ತುಮಕೂರು ನಗರದಲ್ಲಿ ಮಂಜೂರಾಗಿದ್ದು ರದ್ದಾಗಿರುವ ಹಿಂದೂ, ಮುಸ್ಲೀಂ ಮತ್ತು ಕ್ರಿಶ್ಚಿಯನ್ನರಿಗೆ ಸ್ಮಾಶಾನ ಭೂಮಿಯನ್ನು ಮಂಜೂರು ಮಾಡಬೇಕೆಂದು ಜಿಲ್ಲಾ ಜಾತ್ಯತೀತ ಯುವ ವೇದಿಕೆ ಪದಾಧಿಕಾರಿಗಳು ಮತ್ತು ವಕೀಲರ ತಂಡ ಗೃಹ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಮನವಿ ಪತ್ರ ನೀಡಿ ಒತ್ತಾಯಿಸಿದರು.
ತುಮಕೂರು ಅಮಾನಿಕೆರೆಯ ಗಾಜಿನ ಮನೆಯಲ್ಲಿ ನಡೆದ ಜನತಾ ದರ್ಶನ ಸಭೆಯಲ್ಲಿ ಜಾತ್ಯತೀತ ವೇದಿಕೆಯ ಆಧ್ಯಕ್ಷ ಹಾಗೂ ವಕೀಲರಾದ ಮಾರುತಿ ಪ್ರಸಾದ್ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾರುತಿ ಪ್ರಸಾದ್, ತುಮಕೂರು ನಗರದ ಉಪ್ಪಾರಹಳ್ಳಿಯ ಸರ್ವೇ ನಂಬರ್ 44ರಲ್ಲಿ ಹಿಂದೂ, ಮುಸ್ಲೀಂ ಮತ್ತು ಕ್ರಿಶ್ಚಿಯನ್ ಜನಾಂಗದವರಿಗೆ ಒಟ್ಟು 8 ಎಕರೆ 11 ಗುಂಟೆ ಸ್ಮಶಾನ ಭೂಮಿಯನ್ನು 1996-97ರಲ್ಲಿ ಸರ್ಕಾರ ಮಂಜೂರು ಮಾಡಿ ಆದೇಶ ಹೊರಡಿಸಿತ್ತು.
ಆ ಸಂದರ್ಭದಲ್ಲಿ ನಗರದ ಕೆಲ ನಾಗರಿಕರು ಹೈಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿ ಮಂಜೂರು ಮಾಡಲಾಗಿದ್ದ ಆದೇಶವನ್ನು ರದ್ದುಗೊಳಿಸಿದೆ ಮತ್ತು ಬೇರೆ ಜಾಗವನ್ನು ಒದಗಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಆದೇಶಿಸಿದೆ. ಹೀಗಾಗಿ ಹಿಂದೂ, ಮುಸ್ಲೀಂ ಮತ್ತು ಕ್ರಿಶ್ಚಿಯನ್ ಜನಾಂಗದವರಿಗೆ ಜನಸಂಖ್ಯೆಯ ಆಧಾರದ ಮೇಲೆ ಅಗತ್ಯವಾಗಿ ಶವಸಂಸ್ಕಾರಕ್ಕೆ ಸ್ಮಶಾನ ಭೂಮಿಯ ಅಗತ್ಯವಿರುತ್ತದೆ ಎಂದು ಹೇಳಿದ್ದಾರೆ.
ಸ್ಮಶಾನ ಭೂಮಿಯನ್ನು ಮಂಜೂರು ಮಾಡುವಂತೆ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಗೆ ಹಲವು ಮನವಿಗಳನ್ನು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.
ತುಮಕೂರು ನಾಗರಿಕರಿಗೆ ಸ್ಮಶಾನ ಭೂಮಿಯ ಅಗತ್ಯತೆ ಇದ್ದು, ನಗರದ ಹೊರವಲಯದಲ್ಲಿರುವ ತುಮಕೂರು ತಾಲ್ಲೂಕು ಕಸಬಾ ಹೋಬಳಿ ವ್ಯಾಪ್ತಿಯ ಅಮಲಾಪುರ ಗ್ರಾಮದಲ್ಲಿ ಸರ್ವೇ ನಂ.39ರಲ್ಲಿ 27 ಎಕರೆ 36 ಗುಂಟೆ ಸರ್ಕಾರಿ ಗೋಮಾಳದ ಜಮೀನು ಲಭ್ಯವಿದೆ. ಈವರೆಗೆ ಸದರಿ ಜಮೀನನ್ನು ಯಾರಿಗೂ ಮಂಜೂರು ಮಾಡಿರುವುದಿಲ್ಲ ಎಂಬ ಮಾಹಿತಿ ಇದೆ. ಈ ಭೂಮಿಯನ್ನು ಸ್ಮಶಾನದ ಉದ್ದೇಶಕ್ಕಾಗಿ ಮಂಜೂರು ಮಾಡಿಕೊಟ್ಟಲ್ಲಿ ನಗರದಲ್ಲಿ ವಾಸವಾಗಿರುವ ಹಿಂದುಳಿದ ಜಾತಿಗಳ ಜನರಿಗೆ ಮತ್ತು ಮುಸ್ಲೀಂ ಹಾಗೂ ಕ್ರಿಶ್ಚಿಯನ್ ಜನಾಂಗದವರಿಗೆ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.
ಈ ಸಂಬಂಧ ವಿವಿಧ ಸಂಘ ಸಂಸ್ಥೆಗಳು ಈಗಾಗಲೇ ನೀಡಿರುವ ಮನವಿಗಳನ್ನು ಪರಿಗಣಿಸಿ ಹಿಂದೂ, ಮುಸ್ಲೀಂ ಹಾಗೂ ಕ್ರಿಶ್ಚಿಯನ್ ಜನಾಂಕಗದವರಿಗೆ ಸ್ಮಶಾನದ ಉದ್ದೇಶಕ್ಕಾಗಿ ಅಮಲಾಪುರ ಗ್ರಾಮದ ಸಮೀಪ ಇರುವ ಸರ್ವೇ ನಂ.39ರಲ್ಲಿ ಭೂಮೀಯನ್ನು ಮಂಜೂರು ಮಾಡಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾ ಜಾತ್ಯತೀತ ಯುವ ವೇದಿಕೆ ಅಧ್ಯಕ್ಷ ಮಾರುತಿ ಪ್ರಸಾದ್, ವಕೀಲರಾದ ಈ.ಶಿವಣ್ಣ, ರವಿ, ಕಿರಣ್, ಕೆ.ಈ.ಸಿದ್ದಯ್ಯ, ರಂಗಧಾಮಯ್ಯ ಸೇರಿದಂತೆ ಹಲವರು ಇದ್ದರು.