ಕೊಬ್ಬರಿ ಬೆಂಬಲಬೆಲೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಅಕ್ಟೋಬರ್ 4ರಂದು ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಬ್ಬರಿಗೆ ಕನಿಷ್ಠ 20 ಸಾವಿರ ಬೆಂಬಲ ಬೆಲೆ ನೀಡಬೇಕು, ಹೆಚ್ಚುವರಿಯಾಗಿ 50 ಸಾವಿರ ಮೆಟ್ರಿಕ್ ಟನ್ ಕೊಬ್ಬರಿ ಖರೀದಿಸಬೇಕು ಎಂದು ಆಗ್ರಹಿಸಿ ಸೆಪ್ಟೆಂಬರ್ 26ರಂದು ಅರಸೀಕೆರೆ ಎಪಿಎಂಸಿ ಮಾರುಕಟ್ಟೆಯಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಎಪಿಎಂಸಿ ಕಾಯ್ದೆಯಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾದರೂ ಕಾಯ್ದೆಯನ್ನು ಹಿಂಪಡೆಯುವ ಕೆಲಸವನ್ನು ಮಾಡಿಲ್ಲ, ಸಿದ್ದರಾಮಯ್ಯ ಅವರಿಗೆ ಅಧಿಕಾರದ ಮೇಲಿರುವ ಆಸೆ, ರೈತರ ಹಿತಾಸಕ್ತಿ ಕಾಯುವುದರಲ್ಲಿ ಇಲ್ಲ ಎಂದು ಟೀಕಿಸಿದರು.
ರಾಜ್ಯದಲ್ಲಿಯೇ ಮಳೆ ಕೊರತೆ ಇರುವಾಗ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಅಗತ್ಯವೇನಿತ್ತು? ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟು ತಪ್ಪು ಮಾಡಿದೆ, ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ನೀರು ಹರಿಸಲೇ ಇಲ್ಲ, ಸುಪ್ರೀಂಕೋರ್ಟ್ ಅವರನ್ನು ಬಂಧಿಸಿತಾ? ಅಂತಹ ಧೈರ್ಯವನ್ನು ಕೇಂದ್ರ ಸರ್ಕಾರ ಮಾಡಲಿದೆಯೇ? ರಾಜ್ಯದ ಜನರು ನೋಡುತ್ತಾರೆ ಅಂತಹ ದಿಟ್ಟತನವನ್ನು ಸಿದ್ದರಾಮಯ್ಯ ಪ್ರದರ್ಶಿಸಬೇಕು ಎಂದರು.
ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಕಾಮನ್ ಸೆನ್ಸ್ ಇಲ್ಲ. ಕೊಬ್ಬರಿ ಧಾರಣೆ 12 ಸಾವಿರ ಇದ್ದಿದ್ದರೆ ನಾವೇಕೆ ಬೀದಿಗೆ ಇಳಿದು ಹೋರಾಟ ಮಾಡಬೇಕಿತ್ತು? ಕೊಬ್ಬರಿ ಧಾರಣೆ 8 ಸಾವಿರಕ್ಕೆ ಇಳಿದಿದೆ, ಅದಕ್ಕಾಗಿಯೇ ಕನಿಷ್ಠ 20 ಸಾವಿರ ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯಿಸಿ ಪಾದಯಾತ್ರೆ ಮಾಡುತ್ತಿರುವುದು ಎಂದು ಹೇಳಿದ್ದಾರೆ.
ವಿದ್ಯುತ್ ಖಾಸಗೀಕರಣ ರದ್ದು ಮಾಡಿ ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಲಿಂಕ್ ಮಾಡುವುದನ್ನು ಕೈಬಿಡಬೇಕು, ಕೃಷಿ ಪಂಪ್ ಸೆಟ್ ಗಳ ವಿದ್ಯುತ್ ದರವನ್ನು ಕಡಿತಗೊಳಿಸಬೇಕು, ರಾಜ್ಯದ ಎಲ್ಲ ನೀರಾವರಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದರು.
ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಸರ್ಕಾರ ನೀಡಿರುವ ಬೆಂಬಲ ಬೆಲೆ ಅವೈಜ್ಞಾನಿಕವಾಗಿದೆ, 15 ವರ್ಷಗಳ ಹಿಂದೆ ನಿಗದಿಯಾಗಿರುವ ಬೆಂಬಲ ಬೆಲೆಯ ಆಧಾರದಲ್ಲಿಯೇ ಕಾಂಗ್ರೆಸ್ ಸರ್ಕಾರ 1250 ರೂ ಘೋಷಣೆ ಮಾಡಲಾಗಿದೆ ಆದರೆ ಸರ್ಕಾರ ಕೊಬ್ಬರಿ ಬೆಳೆಗಾರರ ಹಿತಕಾಯುತ್ತಿಲ್ಲ ಎಂದು ಆರೋಪಿಸಿದರು.
ನಫೆಡ್ ನಲ್ಲಿ ರೈತರಿಗೆ ಹೊಸ ಕಾರ್ಡ್ ಗಳನ್ನು ನೀಡುತ್ತಿಲ್ಲ, ಖಾಸಗಿ ಅಂಗಡಿಗಳಿಗೆ ಕೊಬ್ಬರಿಯನ್ನು ನೀಡುತ್ತಿದ್ದಾರೆ, ನಫೆಡ್ ಅಧಿಕಾರಿಗಳು ರೈತರನ್ನು ಮಂಗಮಾಡುತ್ತಿದ್ದಾರೆ, ಗೌರಿಹಬ್ಬ ಬಂದರೂ ಕೊಬ್ಬರಿಗೆ ಬೇಡಿಕೆ ಇದ್ದರು ಕನಿಷ್ಠ 10 ಸಾವಿರ ಧಾರಣೆ ಸಿಗುತ್ತಿಲ್ಲ ಎಂದು ಹೇಳಿದರು.
ಎತ್ತಿನಹೊಳೆ ಹೆಸರಲ್ಲಿ ಸಾವಿರಾರು ಕೋಟಿ ಅನುದಾನ ವೆಚ್ಚಮಾಡಲಾಗಿದೆ ಸಕಲೇಶಪುರದಿಂದ ಆಚೆಗೆ ಬಂದಿಲ್ಲ, ಯೋಜನೆ ಹೆಸರಲ್ಲಿ ಸಾವಿರಾರು ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ ಇದುವರೆಗೆ ರೈತರಿಗೆ ಪರಿಹಾರ ನೀಡಿಲ್ಲ, ತಿಪಟೂರು ಉಪವಿಭಾಗದಲ್ಲಿ ಯೋಜನೆಗೆ ಭೂಮಿ ಕೊಟ್ಟು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.