ತುಮಕೂರು ನಗರದ ಹಳೆಯ ತರಕಾರಿ ಮಾರುಕಟ್ಟೆ ಜಾಗದಲ್ಲಿ ಐದು ಅಂತಸ್ತಿನ ಮಹಡಿಯ ಮಾಲ್ ನಿರ್ಮಾಣ ಮತ್ತು ಕಾರು ಪಾರ್ಕ್ ಮಾಡಲಾಗುವುದು ಎಂದು ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂರು ವರ್ಷದ ಹಿಂದೆಯೇ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಮಾಲ್ ನಿರ್ಮಾಣ ಮಾಡುವ ಪ್ರಸ್ತಾಪ ಇತ್ತು. ಒಂದು ಎಕರೆ ಜಾಗದಲ್ಲಿ 99 ಕೋಟಿ ರೂಪಾಯಿ ವೆಚ್ಚದಲ್ಲಿ ಮಾಲ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಶಂಕುಸ್ತಾಪನೆ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ಮತ್ತು ಸ್ಥಳೀಯ ಶಾಸಕ ಜಿ.ಬಿ.ಜ್ಯೋತಿಗಣೇಶ್ ಬರಬೇಕಾಗಿತ್ತು. ಆದರೆ ಅವರದೇ ಕಾರಣಗಳಿಂದಾಗಿ ಬಂದಿರಲಿಲ್ಲ ಎಂದು ಹೇಳಿದರು.
ಮಾಲ್ ನಿರ್ಮಾಣದ ಕುರಿತು ಸ್ವಲ್ಪ ಮಟ್ಟಿನ ಗೊಂದಲವಿದ್ದು ನ್ಯಾಯಾಲಯದಿಂದ ಆದೇಶ ಬಂದಿದೆ. ಇದರ ನಡುವೆಯೂ ನಾವು ಅಡಿಗಲ್ಲು ಹಾಕಿದ್ದೇವೆ. ಮಾಲ್ ನಿರ್ಮಾಣದ ಜಾಗದಲ್ಲಿ ಗಣಪತಿ ದೇವಸ್ಥಾನವೂ ಇದ್ದು ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
ಮಾರುಕಟ್ಟೆಯ ಮಧ್ಯದಲ್ಲಿನ ದೇವಸ್ಥಾನವನ್ನು ತೆರವುಗೊಳಿಸಿ ಅಚ್ಚುಕಟ್ಟಾಗಿ ದೇವಸ್ಥಾನ ನಿರ್ಮಾಣ ಮಾಡುತ್ತಾರೆ. ಆದಷ್ಟು ಶೀಘ್ರವೇ ಕಾಮಗಾರಿ ಪ್ರಾರಂಭ ಮಾಡುತ್ತಾರೆ. ಗುತ್ತಿಗೆದಾರರಿಗೆ 18 ತಿಂಗಳಲ್ಲಿ ಕೆಲಸ ಪೂರ್ಣಗೊಳಿಸಬೇಕು ಎಂದು ತಿಳಿಸಿದ್ದೇವೆ. ಪಿಪಿಪಿ ಮಾದರಿಯ ಒಪ್ಪಂದದಲ್ಲಿ ಹಾಗೆಯೇ ಇದೆ ಎಂದರು.
ಮಾಲ್ ನಿರ್ಮಾಣದಿಂದ ತುಮಕೂರಿಗೆ ಮತ್ತೊಂದು ಗರಿ ಸೇರ್ಪಡೆ ಆಗುತ್ತದೆ. ಇದು ಒಳ್ಳೆಯ ಬೆಳವಣಿಗೆ ಎಂದು ಭಾವಿಸುತ್ತೇವೆ ಎಂದು ಹೇಳಿದರು.
ಮಾಲ್ ಕಾಮಗಾರಿಗೆ ಬಿಜೆಪಿ ವಿರೋಧ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, ಬಿಜೆಪಿಯವರು ವಿರೋಧ ಪಕ್ಷದವರು. ಅವರು ಇರುವುದೇ ವಿರೋಧ ಮಾಡೋಕೆ. ಅಭಿವೃದ್ಧಿ ಮಾಡೋದಕ್ಕೆ ನಾವಿದ್ದೇವೆ. ವಿರೋಧ ಮಾಡೋಕೆ ಅವರಿದ್ದಾರೆ. ಅದಕ್ಕೆ ಜನ ನಮ್ಮನ್ನ ಇಲ್ಲಿಟ್ಟಿದ್ದಾರೆ. ಅವರನ್ನ ಅಲ್ಲಿಟ್ಟಿದ್ದಾರೆ ಎಂದು ತಿರುಗೇಟು ನೀಡಿದರು.
ಕಾಮಗಾರಿ ಮಾಡುವುದಕ್ಕೆ ಯಾರ ಸ್ವಾರ್ಥವೂ ಇಲ್ಲ. ಪರ, ವಿರೋಧವೂ ಇಲ್ಲ. ನಮ್ಮ ಕೆಲಸವನ್ನ ನಾವು ಮಾಡ್ತಿದ್ದೇವೆ. ನಾನು ಸ್ಥಳೀಯ ಶಾಸಕರಲ್ಲಿ ಅಭಿವೃದ್ದಿಗೆ ಸಹಕರಿಸಿ ಎಂದು ಮಾಡಿಕೊಳ್ಳುತ್ತೇನೆ. ಅವರಿಗೂ ಅಭಿವೃದ್ಧಿ ಮಾಡಬೇಕು ಅಂತಾ ಆಸೆ ಇದೆ. ಬೇರೆ ಬೇರೆ ಕಾರಣಗಳಿಂದ ಆಗುತ್ತಿಲ್ಲ ಎಂದು ಹೇಳಿದರು.
ಗಣೇಶನ ದೇವಸ್ಥಾನವನ್ನ ಮೊದಲು ಕಟ್ಟಿ, ಎಲ್ಲಾ ವಿಘ್ನಗಳನ್ನ ನಿವಾರಣೆ ಮಾಡಿಕೊಂಡು ಕೆಲಸ ಮಾಡುತ್ತೇವೆ. ಯಾರು ಮೊದಲು ಮಾರುಕಟ್ಟೆಯಲ್ಲಿ ಹೂ, ಹಣ್ಣು -ತರಕಾರಿಗಳನ್ನು ಮಾರಾಟ ಮಾಡುತ್ತಿದ್ದರೋ ಅವರೆಲ್ಲರಿಗೂ ಮೊದಲ ಮಹಡಿಯಲ್ಲಿ ಅವಕಾಶ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.