ಹಾಲಿನ ದರ ಏರಿಕೆಯಿಂದ ಅದರ ಲಾಭ ರೈತರಿಗೇ ಸಿಗಲಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪೆಟ್ರೋಲ್, ಡೀಸೆಲ್ ಸೇರಿದಂತೆ ವಿವಿಧ ಪದಾರ್ಥಗಳ ಬೆಲೆಯಲ್ಲಿ ಏರಿಕೆಯಾಗಿವೆ. ಈ ಹಿನ್ನೆಲೆಯಲ್ಲಿ ಹಾಲಿನ ದರ ಏರಿಕೆ ಕೂಡ ಅನಿವರ್ಯವಾಗಿದ್ದು, ಅದರ ಲಾಭ ಪೂರ್ಣ ಪ್ರಮಾಣದಲ್ಲಿ ರೈತರಿಗೇ ಸಿಗಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಹಾಲಿನ ದರ ಏರಿಕೆ ಮಾಡುವುದರಿಂದ ತೆರಿಗೆ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ಲಾಭವಾಗಲಿದ್ದು ರಾಜ್ಯ ಸರ್ಕಾರಕ್ಕೆ ಇದರಿಂದ ಯಾವುದೇ ಲಾಭವಿಲ್ಲ. ಆದರೆ ಈ ಏರಿಕೆಯಿಂದ ರಾಜ್ಯದ ಹಾಲು ಉತ್ಪಾದಕ ರೈತರಿಗೆ ಲಾಭವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಹಾಲಿನ ದರ ಏರಿಕೆ ಲಾಭವನ್ನು ನೇರವಾಗಿ ರೈತರಿಗೆ ಸಿಗಬೇಕೆಂಬ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದೂ ತಿಳಿಸಿದರು.
ಇಡೀ ದೇಶದಲ್ಲಿ ರೈತರಿಂದ ಹೆಚ್ಚು ಬೆಲೆಗೆ ಹಾಲು ಖರೀದಿಸಿ ಕಡಿಮೆ ಬೆಲೆಗೆ ಗ್ರಾಹಕರಿಗೆ ನೀಡುತ್ತಿರುವುದು ಕರ್ನಾಟಕ ಮಾತ್ರ. ರೈತರಲ್ಲಿ ಹಣಕಾಸು ವಹಿವಾಟು ಹೆಚ್ಚಾದರೆ ಮಾತ್ರ ದೇಶದ ಜಿಡಿಪಿ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಅನುಕೂಲವಾಗುವ ನಿರ್ಧಾರಗಳನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.
ಯಶಸ್ವಿನಿ ಮತ್ತೆ ಜಾರಿ: ರೈತರು ಹಾಗೂ ಬಡವರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಈ ಹಿಂದೆ ಎಸ್.ಎಂ.ಕೃಷ್ಟ ಅವರು ಮುಖ್ಯಮಂತ್ರಿಯಾಗಿದ್ದ ಸರ್ಕಾರ ಜಾರಿಗೆ ತಂದಿದ್ದ ಯಶಸ್ವಿನಿ ಯೋಜನೆಯನ್ನು ಮರು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಹಾಲು ಮಹಾಮಂಡಳದ ಆಡಳಿತ ಮಂಡಳಿ ಸದಸ್ಯ ಕಾಂತರಾಜು, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಜಂಗಮಪ್ಪ, ವಕೀಲ ನಾರಾಯಣಗೌಡ ಹಾಜರಿದ್ದರು.