ದ್ವೇಷ ಮತ್ತು ಸುಳ್ಳಿನ ರಾಜಕೀಯದ ವಿರುದ್ಧ ರಾಜ್ಯವ್ಯಾಪಿ ನವೆಂಬರ್ 1 ರಿಂದ 10ರವರೆಗೆ ದ್ವೇಷ ಅಳಿಸೋಣ, ದೇಶ ಉಳಿಸೋಣ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಪ್ ಇಂಡಿಯಾದ ತುಮಕೂರು ಜಿಲ್ಲಾಧ್ಯಕ್ಷ ತಾಜುದ್ದೀನ್ ಷರೀಫ್ ತಿಳಿಸಿದ್ದಾರೆ.
ನವೆಂಬರ್ ಒಂದ ರಿಂದಾ ಅಭಿಯಾನದ ಸಂಧರ್ಭದಲ್ಲಿ ಬಿತ್ತಿ ಪತ್ರ ಬಿಡುಗಡೆ, ಅಭಿಯಾನದ ಕುರಿತು ವೀಡಿಯೋ ಬಿಡುಗಡೆ, ವಿಚಾರ ಗೋಷ್ಠಿ,ಕಾರ್ನರ್ ಮೀಟಿಂಗ್, ಸಾರ್ವಜನಿಕ ಸಭೆ, ಬೀದಿ ನಾಟಕ, ಜಾಥಾ ಬೈಕ್ ರ್ಯಾಲಿ,ರಾಷ್ಟ್ರಪತಿಗಳಿಗೆ ಮನವಿ, ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ನಮ್ಮ ದೇಶ ಭಾರತ ಎಲ್ಲ ಧರ್ಮದವರು ಸೇರಿ ಶಾಂತಿಯುತವಾಗಿ ಸೌಹಾರ್ದಯುತವಾಗಿ ಬಾಳುವ ದೇಶವಾಗಿದೆ. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಜನರ ನಡುವೆ ಧರ್ಮದ ಹೆಸರಲ್ಲಿ ದ್ವೇಷ ಹುಟ್ಟಿಸುವ ಮತ್ತು ಸುಳ್ಳು ಸುದ್ದಿಗಳನ್ನು ಹರಡಿಸಿ ಜನರ ನೆಮ್ಮದಿ ಕೆಡಿಸುವ ಕಾರ್ಯ ಎಗ್ಗಿಲ್ಲದೆ ನಿರಂತರ ನಡೆಯುತ್ತಿದೆ ಕೆಲವು ಸ್ವಾರ್ಥ ರಾಜಕಾರಣಿಗಳು ತಮ್ಮ ಅಧಿಕಾರವನ್ನು ಭದ್ರ ಪಡಿಸಲು ಸುಳ್ಳಿನ ಮುಖಾಂತರ ಜನರ ನಡುವೆ ದ್ವೇಷದ ಕಿಚ್ಚು ಹಚ್ಚುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ನಮ್ಮ ಕನ್ನಡನಾಡಿನಲ್ಲಿ ಪ್ರಚೋದನಕಾರಿ ಭಾಷಣಗಳು ಇತ್ತೀಚೆಗೆ ವ್ಯಾಪಕವಾಗಿ ನಡೆಯುತ್ತಿದೆ. ಇದು ರಾಜ್ಯದ ಸೌಹಾರ್ದ ವಾತಾವರಣ ಮತ್ತು ಅಭಿವೃದ್ಧಿಗೆ ಮಾರಕ ಎಂಬುದು ನಿಸ್ಸಂಶಯ. ಇದು ಎಲ್ಲಾರೀತಿಯಲ್ಲಿಯೂ ಹಾನಿಕಾರಕ ಎಂದಿದ್ದಾರೆ.
ಸಮಾಜದಲ್ಲಿ ಅಶಾಂತಿಯ ವಾತಾವರಣ ಇದ್ದರೆ ಕನ್ನಡಿಗರು ಒಟ್ಟಾಗಿ ನೆಮ್ಮದಿಯಿಂದ ಬದುಕಲು ಸಾಧ್ಯವೇ? ಖಂಡಿತವಾಗಿಯೂ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಪರಿಸ್ಥಿತಿಯ ಗಾಂಭೀರ್ಯತೆ ಮನಗಂಡು ರಾಜ್ಯದಲ್ಲಿ ಶಾಂತಿ ಸೌಹಾರ್ದತೆ ನೆಲೆಯೂರಲಿ ಎಂಬ ಸದಾಶಯದಿಂದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಘಟಕವು 10 ದಿನಗಳ ಕಾಲ ದ್ವೇಷ ಅಳಿಸೋಣ ದೇಶ ಉಳಿಸೋಣ ಎಂಬ ಶೀರ್ಷಿಕೆಯಲ್ಲಿ ಈ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದ್ದಾರೆ.
ಅಭಿಯಾನದ ಉದ್ದೇಶ ರಾಜ್ಯದ ನಾಗರಿಕರಲ್ಲಿ ದ್ವೇಷ ರಾಜಕೀಯದ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಕುಗ್ಗುತ್ತಿರುವ ರಾಜಕೀಯ ಸ್ಥಾನ ಮತ್ತು ಅದರ ಪರಿಣಾಮಗಳ ಬಗ್ಗೆ ಜಾಗ್ರತಿ ಮೂಡಿಸುವುದು, ಪ್ರಸ್ತುತ ಸನ್ನಿವೇಶದಲ್ಲಿ ಮೌಲ್ಯಧಾರಿತ ರಾಜಕೀಯದ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಮತ್ತು ಪ್ರೀತಿ, ಶಾಂತಿ ಸಹೋದರತೆ ಬಯಸುವ ನಾಗರಿಕರಿಗೆ ಒಗ್ಗೂಡಿಸಿ ದ್ವೇಷ ಮತ್ತು ಸುಳ್ಳಿನ ರಾಜಕೀಯದ ವಿರುದ್ಧ ದ್ವನಿ ಎತ್ತಲು ಪ್ರೇರೇಪಿಸುವುದಾಗಿದೆ ಎಂದು ಹೇಳಿದ್ದಾರೆ.