ಮಾದಿಗ ಅರಸ ಕುರಂಗರಾಯ ನ ಕುರಿತಾದ ಅಧ್ಯಯನ 2022 ರಲ್ಲಿ #ಅರಸುಕುರನ್ಗರಾಯ ಹೆಸರಿನ ಕೃತಿ ಪ್ರಕಟಿಸಿದ್ದೆ.
ಮಾದಿಗ ಸಮುದಾಯದವನು ರಾಜನಾಗಿದ್ದನೆ ? ಎಂಬ ಪ್ರಶ್ನೆಯ ಮೂಲಕ ಈ ಅಧ್ಯಯನ ಕೈಗೊಂಡಿದ್ದೆ. ಪ್ಲೀಟ್ ತನ್ನ ‘ಕರ್ನಾಟಕ ಮೊದಲ ರಾಜಮನೆತನಗಳು’ ಕೃತಿಯಲ್ಲಿ ಕರ್ನಾಟಕದ ಮೊದಲ ರಾಜರುಗಳು ಮಾದಿಗರಾಗಿದ್ದರು ಎಂಬ ವಿವರಗಳು ಆಶ್ಚರ್ಯಹುಟ್ಟಿಸಿದ್ದವು.
ಈ ಕೌತುಕದ ಭಾಗವಾಗಿ ಅಧ್ಯಯನ ಮುಗಿಸಿ ಪ್ರಕಟಿಸಿದೆ. ಹೆಚ್ಚು ಮನ್ನಣೆಯೂ ಗಳಿಸಿತ್ತು.

ಈಗ ಯಾಕೆ ಮುಖ್ಯವಾಗಿದೆ ಎಂದರೆ ಈ ಅಧ್ಯಯನ ಮುಗಿದ ಮೇಲೆ ಸಹಕರಿಸಿದ ಕುರಂಕೋಟೆಯ ಗ್ಯಾಂಗ್ಮನ್ ಸಿದ್ದಯ್ಯ ಅವರಿಗೆ ಕುರನ್ಗರಾಯ ಕೃತಿ ಕೊಟ್ಟಿದ್ದೆ. ಆವತ್ತೇ ಬುಕ್ ಓದಿ ಬೆಳಿಗ್ಗೆಯೇ. ನನ್ನ ಹತ್ತಿರ ಬಂದ ಅವರು ಕುರನ್ಗರಾಯ ನ ಕಾಲದ ಉಂಗುರವನ್ನು ಮತ್ತು ಹಳೆಯ ನಾಣ್ಯಗಳನ್ನು ತಂದು ತೋರಿಸಿ “ನೀವೇ ಇಟ್ಟುಕೊಳ್ಳಿ” ಎಂದು ಕೊಡಲು ಬಂದರು. ನನಗೆ ಮನಸು ಒಪ್ಪದೆ “ಇದರ ಒಡೆಯರು ನೀವು. ನಿಮ್ಮ ಬಳಿಯೇ ಇರಲಿ” ಎಂದು ಬಲವಂತವಾಗಿ ಹಿಂದಿರುಗಿಸಿದ್ದೆ.
ಇದಾಗಿ ಎರಡ್ಮೂರು ವರ್ಷ ಮುಗಿದು ಮೊನ್ನೆ ಅಚಾನ್ನಕ್ಕಾಗಿ ಕುರಂಕೋಟೆಗೆ ಹೋಗಿದ್ದಾಗ ಆ ಹಿರಿಯ ಜೀವ ಆ ಉಂಗುರವನ್ನು ನನ್ನ ಕೈಗಿತ್ತು ‘ನಿಮ್ಮ ಬಳಿ ಇದ್ದರೆ ಇದು ಉಪಯೋಗಕ್ಕೆ ಬರುತ್ತೆ, ಯಾರಿಗಾದರೂ ನೀವು ತೋರಿಸಬಹುದು. ಮತ್ತೆ ಮತ್ತೆ ಇಲ್ಲಿಗೆ ಬರಬೇಕಿಲ್ಲ. ತಗೊಳ್ಳಿ’ ಎಂದು ಪ್ರೀತಿಯಿಂದ ಕೊಟ್ಟರು.

ಈ ಉಂಗುರ ಚಿನ್ನದ್ದು ಏನಲ್ಲಾ. ಆದರೆ ಅದಕ್ಕೂ ಮಿಗಿಲಾದ ಬೆಲೆಯುಳ್ಳದ್ದು.
ಮಾದಿಗರಾಜ ಕುರನ್ಗರಾಯ ಇರಲಿಲ್ಲ. ಇದ್ದರೂ ಅವನ ಕಾಲ ಮಧುಗಿರಿ ಮಹಾನಾಡ ಪ್ರಭುಗಳ ಕಾಲ ಎಂದು ತಪ್ಪು ತಪ್ಪಾಗಿ ಅರ್ಥೈಸುವವರಿಗೆ ಈ ಉಂಗುರ ಕಾಲದ ಸಾಕ್ಷಿಯನ್ನು ಒದಗಿಸಲಿದೆ.
ಅಲ್ಲದೇ ಕಳೆದ ವರ್ಷದ ಹಿಂದೆ ಸಂಗಾತಿ ಕಾಂತರಾಜು ಗುಪ್ಪಟ್ಣ ಕುರನ್ಗರಾಯ ನ ಬಲಗೈ ಬಂಟ ಬೆನಕ ಭೈರಪ್ಪನ ಇಬ್ಬಾಯಿ ಖಡ್ಗವನ್ನು ಶೋಧಿಸಿದ್ದರು. ಅದರಲ್ಲಿ ಕುರನ್ಗರಾಯನ ಕಾಲ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.. ಬೇಕಿದ್ದವರು ಈ ಎರಡನ್ನೂ ಪರಾಮರ್ಶಿಸಬಹುದು..
ಆ.. ನಾನು ಈ ಅಧ್ಯಯನ ಮಾಡಿ ಕೊನೆಗೊಳಿಸಿಕೊಂಡಿರುವೆ. ಅದು ನನ್ನ ಹಕ್ಕುದಾರಿಕೆಯಲ್ಲ. ನಾನು ವಾರಸುದಾರನಲ್ಲ. ಯಾರು ಬೇಕಾದರೂ ಅಧ್ಯಯನ ಮುಂದುವರಿಸಬಹುದು..
ಇನ್ನೊಂದು ವಿಷಯವೆಂದರೆ ಈ ಕುರನ್ಗರಾಯನ ಅಧ್ಯಯನವನ್ನು ನಾನು ಮುಗಿಸಿ ಕೈ ಬಿಟ್ಟು ಮೂರು ವರುಷವಾಯ್ತು..
ಆದರೆ ಮಾದಿಗರೇತರ ಸಮುದಾಯದ ಹೊಸ ಹುಡುಗರು ಆ ಅಧ್ಯಯನವನ್ನು ಮುಂದುವರಿಸುತ್ತಿದ್ದಾರೆ.. ಅವರ ಅಧ್ಯಯನದ ವಿವರಗಳನ್ನು ಓದಿ ರೋಮಾಂಚನಗೊಂಡಿರುವೆ. ಅವರ ಕೃತಿ ಸದ್ಯದಲ್ಲೇ ಪ್ರಕಟವಾಗಲಿದೆ. ಪ್ರಕಟವಾದರೆ ಇನ್ನಷ್ಟು ಖಚಿತ ಮತ್ತು ವಿಸ್ತಾರವಾಗಲಿದೆ.. ಅವರ ಅಧ್ಯಯನಕ್ಕೆ ಶುಭವಾಗಲಿ..
ಲೇಖಕರು:ಡಾ.ರವಿಕುಮಾರ್ ನಿ.ಹ


