ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ವರದಿಯನ್ನು ಜಾರಿಗೆ ತಂದು ಕೆಳ ವರ್ಗದ ಮತ್ತು ಅಲೆಮಾರಿ ಸಮುದಾಯಗಳಿ ಸೌಲಭ್ಯ ಕಲ್ಪಿಸಲು ಮುಂದಾಗಬೇಕೆಂದು ಅಖಿಲ ಕರ್ನಾಟಕ ಹಂದಿಜೋಗಿ ಸಂಘ ಸರ್ಕಾರ ಒತ್ತಾಯಿಸಿದೆ.
ತುಮಕೂರಿನ ಐಎಂಎ ಹಾಲ್ನಲ್ಲಿ ಅಖಿಲ ಕರ್ನಾಟಕ ಹಂದಿಜೋಗಿ ಸಂಘದ ಜಿಲ್ಲಾ ಶಾಖೆಯ ಪದಾಧಿಕಾರಿಗಳ ಆಯ್ಕೆ ಸಮಾರಂಭದಲ್ಲಿ ಈ ಒತ್ತಾಯ ಮಾಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ಇಲಾಖೆಯ ನಿವೃತ್ತ ಉಪನಿರ್ದೇಶಕರು ಹಾಗೂ ತುಮಕೂರು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಎಚ್.ವಿ.ರಂಗಸ್ವಾಮಿ, ಕಾಂತರಾಜು ವರದಿ ಜಾರಿಗೆ ಬಂದಿದ್ದರೆ ಹಿಂದುಳಿದ ಮತ್ತು ಪರಿಶಿಷ್ಠ ಜಾತಿಯಲ್ಲಿ ಸರ್ಕಾರದ ಸೌಲಭ್ಯಗಳನ್ನೂ ಪಡೆಯಲು ಸಾಧ್ಯವಾಗದ ಮೈಕ್ರೋಸ್ಕೋಪಿಕ್ ಜಾತಿಗಳಿಗೆ ತುಂಬಾ ಅನುಕೂಲವಾಗುತ್ತಿತ್ತು ಎಂದರು.
ಕಾಂತರಾಜು ವರದಿಯನ್ನು ಜಾರಿಗೆ ತರುವುದಷ್ಟೇ ಅಲ್ಲ, ಆ ವರದಿಯನ್ನು ಒಪ್ಪಿಕೊಳ್ಳಬೇಕು, ವರದಿ ಇನ್ನೂ ಮಂಡನೆಯೇ ಆಗಿಲ್ಲ ಕಡತದಲ್ಲೇ ಇದೆ, ಆ ವರದಿಯಲ್ಲಿ ಯಾವ ಯಾವ ಜಾತಿ ಎಷ್ಟಿದೆ, ಏನು ಕುಲ ಕಸುಬು ಮಾಡುತ್ತಿದ್ದಾರೆ, ವಾಹನ, ಜಮೀನು, ಆರ್ಥಿಕ, ಸಾಮಾಜಿಕ ಮಟ್ಟ ಸೇರಿದಂತೆ 54 ಅಂಶಗಳನ್ನು ಅಧ್ಯಯನ ಮಾಡಿದ್ದಾರೆ. ಆ ಹಿನ್ನಲೆಯಲ್ಲಿ ಕಾಂತರಾಜು ವರದಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಪ್ರಜಾಪ್ರಭುತ್ವದಲ್ಲಿ ಸಂಖ್ಯೆಯೇ ಎಲ್ಲಾ ಸೌಲಭ್ಯ ಪಡೆಯಲು ಸಹಕಾರಿಯಾಗಿದೆ. ಶೋಷಿತ ಸಣ್ಣ ಜಾತಿಗಳು ಒಡೆದು ಹೋಗಿರುವ ಜಾತಿಗಳಾಗಿವೆ. ಈ ಎಲ್ಲಾ ಜಾತಿಗಳು ಒಗ್ಗೂಡಿ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಸರ್ಕಾರಕ್ಕೆ ನಮ್ಮ ಪಾಲು ನೀಡುವಂತೆ ಕೇಳಬೇಕು, ಒಂದಾಗದಿದ್ದರೆ ನೀರಿನಲ್ಲಿ ಮುಳುಗಿದಂತೆ, ಹಾಗಾಗಿ ಸಣ್ಣ-ಪುಟ್ಟ ಜಾತಿಗಳು ಒಂದುಗೂಡಬೇಕಾಗಿದೆ ಎಂದು ಸಲಹೆ ನೀಡಿದರು.
ಮೇಲ್ಜಾತಿಯವರು ಮಠ-ಮಾನ್ಯಗಳನ್ನು ಕಟ್ಟಿಕೊಂಡು ಸಾಮಾಜಿಕವಾಗಿ, ಆರ್ಥಿಕವಾಗಿ ಮುಂದುವರೆದಿದ್ದಾರೆ, ಕೆಳ ಜಾತಿಯ ಶೋಷಿತ ಜಾತಿಗಳಿಗೆ ಇಂತಹ ಅವಕಾಶ ಇಲ್ಲ. ಹೀಗಾಗಿ ಇದುವರೆಗೂ ಮೇಲ್ವರ್ಗದವರ ಪಲ್ಲಕ್ಕಿ ಹೊರುವ ಸ್ಥಿತಿ ಇದೆ, ಆದ್ದರಿಂದ ಕಂದಾಚಾರ, ಮೂಡನಂಬಿಕೆಗಳನ್ನು ಬದಿಗೊತ್ತಿ ಹಂದಿಜೋಗಿ, ಹೆಳವ, ಕೊರಮ, ಕೊರಚ, ಬುಡಬುಡಿಕೆ, ಶಿಳ್ಳೆಕ್ಯಾತ, ಇನ್ನೂ ಮುಂತಾದ ಮೈಕ್ರೋಸ್ಕೋಪಿಕ್ ಜಾತಿಗಳು ಒಗ್ಗಾಟ್ಟಾಗಿ ತಮ್ಮ ಸೌಲಭ್ಯಗಳಿಗಾಗಿ ಹೋರಾಟ ನಡೆಸುವ ಅನಿವಾರ್ಯ ಈಗ ಬಂದಿದೆ ಎಂದರು.
ಸಭೆಯಲ್ಲಿ ಅಲೆಮಾರಿ-ಅರೆಅಲೆಮಾರಿ ಸಂಘದ ರಾಜ್ಯಾಧ್ಯಕ್ಷ ಎಂ.ವಿ.ವೆಂಕಟರಮಣಯ್ಯ, ಅಗರೆ ಗೋವಿಂದರಾಜು, ಅಖಿಲಾ ಕರ್ನಾಟಕ ಹಂದಿಜೋಗಿ ಸಂಘದ ರಾಜ್ಯಾಧ್ಯಕ್ಷ ರಾಜೇಂದ್ರಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಡ್ಯ ರಾಜು, ಉಪಾಧ್ಯಕ್ಷರಾದ ಪಿಳ್ಳಣ್ಣ, ಸಿ.ಗೋವಿಂದರಾಜು, ತಿಪಟೂರು ರಂಗಸ್ವಾಮಿ, ಖಜಾಂಚಿ ಮಡಿವಾಳ ವೆಂಕಟರಾಮು ಉಪಸ್ಥಿತರಿದ್ದರು.