ತುಮಕೂರು: ಭಾರತವು ಶಿಕ್ಷಣ ನೀತಿಗಳನ್ನು ಅಳವಡಿಸಿಕೊಳ್ಳುವುದರಲ್ಲಿ ಸೋಲುತ್ತಿದ್ದೇವೆ. ಶಿಕ್ಷಣದ ತತ್ವಾದರ್ಶಗಳಿಗೆ ಒತ್ತು ಕೊಟ್ಟು ವೃತ್ತಿಯಲ್ಲಿ ಶಿಕ್ಷಕರು ಮುಂದುವರಿಯದೆ ಇರುವುದು ದುರದೃಷ್ಟಕರ ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಕೆ.ಸಿದ್ದಪ್ಪ ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯವು ಗುರುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಶಿಕ್ಷಕನಾದವನು ಓದುವ, ಓದಿಸುವ ಅಭ್ಯಾಸ ಬೆಳೆಸಿಕೊಂಡಾಗ ಮಾತ್ರ ಶಿಕ್ಷಕ ವೃತ್ತಿಗೆ ಗೌರವ. ಕೊರತೆಗಳಿಗೆ ತಲೆಕೆಡಿಸಿಕೊಳ್ಳದೆ ಪಾಠ-ಪ್ರವಚನಗಳಲ್ಲಿ ತಲ್ಲೀನರಾಗಬೇಕು. ಪ್ರಾಮಾಣಿಕತೆ ಪಾಲಿಸಿದರೆ ಅನುಕೂಲಗಳು ಹೆಚ್ಚು ಎಂದರು.
ವಿದ್ಯಾರ್ಥಿ ಜೀವನದಲ್ಲಿ ರಾಧಾಕೃಷ್ಣನ್ ಅವರು ಪಾಲಿಸಿಕೊಂಡು ಬಂದ ನೀತಿ ಮತ್ತು ಆಧ್ಯಾತ್ಮಿಕ ಕಾಳಜಿ ಎಂದರೆ, ತಮಗೆ ಬಂದ ವಿದ್ಯಾರ್ಥಿ ವೇತನದಲ್ಲಿ ಪುಸ್ತಕ ಕೊಂಡು ಓದುವುದು, ಬಡ ಸಹಪಾಠಿಗಳಿಗೆ ವಿದ್ಯಾಭ್ಯಾಸದಲ್ಲಿ ಸಹಾಯ ಮಾಡುವುದಾಗಿತ್ತು ಎಂದು ತಿಳಿಸಿದರು.
ಮೈಸೂರು ವಿವಿಯ ತತ್ವಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಸಮಯವನ್ನು ಸುವರ್ಣ ಕಾಲವೆಂದು ಇಂದಿಗೂ ಪ್ರಸಿದ್ಧಿ. ಪ್ರಾದೇಶಿಕ ಭಾಷೆಯಲ್ಲಿ ಮಕ್ಕಳು ಕಲಿಯಬೇಕು, ಅಭಿವೃದ್ಧಿಗಾಗಿ ಶಿಕ್ಷಣ ಕಡ್ಡಾಯವೆಂದು ಪ್ರತಿಪಾದಿಸಿದ ಸಮಾಜಮುಖಿ ಶಿಕ್ಷಕ ಎಂದರು.
ವಿವಿ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಮಾತನಾಡಿ, ಶಿಕ್ಷಕರ ದಿನಾಚರಣೆಯನ್ನು ಜವಾಬ್ದಾರಿಯ ದಿನವೆಂದು ಆಚರಿಸೋಣ. ಸಮಾಜಕ್ಕೆ ಕೊಡುಗೆ ನೀಡುವ ಮಕ್ಕಳನ್ನು ತಯಾರಿಸೋಣ. ಗ್ರಾಮಕ್ಕೆ ಶಿಕ್ಷಕ ಮಾರ್ಗದರ್ಶಕನಾಗಿರುತ್ತಿದ್ದ ಕಾಲವೊಂದಿತ್ತು. ಉತ್ತಮ ವಿದ್ಯಾರ್ಥಿಗಳನ್ನು ಹೊರತರದೆ, ಸಂಬಳಕ್ಕಾಗಿ, ಸ್ವಾರ್ಥಕ್ಕಾಗಿ ದುಡಿಯುವ ಶಿಕ್ಷಕರನ್ನು ಕಂಡಾಗ ಬೇಸರವಾಗುತ್ತದೆ ಎಂದು ಹೇಳಿದರು.
ವಿವಿ ಕುಲಸಚಿವೆ ನಾಹಿದಾ ಜಮ್ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್, ಹಣಕಾಸು ಅಧಿಕಾರಿ ನರಸಿಂಹ ಮೂರ್ತಿ, ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿಯ ಸಂಯೋಜಕ ಡಾ. ಎ. ಎಂ. ಮಂಜುನಾಥ ಹಾಜರಿದ್ದರು.