ಭಿನ್ನಾಭಿಪ್ರಾಯದ ನಡುವೆ ಬದುಕುವುದೇ ನಿಜವಾದ ಪ್ರಜಾಪ್ರಭುತ್ವ. ಇದು ನನ್ನನ್ನು ನಾನು ತಿರುಗಿ ನೋಡಿಕೊಳ್ಳುವಂತೆ ಮಾಡಿದೆ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ತುಮಕೂರಿನ ಗ್ರಂಥಾಲಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತವರು ಜಿಲ್ಲೆಯ ಗೌರವ ಕಾರ್ಯಕ್ರಮದಲ್ಲಿ ನಾಗರಿಕರ ಗೌರವ ಸ್ವೀಕರಿಸಿ ಮಾತನಾಡಿದ ಅವರು, ನನ್ನ ಸಾಹಿತ್ಯವನ್ನು ತಿದ್ದಿ-ತೀಡಿ ಬರೆಯಲು ಪ್ರೇರೆಪಿಸಿದ ಹಾಗೂ ನಾನು ಜಾತ್ಯತೀತ ವ್ಯಕ್ತಿಯಾಗಿ ರೂಪುಗೊಳ್ಳಲು ಸೀತಾರಾಮ್ ಅವರೇ ಕಾರಕರ್ತರು ಎಂದು ಸ್ಮರಿಸಿದರು.
ನಾನು ಮಹಾತ್ಮಗಾಂಧಿಯ ಸಹಿಷ್ಣತೆ, ಅಂಬೇಡ್ಕರ್ ಸಮಾಜಿಕ ಸಮಾನತೆ ಮತ್ತು ಕಾರ್ಲ್ ಮಾರ್ಕ್ಸ್ ಅವರ ಅರ್ಥಿಕ ಸಮಾನತೆಯಿಂದ ಸ್ಪೂರ್ತಿ ಪಡೆದವನು. ನೀಲಿ, ಹಸಿರು, ಕೆಂಪು ಒಂದಾದರೆ ಹೆಚ್ಚಿನ ಅನುಕೂಲ ಜನರಿಗೆ ಸಿಗಲಿದೆ ಎಂಬ ನಂಬಿಕೆ ನನ್ನದು. ಜನರ ಪ್ರೀತಿಗೆ ಗೌರವ ಕೊಡಬೇಕು ಎಂಬ ಕಾರಣಕ್ಕೆ ನಿಮ್ಮೆಲ್ಲಾ ಗೌರವಗಳನ್ನು ಸ್ವೀಕರಿಸಿದ್ದೇನೆ. ಭಾವುಕತೆ ಮತ್ತು ಬೌದ್ಧಿಕತೆ ಎರಡರ ನಡುವೆ ಸಮತೋಲನ ಕಂಡುಕೊಂಡಿದ್ದೇನೆ ಎಂದರು.
ಬರಗೂರು ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಸುಂದರಾಜ್ ಅರಸ್ ಮಾತನಾಡಿ, ಬರಗೂರು ದ್ವನಿ ಇಲ್ಲದವರ ದ್ವನಿಯಾಗಿ ಕೆಲಸ ಮಾಡಿದವರು. ಕಳೆದ 38 ವರ್ಷಗಳಿಂದ ಅವರ ಹೆಜ್ಜೆಗಳನ್ನು ಅನುಸರಿಸುತ್ತಾ ಬಂದಿದ್ದೇನೆ. ಎಲ್ಲರ ನೋವಿಗೆ ಬೆಲೆಯಿದೆ ಎಂದು ತಿಳಿದವರು ಬರಗೂರ ರಾಮಚಂದ್ರಪ್ಪ, ಕೈ, ಬಾಯಿ, ಮನಸ್ಸು ಎಲ್ಲವನ್ನು ಶುದ್ದವಾಗಿಟ್ಟುಕೊಂಡು ಸಂಸ್ಕಾರವಂತರು ಎಂದರು.
ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ. ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಚಿಂತಕ ಕೆ.ದೊರೈರಾಜ್, ಪ್ರೊ.ತಿಪ್ಪೇಸ್ವಾಮಿ, ಡಾ.ಪವನಗಂಗಾಧರ್, ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಸ್ನೇಹ ಬಳಗದ ಎ.ರಾಮಚಂದ್ರಪ್ಪ, ಹೆಚ್.ಗೋವಿಂದಯ್ಯ, ಆಶ್ವತ್ಥನಾರಾಯಣ ಗುಟ್ಟೆ, ಡಾ.ಶ್ರೀನಿವಾಸಪ್ಪ, ಡಾ.ಓ.ನಾಗರಾಜು, ಡಾ.ನಾಗಭೂಷಣ್ ಬಗ್ಗನಡು, ಡಾ.ಶಿವಣ್ಣ ತಿಮ್ಮಲಾಪುರ, ಆನಂತಮೂರ್ತಿ, ನಾಗೇಂದ್ರಪ್ಪ ಎಸ್ ರಾಘವೇಂದ್ರ ಇದ್ದರು.


