆ ಕೆ.ಎನ್. ರಾಜಣ್ಣನವರ ಸಾಧನೆ, ಅವರ ನಾಯಕತ್ವ ಗುಣ ಪ್ರೇರಣೆಯಾಗಲಿ ಎಂದು ಆಶಿಸಿದರು.
ವೃಕ್ಷಮಿತ್ರ ಸಂಸ್ಥೆಯ ಪ್ರೊ.ಸಿದ್ಧಪ್ಪ ಮಾತನಾಡಿ, ಸಚಿವಕೆ.ಎನ್.ರಾಜಣ್ಣನವರ ಜನ್ಮದಿನದ ನೆನಪಿನಲ್ಲಿ ವಿದ್ಯಾರ್ಥಿಳೊಂದಿಗೆ 75 ಗಿಡಗಳನ್ನು ನೆಡಲಾಗಿದೆ. ಇಂತಹ ವಿಶೇಷ ದಿನಗಳಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವ ಹವ್ಯಾಸ ಎಲ್ಲರಲ್ಲೂ ಬೆಳೆಯಬೇಕು ಎಂದರು.
ಸುಮಾರು 2 ಎಕರೆ 36 ಗುಂಟೆ ವಿಸ್ತೀರ್ಣದ ಜ್ಞಾನಸಿರಿ ಕ್ಯಾಂಪಸ್ನಲ್ಲಿ ಒಂದೂವರೆ ಲಕ್ಷ ಗಿಡಗಳನ್ನು ನೆಡಲು ಗುರಿ ಹೊಂದಲಾಗಿದೆ. ಈಗ ಹತ್ತು ಸಾವಿರ ಸಸಿ ನೆಟ್ಟು ಬೆಳಸಲಾಗಿದೆ. ದಾನಿಗಳು ಗಿಡಗಳನ್ನು ನೀಡಿದರೆ ಮತ್ತಷ್ಟು ಗಿಡಗಳನ್ನು ನೆಟ್ಟು ಕ್ಯಾಂಪಸ್ ಅನ್ನು ಹಸಿರು ವನವಾಗಿ ಅಭಿವೃದ್ಧಿಪಡಿಸಬಹುದು ಎಂದು ಹೇಳಿದರು.


