ಸೇವೆ ಖಾಯಂಗೊಳಿಸುವುದು ಹಾಗೂ ಸೇವಾ ಭದ್ರತೆಗಾಗಿ ಆಗ್ರಹಿಸಿ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನಾ ಧರಣಿ 26ನೇ ದಿನವೂ ಮುಂದುವರೆಯಿತು. ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಧರಣಿಯಲ್ಲಿ ತಮಟೆ ಬಡಿದು ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅತಿಥಿ ಉಪನ್ಯಾಸಕ ಡಾ. ವೆಂಕಟೇಶ್, ಅತಿಥಿ ಉಪನ್ಯಾಸಕರು ಪ್ರತಿಭಟನಾ ಧರಣಿಗಳನ್ನು ಮಾಡುತ್ತಾ ಬಂದರೂ ಸರ್ಕಾರ ಮಾತ್ರ ನಮಗೆ ನ್ಯಾಯ ದೊರಕಿಸುವ ಯಾವುದೇ ಚಿಂತನೆ ಮಾಡಿಲ್ಲ. ನಮ್ಮ ಸ್ಥಿತಿ, ನಮ್ಮ ಸಮಸ್ಯೆ ಗಂಭೀರವಾಗಿದ್ದು, ಸರ್ಕಾರ ನಮ್ಮ ಜೀವನವನ್ನು ಅರಿತುಕೊಂಡು ಸೇವೆ ಖಾಯಂ ಮಾಡಬೇಕು ಎಂದು ಆಗ್ರಹಿಸಿದರು.
ಅತಿಥಿ ಉಪನ್ಯಾಸಕ ಡಾ. ಹನುಮಂತರಾಯಪ್ಪ ಮಾತನಾಡಿ, ಸರ್ಕಾರ ನಮ್ಮ ಬೇಡಿಕೆಯನ್ನು ಏಕೆ ಜೀವಂತವಾಗಿ ಇರಿಸಿಕೊಂಡಿದೆ ಎಂಬುದು ಅರ್ಥವಾಗುತ್ತಿಲ್ಲ. ಅತಿಥಿ ಉಪನ್ಯಾಸಕರು ಒಂದು ರೀತಿಯ ಶೋಷಣೆ, ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಕಡಿಮೆ ವೇತನಕ್ಕೆ ದುಡಿಸಿಕೊಳ್ಳಲಾಗುತ್ತಿದೆ. ಯಾವುದೇ ಸರ್ಕಾರಿ ಸೌಲಭ್ಯಗಳಿಲ್ಲದೆ ನಮ್ಮನ್ನು ಶೋಷಣೆ ಮಾಡುತ್ತ ಬಂದಿದೆ. ಹೀಗಾಗಿ ಸಿದ್ದರಾಮಯ್ಯ ಸರ್ಕಾರ 12,500 ಅತಿಥಿ ಉಪನ್ಯಾಸಕರಿಗೆ ಉದ್ಯೋಗ ಭಾಗ್ಯ ನೀಡಬೇಕು ಎಂದು ಒತ್ತಾಯಿಸಿದರು.
ಅತಿಥಿ ಉಪನ್ಯಾಸಕರ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಡಾ. ಧರ್ಮವೀರ್ ಮಾತನಾಡಿ, ರಾಜ್ಯ ಸರ್ಕಾರ ಮೂರ್ನಾಲ್ಕು ದಿನಗಳಲ್ಲಿ ನಮ್ಮ ಸಮಸ್ಯೆ ಬಗೆಹರಿಸದಿದ್ದರೆ ತುಮಕೂರಿನ ಸಿದ್ದಗಂಗಾ ಮಠದಿಂದ ಬೆಂಗಳೂರಿನ ವಿಧಾನಸೌಧದವರೆಗೆ ಪಾದಯಾತ್ರೆಗೆ ಸಿದ್ಧತೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.
ಒಂದೆರಡು ದಿನಗಳಲ್ಲಿ ಇದರ ರೂಪುರೇಷೆಗಳನ್ನು ಸಿದ್ದಪಡಿಸಿ ಪಾದಯಾತ್ರೆ ಕೈಗೊಳ್ಳಲು ಸಿದ್ದರಾಗಿದ್ದೇವೆ. ಈ ಪಾದಯಾತ್ರೆಯಲ್ಲಿ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಿಂದ ಅತಿಥಿ ಉಪನ್ಯಾಸಕರು ಭಾಗಬಹಿಸಲ್ಲಿದ್ದಾರೆ, ಸರ್ಕಾರ ಲಿಖಿತ ರೂಪದಲ್ಲಿ ನಮ್ಮ ಕಾಯಮಾತಿ ಆದೇಶ ಕೊಡುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ. ಇನ್ನೊಂದೆರಡು ದಿನ ಕಾದು ನಾವೆಲ್ಲರೂ ಪಾದಯಾತ್ರೆ ಪ್ರಾರಂಭಿಸುವುದಾಗಿ ಹೇಳಿದರು.
ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರಾದ ಶಶಿಧರ್, ಶಿವಣ್ಣ ತಿಮ್ಮಲಾಪುರ, ಮಲ್ಲಿಕಾಜುನ್, ಗಿರಿಜಮ್ಮ, ನಟರಾಜು, ಪುಟ್ಟರಾಜು, ನಾಗ ದೀಪ್ತಿ, ಮಮತಾ, ರಾಮಲಕ್ಷ್ಮಿ, ಸುನಿಲ್, ಯಶಸ್ವಿನಿ, ಸ್ವರೂಪ, ಕಾಂತರಾಜು, ಶಶಿಕುಮಾರ್, ಅನಿತಾ, ಶಂಕರ್ ಹಾರೋಗೆರೆ, ಸ್ಮಿತಾ, ರಮ್ಯ, ಗಿರೀಶ್, ವೇದಮೂರ್ತಿ, ಸಿದ್ದಲಿಂಗಯ್ಯ, ಮಹೇಶ್, ತೊಂಟರಾಧ್ಯ, ಮಲ್ಲಿಕಾರ್ಜುನ್, ಹರ್ಷ, ಸುಧಾ, ಜ್ಯೋತಿ, ಶಂಕರ್ ಇತರರು ಇದ್ದರು.