ಜಾಗತಿಕ ಶಾಂತಿ ಬಯಸಿ ಯುದ್ದ ನಿಲ್ಲಿಸುವಂತೆ ನಡೆಸಲಾದ ಪ್ರತಿಭಟನೆ ಸಂಬಂಧ ಪೊಲೀಸರು ಸ್ವಯಂ ದೂರು ದಾಖಲಿಸಿದ್ದು, ಶಾಂತಿ ಸ್ಥಾಪನೆಗಾಗಿ ಪ್ರತಿಭಟಿಸಿದವರ ಮೇಲೆ ಹಾಕಿರುವ ಮೊಕದ್ದಮೆಯನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ತುಮಕೂರು ಜಿಲ್ಲಾ ಅಡಿಷನಲ್ ಎಸ್ ಪಿ ಮರಿಯಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪಿಯುಸಿಎಲ್ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಅಡಿಷನಲ್ ಎಸ್.ಪಿ ಅವರನ್ನು ಭೇಟಿ ಮಾಡಿದ ಒಕ್ಕೂಟದ ಸದಸ್ಯರು, ಶಾಂತಿ ಸ್ಥಾಪನೆಗಾಗಿ ಹೋರಾಟ ಮಾಡಿದ ಮುಖಂಡರ ಮೇಲೆ ಕೇಸಿನಲ್ಲಿ ದಾಖಲಿಸಿರುವ ವಿಚಾರವು ಸತ್ಯಕ್ಕೆ ದೂರವಾಗಿದೆ. ಈ ವಿಚಾರವನ್ನು ಪರಿಶೀಲಿಸಿ ಆಗಿರುವ ಅವಘಡವನ್ನು ಸರಿಪಡಿಸುವಂತೆ ಮನವಿ ಮಾಡಿದರು.
ಪ್ರಗತಿಪರ ಸಂಘಟನೆಗಳ ಒಕ್ಕೂಟ ತುಮಕೂರು ಇದು ಜನಪರ, ಜೀವಪರ, ಶಾಂತಿಪರ, ರೈತ, ದಲಿತ, ಕಾರ್ಮಿಕ, ಸಾಮಾಜಿಕ ಸಂಘಟನೆಗಳ ಒಕ್ಕೂಟವಾಗಿದೆ. ಈ ಒಕ್ಕೂಟವು ದಶಕಗಳಿಂದ ಕಲ್ಪತರು ನಾಡಿನ ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಗಾಗಿ ಜನತೆಯ ಹಿತದೃಷ್ಟಿಯಿಂದ ಸಂವಿಧಾನಿಕ ಹಕ್ಕುಗಳ ರಕ್ಷಣೆಗಾಗಿ ದುಡಿಯುತ್ತ ಬರುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಒಕ್ಕೂಟವು ಜೀವ ವಿರೋಧಿ, ಸಂವಿಧಾನಿಕ ಹಕ್ಕುಗಳಿಗಾಗಿ ಧಕ್ಕೆ ಸೇರಿದಂತೆ ಯಾವುದೇ ಕೃತ್ಯಗಳು ನಡೆದರೂ ತನ್ನ ಶಾಂತಿಯುತ ಪ್ರತಿರೋಧವನ್ನು ದಾಖಲಿಸುವ ಮತ್ತು ಜನತೆಯನ್ನು ಎಚ್ಚರಿಸುವ ಕೆಲಸ ಮಾಡಿಕೊಂಡು ಬಂದಿದೆ ಎಂದು ಒಕ್ಕೂಟದ ಸದಸ್ಯರು ತಿಳಿಸಿದ್ದಾರೆ.
ಅಕ್ಟೋಬರ್ 20, 2023ರಂದು ಯುದ್ದ ವಿರೋಧಿ ಪ್ರತಿಭಟನೆಯನ್ನು ಶಾಂತಿಯುತವಾಘಿ ನಗರದ ಟೌನ್ ಹಾಲ್ ವೃತ್ತದಲ್ಲಿ ನಡೆಸಲಾಗಿದೆ. ಈ ಪ್ರತಿಭಟನೆಯು ಜಾಗತಿಕ ಶಾಂತಿ ಬಯಸಿ, ಯುದ್ದ ನಿಲ್ಲಿಸುವಂತೆ ಒತ್ತಾಯಿಸಿ ನಡೆಸಲಾದ ಪ್ರತಿಭಟನೆಯಾಗಿದೆ ಎಂದು ಒಕ್ಕೂಟದ ಸದಸ್ಯರು ಸ್ಪಷ್ಟಪಡಿಸಿದ್ದಾರೆ.
ಆದರೆ ಈ ಸಂಬಂಧ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದು ಮುಖಂಡರ ಮೇಲಿನ ಕೇಸಿನಲ್ಲಿ ದಾಖಲಿಸಿರುವ ವಿಚಾರವು ಸತ್ಯಕ್ಕೆ ದೂರವಾದ ವಿಚಾರವಾಗಿದೆ. ಆದ್ದರಿಂದ ತಾವು ಈ ವಿಚಾರವನ್ನು ಪರಿಶೀಲಿಸಿ ಆಗಿರುವ ಅವಘಡವನ್ನು ಸರಿಪರಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಪಿಯುಸಿಎಲ್ ಅಧ್ಯಕ್ಷ ಕೆ.ದೊರೈರಾಜ್, ಸ್ಲಂ ಜನಾಂದೋಲನ ಸಂಚಾಲಕ ಎ.ನರಸಿಂಹಮೂರ್ತಿ, ಜನವಾಧಿ ಮಹಿಳಾ ಸಂಘಟನೆಯ ಕಲ್ಪನಾ, ಎಂಎಸ್ಎಸ್ ನ ಕಲ್ಯಾಣಿ, ಎಸ್.ಎನ್.ಸ್ವಾಮಿ, ಎಪಿಸಿಆರ್ ನ ಅಫ್ಜಲ್ ಖಾನ್, ಸಲಿಡಾರ್ಟಿ ಯೂತ್ ಮೂವ್ ಮೆಂಟ್ ನ ಉಮರ್ ಫಾರೂಕ್ ಮೊದಲಾದವರು ಉಪಸ್ಥಿತರಿದ್ದರು.
ಮನವಿ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಡೈರಕ್ಟರ್ ಜನರಲ್ ಮತ್ತು ಇನ್ಪೆಕ್ಟರ್ ಜನರಲ್ ಆಫ್ ಪೊಲೀಸ್, ಕೇಂದ್ರ ವಲಯದ ಆರಕ್ಷಕ ಮಹಾ ನಿರೀಕ್ಷಕರಿಗೆ ಸಲ್ಲಿಸಿದ್ದಾರೆ.