ಅಪ್ಪಟ ರಾಜಕಾರಣಿ ಸಿದ್ದರಾಮಯ್ಯ ಅವರ ತೇಜೋವಧೆ ಮಾಡುವ ಮೂಲಕ, ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವ ಬಿಜೆಪಿ-ಜೆಡಿಎಸ್ ಹುನ್ನಾರ ಕೈಗೂಡಲು ಅಹಿಂದ ಮುಖಂಡರು ಎಂದಿಗೂ ಅವಕಾಶ ನೀಡುವುದಿಲ್ಲ. ಯಾವ ಹಂತದ ಹೋರಾಟಕ್ಕೂ ಸಿದ್ದ ಎಂದು ಕಾಂಗ್ರೆಸ್ ಮುಖಂಡ ಕೆಂಚಮಾರಯ್ಯ ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ತಮ್ಮ 45 ವರ್ಷಗಳ ರಾಜಕೀಯ ಜೀವನದಲ್ಲಿ ಕಳಂಕರಹಿತ ಅಧಿಕಾರ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮುಡಾ ಹಗರಣದ ಕಪ್ಪುಚುಕ್ಕೆ ಇಟ್ಟು ರಾಜಕೀಯ ಜೀವನಕ್ಕೆ ಇತೀಶ್ರೀ ಹಾಡಲು ಹೊರಟಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಹುನ್ನಾರ ಕೈಗೂಡುವುದಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ. ಜೆಡಿಎಸ್-ಬಿಜೆಪಿ ಪದೇ ಪದೇ ಮುಖ್ಯಮಂತ್ರಿಗಳ ರಾಜಿನಾಮೆಗೆ ಒತ್ತಾಯಿಸಿದರೆ ಸಮಸ್ತ ಅಹಿಂದ ವರ್ಗ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.
ದಲಿತ ಮುಖಂಡ ನರಸೀಯಪ್ಪ ಮಾತನಾಡಿ, ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಲು ಪಟ್ಟಭದ್ರ ಹಿತಾಸಕ್ತಿಗಳು ಹುನ್ನಾರ ನಡೆಸಿವೆ. ಇದಕ್ಕೆ ನಮ್ಮ ಪ್ರಬಲ ವಿರೋಧವಿದೆ. ಬಿಜೆಪಿ-ಜೆಡಿಎಸ್ ಪಕ್ಷದ ಅನೇಕ ಮುಖಂಡರು, ಜಾಮೀನನ ಮೇಲೆ ಹೊರಬಂದು ಮಂತ್ರಿಗಳಾಗಿದ್ದಾರೆ. ಮೊದಲು ಅವರ ವಿರುದ್ದ ತನಿಖೆ ಕೈಗೊಳ್ಳಲಿ, ರಾಜಭವನ ಒಂದು ಪಕ್ಷದ ಕಚೇರಿಯಾಗಿ ಪರಿವರ್ತನೆಯಾಗಿರುವುದು ದುರದೃಷ್ಟಕರ ಎಂದರು.
ಕುರುಬ ಸಂಘದ ಜಿಲ್ಲಾ ಕಾರ್ಯದರ್ಶಿ ಕುಮಾರಸ್ವಾಮಿ ಮಾತನಾಡಿ, ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಹಾಗು ಜೆಡಿಎಸ್ ಮತ್ತು ಕೇಂದ್ರ ಸರಕಾರ ಭ್ರಷ್ಟಾಚಾರದ ಆರೋಪ ಮಾಡುತ್ತಿರುವುದು ನಿಜಕ್ಕು ಸಹಿಸಲಾಗದು. ಎಲ್ಲಾ ಅಹಿಂದ ವರ್ಗಗಳ ಜೊತೆ ಸೇರಿ ಬೃಹತ್ ಹೋರಾಟ ರೂಪಿಸಲಿದೆ ಎಂದರು.
ಡಾ.ಅರುಂಧತಿ ಮಾತನಾಡಿ, ಮಹಾಭಾರತದಲ್ಲಿ ಶೂದ್ರ ಶಂಭೂಕ ಮತ್ತು ಏಕಲವ್ಯನ ಕಥೆಯ ರೀತಿ ಅಹಿಂದ ವರ್ಗವನ್ನು ಅಧಿಕಾರದಿಂದ ದೂರು ಇಡುವ ಪ್ರಯತ್ನ ಇದಾಗಿದೆ. ಇಂದು ಅಹಿಂದ ವರ್ಗ ಎಚ್ಚೆತ್ತಿದೆ. ಪುರಾಣದಲ್ಲಿ ಆದ ತಪ್ಪು, ಪ್ರಜಾಪ್ರಭುತ್ವದಲ್ಲಿ ಮರುಕಳುಹಿಸಲು ಅವಕಾಶ ನೀಡುವುದಿಲ್ಲ. ಸಿದ್ದರಾಮಯ್ಯ ಪರವಾಗಿ ಎಲ್ಲಾ ಶೋಷಿತ ಸಮುದಾಯಗಳು ನಿಲ್ಲಲಿವೆ ಎಂದರು.
ಗೊಲ್ಲ ಸಮುದಾಯದ ಚಿಕ್ಕರಾಜು ಮಾತನಾಡಿ, ತಮ್ಮ ಇಡೀ ರಾಜಕೀಯ ಜೀವನದಲ್ಲಿ ಕಿಚನ್ ಕ್ಯಾಬಿನೇಟ್ ಗೆ ಅವಕಾಶ ನೀಡದೆ, ಸಾರ್ವಜನಿಕವಾಗಿ ಕುಟುಂಬಸ್ಥರು ಅಧಿಕಾರದಲ್ಲಿ ಮೂಗು ತೂರಿಸಿದಂತೆ ನೋಡಿಕೊಂಡು ಕ್ಲೀನ್ ಇಮೇಜ್ ಹೊಂದಿದ್ದ ಸಿದ್ದರಾಮಯ್ಯ ಅವರ ಮೇಲೆ ರಾಜಕೀಯ ದ್ವೇಷದಿಂದ ಮುಡಾ ಹಗರಣವನ್ನು ಮುಂದು ಮಾಡಿ, ರಾಜಕೀಯವಾಗಿ ಮುಗಿಸಲು ಬಿಜೆಪಿ,ಜೆಡಿಎಸ್ ಮುಂದಾಗಿವೆ. ಬಡವರಿಗೆ,ದೀನ ದಲಿತರಿಗೆ ,ಹಿಂದುಳಿದ ಸಮುದಾಯಗಳ ಜನರಿಗೆ ಶಕ್ತಿ ತುಂಬುವ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದ ಪರಿಣಾಮ ಸಿದ್ದರಾಮಯ್ಯ ಅವರ ಜನಪ್ರಿಯತೆಯನ್ನು ಸಹಿಸದೆ ಇಂತಹ ದುಷ್ಕತ್ಯಕ್ಕೆ ಕೈ ಹಾಕಿವೆ.ಕಾನೂನು ಹೋರಾಟದ ಜೊತೆ ಜೊತೆಗೆ, ಸಿದ್ದರಾಮಯ್ಯ ಅವರಿಗೆ ನೈತಿಕವಾಗಿ ಬಲ ತುಂಬುವ ಕೆಲಸವನ್ನು ನಾಡಿನ ಎಲ್ಲಾ ಶೋಷಿತ ಸಮುದಾಯಗಳು ಒಗ್ಗೂಡಿ ಮಾಡಲಿವೆ ಎಂದರು.
ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕೆಂಪರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಬ್ಬೂರು ಶ್ರೀನಿವಾಸಮೂರ್ತಿ, ತಿಗಳ ಸಮುದಾಯದ ಮುಖಂಡ ರೇವಣಸಿದ್ದಯ್ಯ, ಉದ್ಯಮಿ ಡಿ.ಕೆ.ವೆಂಕಟೇಶ್, ನಿವೃತ್ತ ಅಧಿಕಾರಿ ಡಾ.ವೈ.ಕೆ.ಬಾಲಕೃಷ್ಣಪ್ಪ, ಡ್ಯಾಗೇರಹಳ್ಳಿ ವಿರೂಪಾಕ್ಷ, ವಕೀಲರಾದ ಸುನಿಲ್, ಕೆಂಪಣ್ಣ, ಜಯಮೂರ್ತಿ ಸೇರಿದಂತೆ ಹಲವರು ಹಾಜರಿದ್ದರು.