ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಜಾಲ್ದರೆ ಪಾಳ್ಯ ಎಂಬ ಸುಂದರ ತಾಣದಲ್ಲಿ ಬೀಕರ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದರೂ ಯಾರೂ ಕೇಳೋರು ಹೇಳೋರು ಇಲ್ಲದಂತಾಗಿದೆ ಎಂದು ಸಾಮಾಜಿಕ ಹೋರಾಟಗಾರ ಜಿ.ಕೆ.ನಾಗಣ್ಣ ತಿಳಿಸಿದ್ದಾರೆ.
ನನ್ನ ಹುಟ್ಟೂರಿನಿಂದ ಕೇವಲ ನಾಲ್ಕು ಕಿಲೋಮೀಟರ್ ಅಂತರದಲ್ಲಿ ಇಂತಹದೊಂದು ಪ್ರಾಕೃತಿಕ ಸೊಬಗಿನ ಊರಿದೆ ಎನ್ನುವುದನ್ನ ನಾನು ನೋಡಿಯೇ ಇರಲಿಲ್ಲ ನಮ್ಮ ಆಪ್ತರಾದ ಶಿವಲಿಂಗಯ್ಯ ಅವರ ಜೊತೆಯಲ್ಲಿ ಜಾಲ್ದರೆ ಪಾಳ್ಯಕ್ಕೆ ಹೋಗಿದ್ದೆ. ಸುಡು ಬಿಸಿಲಿನ ಮಾರ್ಚ ಬೇಸಿಗೆಯಲ್ಲಿಯೇ ತುಂಬಾ ಅತ್ಯದ್ಭುತವಾಗಿರುವ ಈ ಜಾಗ ಮಳೆಗಾಲದಲ್ಲಿ ಇನ್ನೆಷ್ಟು ರಮ್ಯವಾಗಿರಬೇಕು ಮನಸ್ಸಿಗೆ ಆನಂದವಾಯಿತು ಎಂದು ಹೇಳಿದ್ದಾರೆ.
ಈ ಪಾಳ್ಯದಲ್ಲಿ ಬಹುಕಾಲದ ನಿವಾಸಿ ಕೊರಮ ಜನಾಂಗದ ತಾಯಿಯ ಜೊತೆಗೆ ಮಾತಿಗೆ ಕುಳಿತು ನೀವೆ ಅದೃಷ್ಟವಂತರು ಬೆಟ್ಟ,ಗುಡ್ಡ , ತೊರೆ , ಗಿಡ ಗೆಂಟೆ ಗಳ ನಡುವೆ ಬದುಕುತ್ತಿದ್ದೀರ ಎಂದು ಮಾತಿಗಿಳಿದೆ. ಇನ್ನೇನು ಸಮಯ ಸಂಜೆ 6:30 ಅನ್ನಿಸುತ್ತೆ ಭಯಾನಕ ಶಬ್ದ ಕೇಳಿಸಿತು. ನಾವು ಕುಳಿದ ಜಾಗ ನಡುಗಿತು ಎಂದು ಜಾಲ್ದರೆ ಪಾಳ್ಯದ ಕಲ್ಲುಗಣಿಗಾರಿಕೆಯ ಕರಾಳ ಮುಖ ಇದು ಎಂದು ಹೇಳಿದ್ದಾರೆ.
ತೈವಾನ್ ನಲ್ಲಿ ಆಗಿದ್ದ ಭೂಕಂಪ ಇಲ್ಲಿಯೂ ಆಗಿಬಿಟ್ಟಿತ್ತೋ ಎಂದು ಎದೆನಡುಗಿತು. ಜೀವ ಜಲ್ ಎಂದಿತು. ಗಾಬರಿಯಾದ ನನಗೆ ಕೊರಮ ಜನಾಂಗದ ತಾಯಿ ಕಲ್ಲು ಕ್ವಾರೆಯವರು ಡೈನಾಮೆಂಟ್ ಹಾಕವರೆ ಯಪ್ಪ ದಿನಾ ಇಷ್ಟೋತ್ತಿಗೆ ಹಾಕ್ತಾರೆ. ನಮ್ಮ ಮನೆಯಲ್ಲಾ ಸೀಳ್ ಬುಟ್ಟವೆ ಯಪ್ಪಾ ಯಾರಿಗೇಳನಾ ನಾವು ಬಡವರು ಎಂದು ಅಸಹಾಯಕತೆ ತೊಡಿಕೊಂಡರು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕಲ್ಲು ಗಣಿಗಾರಿಕೆಯ ಮಾಪಿಯಾ ಸರ್ಕಾರದವರು ಕಲ್ಲು ಗಣಿಗಾರಿಕೆ ಮಾಡುವ ಮಾಪಿಯಾದವರ ಪರವಾಗಿಯೇ ಕಾನೂನು ರೂಪಿಸುತ್ತಿರುವುದು ನನಗೆ ಚನ್ನಾಗಿ ಗೊತ್ತಿರುವುದರಿಂದ ಈ ಬಗ್ಗೆ ಹೆಚ್ಚು ಮಾತನಾಡಲಿಲ್ಲ. ಸರಿ ಅಮ್ಮ ಮತ್ತೆ ಇನ್ನೊಂದು ಸಲ ಬರುತ್ತೇವೆಂದು ಹೇಳಿ ಹೊರಟೆವು. ಇಡೀ ಜಾಲ್ದರೆ ಪಾಳ್ಯದ ಸುತ್ತಾ ಮಂಜು ಕವಿದಂತಹ ವಾತಾವರಣ ಸೃಷ್ಟಿಯಾಗಿತ್ತು. ದಟ್ಟವಾದ ಹೊಗೆ ಮದ್ದು ಗುಂಡಿನ ವಾಸನೆ ಹಬ್ಬಿತ್ತು. ಪ್ರಕೃತಿಗೆ ಮನುಷ್ಯ ಅನಿವಾರ್ಯ ಅಲ್ಲ. ಮನುಷ್ಯ ನಿಗೆ ಪ್ರಕೃತಿ ಅನಿವಾರ್ಯ ಅನ್ನೋದು ಅರ್ಥವಾಗುವಷ್ಟರಲ್ಲಿ ಎಲ್ಲವೂ ನಾಶವಾಗಿರುತ್ತೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.


