Saturday, July 27, 2024
Google search engine
Homeಚಳುವಳಿಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ 72 ಗಂಟೆಗಳ ಅಹೋರಾತ್ರಿ ಹೋರಾಟ - ರೈತ ಸಂಘ

ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ 72 ಗಂಟೆಗಳ ಅಹೋರಾತ್ರಿ ಹೋರಾಟ – ರೈತ ಸಂಘ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ, ಕಾರ್ಮಿಕ, ಯುವಜನ ಜನವಿರೋಧಿ ನೀತಿಗಳನ್ನು ಖಂಡಿಸಿ, ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾಸಮಿತಿ ವತಿಯಿಂದ ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ನವೆಂಬರ್ 26ರಿಂದ 28ರವರೆಗೆ 72 ಗಂಟೆಗಳ ಬೃಹತ ಆಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ, ಕಾರ್ಮಿಕರಿಗೆ ಕೊಟ್ಟ ಭರವಸೆಯನ್ನು ಈಡೇರಿಸದೆ, ಮಾತಿಗೆ ತಪ್ಪಿರುವ ಎರಡು ಸರ್ಕಾರಗಳ ವಿರುದ್ದ ಸುಮಾರು 50 ಸಾವಿರಕ್ಕೂ ಹೆಚ್ಚು ಜನ ರೈತರು, ಕಾರ್ಮಿಕರು, ಯುವಜನರು ಈ ಹೋರಾಟದಲ್ಲಿ ಭಾಗಿಯಾಗುತ್ತಿದ್ದಾರೆ ಎಂದರು.

ಕೇಂದ್ರದಲ್ಲಿರುವ ನೆರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಸುಗ್ರಿವಾಜ್ಞೆಯ ಮೂಲಕ ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳನ್ನು ರೈತರ ನಿರಂತರ 13 ತಿಂಗಳ ಹೋರಾಟ ಮತ್ತು 780 ರೈತರು ಹುತಾತ್ಮರಾದ ನಂತರ ಕಾಯ್ದೆಯನ್ನು ವಾಪಸ್ ಪಡೆದ ಸರ್ಕಾರ, ಆ ಸಂದರ್ಭದಲ್ಲಿ ಕಾನೂನಾತ್ಮಕ ಬೆಂಬಲ ಬೆಲೆ ಕಾಯ್ದೆ ತರುವುದು ಮತ್ತು ವಿದ್ಯುತ್ ಖಾಸಗೀಕ ರಣ ಕಾಯ್ದೆ ಕೈಬಿಡುವ ಭರವಸೆ ನೀಡಿತ್ತು. ಆದರೆ ಇದುವರೆಗೂ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿಲ್ಲ. ಹಾಗಾಗಿ ಕೇಂದ್ರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದ ಕೃಷಿ ಕಾಯ್ದೆಗಳನ್ನು ಇಡೀ ದೇಶದಲ್ಲಿ ಮೊದಲ ಬಾರಿಗೆ ಬಿ.ಎಸ್.ಯಡಿಯೂರಪ್ಪ ಕರ್ನಾಟಕದಲ್ಲಿ ಜಾರಿಗೆ ತಂದಿದರು. ಇದರ ವಿರುದ್ದ ಹೋರಾಟ ಆರಂಭವಾದಾಗ ಅಂದು ವಿರೋಧಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಹೋರಾಟಗಾರರೊಂದಿಗೆ ಬೆಂಬಲ ಸೂಚಿಸಿ, ಸಭೆಗಳಲ್ಲಿ ಪಾಲ್ಗೊಂಡು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಭರವಸೆ ನೀಡಿದ್ದರು. ಆದರೆ ಸರ್ಕಾರ ಬಂದು ಐದು ತಿಂಗಳು ಕಳೆದರೂ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಸರ್ಕಾರ ಕೊಟ್ಟ ಮಾತಿಗೆ ತಪ್ಪಿದೆ. ಹಾಗಾಗಿ ರಾಜ್ಯ ಸರ್ಕಾರದ ವಿರುದ್ದವೂ ಹೋರಾಟ ನಡೆಯಲಿದೆ ಎಂದರು.

ಕಾರ್ಮಿಕರು ದೇಶದ ಆಸ್ತಿ. ದಿನದ 24 ಗಂಟೆಗಳಲ್ಲಿ 8 ಗಂಟೆ ದುಡಿಮೆಗೆ ಅವಕಾಶವಿತ್ತು. ಆದರೆ ಅದನ್ನು 12 ಗಂಟೆಗೆ ಹೆಚ್ಚಿಸಲಾಗಿದೆ. ಇದು ಅಂತರರಾಷ್ಟ್ರೀಯ ಕಾರ್ಮಿಕ ಕಾಯ್ದೆಗೆ ವಿರುದ್ದವಾಗಿದೆ. ಕಾರ್ಮಿಕರ ಪರವಾಗಿದ್ದ ಸುಮಾರು 44 ಕಾಯ್ದೆಗಳನ್ನು ರದ್ದು ಮಾಡಿ, ಆ ಜಾಗದಲ್ಲಿ 4 ಬಂಡವಾಳಶಾಹಿ ಪರ ಸಂಹಿತೆಗಳನ್ನು ಜಾರಿಗೆ ತರಲಾಗಿದೆ. ಇದರ ವಿರುದ್ದ ನಿರಂತರ ಹೋರಾಟವನ್ನು ಕಾರ್ಮಿಕರು ನಡೆಸುತ್ತಿದ್ದಾರೆ ಎಂದು ಹೇಳಿದರು.

ಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಶಂಕರಪ್ಪ,ಸಂಘಟನಾ ಕಾರ್ಯದರ್ಶಿ ರವೀಶ್, ಜಿಲ್ಲಾ ಮಹಿಳಾ ಅಧ್ಯಕ್ಷ ನಾಗರತ್ನಮ್ಮ, ಕೆ.ಎನ್.ವೆಂಕಟೇಗೌಡ, ಪಾವಗಡ ಪೂಜಾರಪ್ಪ, ಚಿಕ್ಕಬೋರೇಗೌಡ, ನರಸಿಂಹಮೂರ್ತಿ, ಲೋಕೇಶ್, ಅರಕೆರೆ ಮಂಜು, ಭಾಗ್ಯಮ್ಮ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular