Monday, September 16, 2024
Google search engine
Homeಮುಖಪುಟಸಿದ್ದಮಾದರಿಗಳನ್ನು ಮೀರುವವನೇ ನಿಜವಾದ ಲೇಖಕ-ಬರಗೂರು

ಸಿದ್ದಮಾದರಿಗಳನ್ನು ಮೀರುವವನೇ ನಿಜವಾದ ಲೇಖಕ-ಬರಗೂರು

ಕಾಲದೊಳಗಿದ್ದೂ ಕಾಲವನ್ನು ಮೀರುವವನೇ ನಿಜವಾದ ಕವಿ. ಕಾಲದೊಳಗೆ ಇರಬೇಕು. ಕಾಲವನ್ನು ಅರ್ಥ ಮಾಡಿಕೊಳ್ಳಬೇಕು ಆಗ ಮಾತ್ರ ಸೃಜನಶೀಲ ಲೇಖಕನಾಗಲು ಸಾಧ್ಯ. ಶೂನ್ಯವಲ್ಲದ ಕಾಲ ನಿರ್ಮಿಸಿರುವ ಸಿದ್ದಮಾದರಿಗಳನ್ನು ಮೀರುವವನೇ ನಿಜವಾದ ಲೇಖಕ ಎಂದು ಬಂಡಾಯ ಸಾಹಿತಿ, ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಬಹುಮುಖಿ ಗೆಳೆಯರ ಬಳಗ ತುಮಕೂರು, ಅಪೂರ್ವ ಪ್ರಕಾಶನದ ವತಿಯಿಂದ ಭಾನುವಾರ ತುಮಕೂರಿನ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಅಪ್ಪ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಅತ್ತೆ ಅಂದರೆ ಅಲ್ಲಿ ಒಂದು ಸಿದ್ದಮಾದರಿ ಇದೆ. ಸಂಬಂಧಗಳ ನಡುವೆ ಸಿದ್ದಮಾದರಿ ಇದೆ. ಕಾಲಾನುಕ್ರಮದಲ್ಲಿ ಬೆಳೆದಂತ ಒಂದು ಸಾಮಾಜಿಕ ಅನುಭವ ಪ್ರಪಂಚದಲ್ಲಿ ಹುಟ್ಟಿದಂತಹ ಮಾದರಿಗಳು ಇವೆಲ್ಲ. ಇವು ಸಾಮಾನ್ಯೀಕೃತ ಮಾದರಿಗಳು. ಈ ಬಗ್ಗೆ ಅಪವಾದಗಳು ಸಾಕಷ್ಟಿವೆ. ಕಾಲ ನಿರ್ಣಯಗಳು ಇರುತ್ತವೆ. ಅವು ನಮಗೆ ಇಷ್ಟವಾಗಬಹುದು ಇಲ್ಲವೇ ಬಿಡಬಹುದು. ಕಾಲ ಒಂದು ನಿರ್ಣಯವನ್ನು ತೆಗೆದುಕೊಳ್ಳುತ್ತದೆ. ಆ ಕಾಲ ನಿರ್ಣಯಕ್ಕೆ ಅನುಭವ ಪ್ರಪಂಚ ಇರುತ್ತದೆ. ಸಿದ್ದಮಾದರಿಗಳು ಅನುಭವ ಪ್ರಪಂಚದ ಅನುಭವಗಳಾಗಿರುತ್ತವೆ ಎಂದು ಹೇಳಿದರು.

ಯಾವುದೇ ಲೇಖಕ, ಬರೆಹಗಾರ ಸಿದ್ದಮಾದರಿಗಳನ್ನು ಮೀರಬೇಕು. ಸೃಜನಶೀಲತೆಯ ಮುಖ್ಯ ಲಕ್ಷಣವೇ ಸಿದ್ದಮಾದರಿಗಳನ್ನು ಮೀರುವುದು. ಸಿದ್ದಮಾದರಿಗಳನ್ನು ಮೀರುವುದು ಅಂದರೆ ಇದಕ್ಕೆ ಇನ್ನೊಂದು ಮಗ್ಗಲು ಇದೆ ಅಂತ ನೋಡುವ ನೋಟ ನಮ್ಮಲ್ಲಿರಬೇಕು. ಇದಿಷ್ಟೇ ಅಲ್ಲ, ಇದರಾಚೆಗೂ ಏನೋ ಇದೆ ಅನ್ನುವ ನೋಟ ಬೇಕು. ಬಾಹ್ಯ ನೋಟದ ಬದಲಾಗಿ, ಒಳನೋಟದ ಮುಖಾಂತರ ಒಂದು ಸಮಾಜದ ಬದುಕನ್ನು ಹುಡುಕುವ ಸೃಜನಶೀಲತೆ ಇದೆಯಲ್ಲ, ಅದೇ ಸಾಹಿತ್ಯದ ಪ್ರತಿಭೆ. ಅಂಥದ್ದೊಂದು ಪ್ರತಿಭೆಯ ಅಗತ್ಯವಿದೆ ಎಂದರು.

ಸಿದ್ದ ಮಾದರಿಗಳನ್ನು ಮೀರಬೇಕಾಗಿದೆ. ಮೀರುವುದು ಅಂದರೆ ಒಂದು ಕಾಲ ನಿರ್ಮಾಣ ಮಾಡುವುದನ್ನು ಮೀರಬೇಕು. ಕಾಲದ ಜೊತೆ ಮಾತುಕತೆ ನಡೆಸಬೇಕು. ಕಾಲಕ್ಕೆ ಮುಖಾಮುಖಿಯಾಗಿರಬೇಕು. ಒಂದು ಕಾಲ ಏನೇನೋ ಕಟ್ಟಿಕೊಂಡು ಬಂದಿರುತ್ತದೆ. ಅದೆಲ್ಲವೂ ಸತ್ಯವೇ? ಅತ್ತೆ, ಅಪ್ಪ, ಅಮ್ಮ ಅಂದ್ರೆ ಹೀಗೇನಾ? ಇಂಥ ಪ್ರಶ್ನೆಗಳು ನಮಗೆ ಬೇಕಾಗಿರುತ್ತದೆ. ಕಾಲದ ಜೊತೆ ಅನುಸಂಧಾನವನ್ನು ನಡೆಸಬೇಕು. ಕಾಲ ಅನ್ನುವುದು ಒಂದು ಶೂನ್ಯ ರೂಪವಲ್ಲ. ಆದರೆ ಕಾಲಕ್ಕೆ ಆಕಾರ ಇಲ್ಲ. ಕಾಲಕ್ಕೆ ಕಣ್ಣಿಲ್ಲ, ಕಿವಿ ಇಲ್ಲ. ದೇಹ ಇಲ್ಲ. ಕಾಲ ಅನ್ನುವುದು ನಿರಾಕಾರ. ಕಾಲ ಕಟ್ಟಿಕೊಟ್ಟಂತಹ ವ್ಯಕ್ತಿತ್ವಗಳು, ಸಮಾಜಕ್ಕೆ ಒಂದು ಆಕಾರ ಇದೆ. ಹೀಗೆ ಶೂನ್ಯ ಅಲ್ಲದೇ ಇರುವ ಕಾಲದಲ್ಲಿ ಹುಟ್ಟು ಪಡೆದ ಅನೇಕ ರೂಪಗಳನ್ನು ಗಮನದಲ್ಲಿಟ್ಟುಕೊಂಡು ಸಮಾಜದ ಜೊತೆ ಸಂವಾದ ನಡೆಸಬೇಕು. ಕಾಲದ ಜೊತೆಗೆ ಕಾಳಗ ಮಾಡಬೇಕಾಗುತ್ತದೆ. ಕಾಲ ನಮ್ಮನ್ನು ಕಟ್ಟಿಹಾಕಲು ಪ್ರಯತ್ನ ಮಾಡುತ್ತದೆ. ಸಾಹಿತಿಗಳು ಕಾಲಕ್ಕೆ ಕಟ್ಟುಹಾಕಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.

ಕಾಲವನ್ನು ಮೀರುವ ಲೇಖಕ, ಬರಹೆಗಾರ ಸೃಜನಶೀಲ ಕೃತಿಗಳನ್ನು ನೀಡಲು ಸಾಧ್ಯ. ಗುರು ಶಿಷ್ಯರ ಸಂಬಂಧ ಹೇಗಿರಬೇಕು. ಅತ್ತೆ ಸೊಸೆಯರ ಸಂಬಂಧ ಹೇಗಿರಬೇಕು. ಸಾರ್ವಜನಿಕ ನಡಾವಳಿ ಹೇಗಿರಬೇಕು ಎಂಬುದು ಕಾಲದೊಳಗೆ ಬಂದಿರುತ್ತದೆ. ಕಾಲ ಒಂದು ಭಾಷೆಯನ್ನು ರೂಪಿಸಿರುತ್ತದೆ. ಗಂಡು ಭಾಷೆಯನ್ನು ರೂಪಿಸಿದ ಒಂದು ಕಾಲವಿದೆ. ಈಗಲೂ ಇದೆ ಅದು. ಗಂಡಸ್ಥನ ಇದೆಯೇ ಅಂತ ಕೇಳುವುದುನ್ನ ನೋಡಿದ್ದೇವೆ. ಆದೇ ಗಂಡಸರು ಎಂದಾದರೂ ತಾಯ್ತನವಿದೆಯೇ ಎಂದು ಕೇಳುತ್ತಾರೆಯೇ? ತಾಯ್ತನವಿಲ್ಲದ ಸಮಾಜ ಅಪಾಯದಲ್ಲಿದೆ ಎಂದೇ ಅರ್ಥ ಎಂದರು.

ಯಾರಲ್ಲಿ ಆಸ್ತಿ, ಅಂತಸ್ಸು, ಅಧಿಕಾರ ಹೀಗೆ ಎಲ್ಲವೂ ಕೇಂದ್ರೀಕೃತವಾಗಿರುತ್ತದೆಯೋ ಅಂಥ ಪುರುಷರಿಂದ ಹುಟ್ಟಿದ ಪರಿಭಾಷೆ ಇದು. ಇಂತಹ ಪರಿಭಾಷೆ ಹುಟ್ಟಲು ಮೂಲ ಕಾರಣ ನಮ್ಮ ಸಾಮಾಜಿಕ ಸಂರಚನೆ. ಇಂತಹ ಸಂರಚನೆ ಯಾವಾಗ ಬೆಳೆಯುತ್ತದೆಯೋ ಆಗ ತಾಯ್ತನ ಎನ್ನುವ ಪದ ಬರುವುದಿಲ್ಲ. ಗಂಡಸ್ಥನ ಪದ ಬರುತ್ತದೆ. ಇಂತಹ ಸಂದರ್ಭದಲ್ಲಿ ನಿಜವಾದ ಲೇಖಕ ಈ ಗಂಡಸ್ಥನ ಪರಿಭಾಷೆಗೆ ವಿಮೋಚನೆ ಕೊಟ್ಟು ತಾಯ್ತನದ ಪರಿಭಾಷೆಯನ್ನು ಬರುತ್ತಾರೆ. ಅವನು ನಿಜವಾದ ಲೇಖಕ. ಹಾಗಾಗಿ ಈ ಪರಿಭಾಷೆಯನ್ನೇ ಬದಲಾಯಿಸುವುದು ಅಂದರೆ ಪರಿಕಲ್ಪನೆಗಳನ್ನೇ ಬದಲಾಯಿಸಬೇಕು ಅಂತ.

ಕಾಲ ಜಾತಿಗಳನ್ನು, ವರ್ಣಗಳನ್ನು, ವರ್ಗಗಳನ್ನು, ಲಿಂಗ ತಾರತಮ್ಯವನ್ನು ನಿರ್ಮಾಣ ಮಾಡುತ್ತದೆ. ಇವೆಲ್ಲವೂ ಒಂದು ಕಾಲ ನಮ್ಮನ್ನ ಕಟ್ಟಿಹಾಕಿರುತ್ತದೆ. ಈ ಜಾತಿಯವರು ಹೀಗೇ ಇರಬೇಕು. ಇಂಥವನು ಹಟ್ಟಬೇಕು, ಹುಟ್ಟಬಾರದು. ಹೆಣ್ಣು ಹೀಗೆಯೇ ನಡೆದುಕೊಳ್ಳಬೇಕು. ಹೊಸಿಲು ದಾಟಿ ಮಹಿಳೆ ಹೊರಬಂದರೂ ನಮ್ಮ ಪರಿಭಾಷೆ, ಪರಿಕಲ್ಪನೆಗಳು ಬದಲಾಗಿಲ್ಲ. ನಮ್ಮ ಸಾಮಾಜಿಕ ಸಂರಚನೆಯಲ್ಲಿರುವ ಅಪಾಯಕಾರಿ ನಿಲವುಗಳನ್ನು ಬದಲಾಯಿಸಬೇಕಾಗಿದೆ ಎಂದರು.

ನಮ್ಮ ಸಾಮಾಜಿಕ ಬದುಕು ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ಕೆಲವು ಸಿದ್ದಮಾದರಿಗಳನ್ನು ನಿರ್ಮಾಣ ಮಾಡುತ್ತಿದೆ. ಅಪ್ಪ ಅಂದರೆ ಹೀಗೆ, ಅಮ್ಮ ಅಂದರೆ ಹೀಗೆ ಸೊಸೆ ಮತ್ತು ಅತ್ತೆ ಅಂದರೆ ಹೀಗೆ ಎಂಬಂತಹ ಸಿದ್ದಮಾದರಿಗಳಿದ್ದು ಇವು ಒಂದು ಕಾಲಾವಧಿಯಲ್ಲಿ ನಿರ್ಮಾಣ ಮಾಡಿರುವಂಥವುಗಳಾಗಿವೆ. ಅದರಂತೆಯೇ ನಾವು ಬದುಕುತ್ತಿದ್ದೇವೆ. ಇವೆಲ್ಲ ಕಾಲದ ನಿರ್ಣಯಗಳು. ಇವುಗಳನ್ನು ನಿಕಷಕ್ಕೆ ಒಡ್ಡಬೇಕಿದೆ. ಇಲ್ಲದೆ ಹೋದರೆ ಅವೇ ಅಂತಿಮ ಸತ್ಯಗಳು ಎಂಬ ತಿಳುವಳಿಕೆ ಬಂದುಬಿಡುತ್ತೇವೆ. ಮನುಷ್ಯ ಸ್ವಭಾವದಲ್ಲಿ ಎಲ್ಲರನ್ನು ಹೀಗೆ ಸಾಮಾನ್ಯೀಕರಿಸುವುದು ಸಾಧ್ಯವಿಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಲೇಖಕಿ ಬಾ.ಹ.ರಮಾಕುಮಾರಿ ಮಾತನಾಡಿ, ಮೊದಲು ಚಳವಳಿಗಳು ವಿಶ್ವವಿದ್ಯಾಲಯದಲ್ಲಿ ಹುಟ್ಟಿ ಸಮಾಜದಲ್ಲಿ ಬದುಕುತ್ತಿದ್ದವು. ಆದರೆ ಇವೊತ್ತು ಚಳವಳಿಗಳು ಸಮಾಜದಲ್ಲಿ ಹುಟ್ಟಿ ವಿಶ್ವವಿದ್ಯಾನಿಲಯಗಳಲ್ಲಿ ಸಾಯುತ್ತಿರುವ ದುರಂತವನ್ನು ಇಂದು ನೋಡುತ್ತಿದ್ದೇವೆ. ಯಾವ ವಿಶ್ವವಿದ್ಯಾನಿಲಯಗಳು ಚಳವಳಿಗಳನ್ನು ಹುಟ್ಟು ಹಾಕುತ್ತಿಲ್ಲ. ಹೋರಾಟಗಳನ್ನು ಹುಟ್ಟು ಹಾಕುತ್ತಿಲ್ಲ. ಅವರದೇ ಸಮಸ್ಯೆಗಳಿಗೂ ಅವರು ಹೋರಾಟ ಮಾಡುತ್ತಿಲ್ಲ. ಇದನ್ನು ನೋಡಿದರೆ ಡಾ.ಬರಗೂರು ರಾಮಚಂದ್ರಪ್ಪ ಮತ್ತು ಜನಪರ ಚಿಂತಕ ದೊರೈರಾಜ್ ಅವರಂಥವರ ಮಾರ್ಗದರ್ಶನ ನಿರಂತರವಾಗಿ ಇರಬೇಕು. ಇವೊತ್ತಿನ ಯುವ ಜನಾಂಗಕ್ಕಂತೂ ತುಂಬಾ ಅತ್ಯಗತ್ಯ. ಯುವ ಪೀಳಿಗೆಗೆ ಕ್ಷಣಕ್ಷಣಕ್ಕೂ ಮಾರ್ಗದರ್ಶನ ನೀಡಬೇಕಾದಂತಹ, ದಾರಿಯನ್ನು ತೋರಿಸಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಬಹುಮುಖಿ ಗೆಳೆಯರ ಬಳಗದ ಸಂಚಾಲಕ ಟಿ.ಸತೀಶ್ ಜವರೇಗೌಡ ಅಧ್ಯಕ್ಷತೆ ವಹಿಸಿದ್ದರು. ಬಹುಮುಖಿ ಗೆಳೆಯರ ಬಳಗದ ಸಂಸ್ಥಾಪಕ ಸಂಚಾಲಕ ಹಡವನಹಳ್ಳಿ ವೀರಣ್ಣಗೌಡ, ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಮೈಸೂರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಅಶೋಕ್ ಕುಮಾರ್, ಹಿರಿಯ ಲೇಖಕ ಡಾ. ಅಮ್ಮಸಂದ್ರ ಸುರೇಶ್ ಮತ್ತು ಪತ್ರಕರ್ತ ಸಾ.ಚಿ.ರಾಜಕುಮಾರ್ ಭಾಗವಹಿಸಿದ್ದರು.

ಇದೇ ವೇಳೆ ನೆಲದಾಯ ಪರಿಮಳ ಕೃತಿಯ ಕರ್ತೃ ಸ್ಮಿತಾ ಅಮೃತರಾಜ್, ಲೇಖಕ ಡಾ.ಟಿ.ವೆಂಕಟೇಶಮೂರ್ತಿ, ಮಲ್ಲಿಕಾರ್ಜುನ ಶೆಲ್ಲಿಕೇರಿ, ಗುರುಪ್ರಸಾದ್ ಕಂಟಲಗೆರೆ ಅವರಿಗೆ ಅಪ್ಪ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹೆಚ್.ಎಂ.ವಸಂತಕುಮಾರ್ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular