ಸುದೀರ್ಘ 18 ವರ್ಷಗಳ ಕಾಯುವಿಕೆಯ ನಂತರ ಐಪಿಎಲ್ ಟ್ರೋಫಿ ಗೆಲ್ಲುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಂಭ್ರಮಾಚರಣೆ ಶೋಕಾಚರಣೆಯಾಗಿ ಪರಿಣಮಿಸಿದೆ. ಆರ್ಸಿಬಿ ಕಪ್ ಗೆದ್ದು ಬೆಂಗಳೂರಿಗೆ ಆಗಮಿಸಿದ ವೇಳೆ ಆಯೋಜಿಸಿದ್ದ ವಿಜಯೋತ್ಸವದ ವೀಕ್ಷಣೆಗೆ ಬಂದಿದ್ದವರು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಏಕಾಏಕಿ ಒಳಗೆ ನುಗ್ಗಲು ಪ್ರಯತ್ನಿಸಿ ಉಂಟಾದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟಿದ್ದಾರೆ.
50ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ಅವರನ್ನು ಬೌರಿಂಗ್ ಮತ್ತು ವೈದೇಹಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದರಲ್ಲಿ ಏಳು ಜನರ ಸ್ಥಿತಿ ಗಂಭೀರವಾಗಿದೆ. ಎರಡು ಆಸ್ಪತ್ರೆಗಳ ಬಳಿಯಲ್ಲಿ ಮೃತರ ಕುಟುಂಬಗಳ ಆಕ್ರಂದನ ಮತ್ತು ಗಾಯಗೊಂಡವರು ಹಾಗೂ ಅವರ ಕುಟುಂಬ ಸದಸ್ಯರ ರೋಧನ ಮುಗಿಲು ಮುಟ್ಟಿತ್ತು. ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರು ಹರಸಾಹಸಪಡುತ್ತಿದ್ದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಚರಣೆ ವಿಚಾರ ಏಕಾಏಕಿ ನಿರ್ಧಾರವಾಗಿದೆ. ಯಾವುದೇ ಪೂರ್ವ ತಯಾರಿ ಇಲ್ಲದೆ ಕೈಗೊಂಡ ನಿರ್ಧಾರದಿಂದಾಗಿ ಇಂತಹ ಅವಘಡ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಕಪ್ ಗೆದ್ದು ಬೆಂಗಳೂರಿಗೆ ಹಿಂತಿರುಗುವ ಆಟಗಾರರನ್ನು ವಿಮಾನ ನಿಲ್ದಾಣದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಮಾಡುವ ಚರ್ಚೆ ನಡೆದಿತ್ತು ಆದರೆ ಇದಕ್ಕೆ ಭದ್ರತೆ ಅಡ್ಡಿಯಾಗಲಿದೆ ಎಂದು ಪೊಲೀಸರು ಹೇಳಿದ ಹಿನ್ನೆಲೆಯಲ್ಲಿ ಇದನ್ನು ರದ್ದುಪಡಿಸಲಾಯಿತು.
ಕಾಲ್ತುಳಿತ ಸಂಭವಿಸಿದ ಸುದ್ದಿ ತಿಳಿಯುತ್ತಿದ್ದಂತೆ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಜಮಾಯಿಸಿದ್ದ ಜನತೆ ತಮ್ಮ ಮನೆಗಳಿಗೆ ತೆರಳಲು ಮೆಟ್ರೋ ನಿಲ್ದಾಣದತ್ತ ದಾಪುಗಾಲಿಟ್ಟರು. ಇದರಿಂದ ಅಲ್ಲಿಯೂ ಕಾಲ್ತುಳಿತ ಉಂಟಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಮಾಹಿತಿ ರವಾನಿಸಿದರು. ಕೂಡಲೇ ಮೆಟ್ರೋ ಆಡಳಿತ ಮಂಡಳಿ ವಿಧಾನಸೌಧ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ ಪ್ರವೇಶಿಸುವ ದ್ವಾರಗಳನ್ನು ಬಂದ್ ಮಾಡಿತು ಅಲ್ಲಿ ಯಾವುದೇ ಮೆಟ್ರೋ ರೈಲು ನಿಲ್ಲದಂತೆ ಸೂಚಿಸಿತು.
ಮೃತರ ವಾರಸುದಾರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.