ಅಬಕಾರಿ ಸಚಿವರು ರಾಜ್ಯದಲ್ಲಿ ಒಂದು ಸಾವಿರ ಮದ್ಯದ ಅಂಗಡಿಗಳನ್ನು ತೆರೆಯಲಾಗುವುದು ಎಂದು ಹೇಳಿಕೆ ನೀಡಿರುವುದು ಬಡಜನರ ವಿರೋಧಿ ನೀತಿಯಾಗಿದೆ ಎಂದು ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಹೇಳಿದ್ದಾರೆ.
ಸ್ಲಂಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ 154ನೇ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ತುಮಕೂರು ಶಿರಾಗೇಟ್ನ ಎಸ್.ಎನ್ ಪಾಳ್ಯ ಸ್ಲಂನಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
ನಗರ ಪ್ರದೇಶಗಲ್ಲಿ ಕೂಲಿ ಮಾಡುವ ಬಡಜನರ ನೆಮ್ಮದಿಯ ಜೀವನವನ್ನು ಹಾಳು ಮಾಡುವ ನೀತಿಗೆ ನಮ್ಮ ವಿರೋಧವಿದೆ. ಜನತೆಯನ್ನು ನಶೆಗೆ ತಳ್ಳುವ ಸರ್ಕಾರದ ನಡೆಯಿಂದ ಹಿಂದೆ ಸರಿಯಬೇಕು. ನಾಗರೀಕ ಸಮಾಜಕ್ಕೆ ಬೇಕಿರುವುದು ನೀರು, ನೈರ್ಮಲ್ಯ, ಆರೋಗ್ಯ ಮತ್ತು ಆಹಾರ. ಈ ಅಂಶಗಳನ್ನು ಸರ್ಕಾರಗಳು ಬಲಿಷ್ಠಗೊಳಿಸಬೇಕೆ ಹೊರತು ಮದ್ಯದ ನಶೆಯನ್ನಲ್ಲ ಎಂದು ಸಲಹೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟವಾದ ನಿಲುವನ್ನು ತೆಗೆದುಕೊಳ್ಳಬೇಕು. ಸರ್ಕಾರದ ಈ ನಡೆಯಿಂದ ಹಿಂದೆ ಸರಿಯದಿದ್ದರೆ ರಾಜ್ಯಾದ್ಯಂತ ಜನಾಂದೋಲನ ಹಮ್ಮಿಕೊಂಡು ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ ಭಾರತಕ್ಕೆ ಮಾಧರಿಯಾಗಿದ್ದು ಈ ಮಾದರಿಯ ಹಲವಾರು ಸಮಸ್ಯೆಗಳು ಮತ್ತು ವೈರುಧ್ಯಗಳನ್ನು ಸೃಷ್ಠಿಸುತ್ತಿವೆ. ಜನೋಪಕಾರಿ 5 ಗ್ಯಾರಂಟಿಗಳನ್ನು ಆಧರಿಸಿ ಕರ್ನಾಟಕದಲ್ಲಿ ಕಾಂಗ್ರೇಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಕರ್ನಾಟಕದ ಮಾದರಿ ಅಭಿವೃದ್ಧಿ ಮತ್ತು ಫ್ಯಾಸಿಸಂಗೆ ಪ್ರತಿರೋಧವೆಂಬ ಪ್ರತಿಪಾದನೆಗಳು ದೇಶಾದ್ಯಂತ ಚರ್ಚೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಸರ್ಕಾರ ಮದ್ಯದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿದರೆ ಫ್ಯಾಸಿಸಂ ಮತ್ತು ಬಡಜನರ ಅಭಿವೃದ್ಧಿ ವಿರೋಧಿಗಳಿಗೆ ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಕಾರ್ಯಕರ್ತರಾದ ಗುಲ್ನಾಜ್, ಹನುಮಕ್ಕ ಮಾತನಾಡಿ, ಗೃಹಲಕ್ಷ್ಮಿ, ಗೃಹ ಜ್ಯೋತಿ ಮತ್ತು ಅನ್ನ ಭಾಗ್ಯದಿಂದ ಬಡಜನರಿಗೆ ಅನುಕೂಲವಾಗಿದೆ. ಗಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟಕ್ಕೆ ಮುಂದಾದರೆ ನಮ್ಮ ಕುಟುಂಬದ ಆದಾಯ ಲಿಕ್ಕರ್ ಪಾಲಾಗುತ್ತದೆ. ಹಾಗಾಗಿ ರೇಷನ್ ಅಂಗಡಿಗಳನ್ನು ಇನ್ನಷ್ಟು ಬಲಿಷ್ಠಗೊಳಿಸಲು ಸರ್ಕಾರ ಚಿಂತಿಸಬೇಕು ಎಂದು ಹೇಳಿದರು.