ಅಪರಿಚಿತ ವಾಹನವೊಂದು ಬೈಕ್ ಗೆ ಗುದ್ದಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕು ನಲ್ಲೇಕಾಮನಹಳ್ಳಿ ಗೇಟ್ ನಲ್ಲಿ ನಡೆದಿದೆ. ಮೃತನನ್ನು ಸುಮಾರು 19 ವರ್ಷದ ಕೆ.ಸಿ.ಈರಣ್ಣ ಎಂದು ಗುರುತಿಸಲಾಗಿದೆ.
ಬೆಂಗಳೂರಿನಿಂದ ಬೈಕ್ ನಲ್ಲಿ ಬರುತ್ತಿದ್ದ ಕೆ.ಸಿ.ಈರಣ್ಣ ಮಧುಗಿರಿ ತಾಲ್ಲೂಕು ನಲ್ಲೇಕಾಮನಹಳ್ಳಿ ಗೇಟ್ ಸಮೀಪ ಬರುತ್ತಿದ್ದಂತೆಯೇ ಅಪರಿಚಿತ ವಾಹನವೊಂದು ಬೈಕಿಗೆ ಗುದ್ದಿದೆ. ಆಗಸ್ಟ್ 30ರಂದು ರಾತ್ರಿ 7 ಗಂಟೆ ಸುಮಾರಿನಲ್ಲಿ ಅಪಘಾತ ಸಂಭವಿಸಿದ್ದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಕಡೆಯ ಶ್ರಾವಣ ಶನಿವಾರದ ಹಬ್ಬಕ್ಕೆಂದು ತಮ್ಮ ಸ್ವಗ್ರಾಮ ಪಾವಗಡ ತಾಲೂಕಿನ ಕೃಷ್ಣಗಿರಿಯ ಜೂಲಪ್ಪನಹಟ್ಟಿಗೆ ಬರುತ್ತಿದ್ದ ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಅವಘಡ ಸಂಭವಿಸಿದ್ದು ಶವವನ್ನು ತೆಗೆದುಕೊಂಡು ಹೋಗಿ ಆಗಸ್ಟ್ 31ರಂದು ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಿಸಲಾಯಿತು.