ದೇವರಾಯನದುರ್ಗದ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಗುಡ್ಡ ಬಗೆದು ಜೀವ ವೈವಿದ್ಯತೆ ನಾಶದ ಜತೆಗೆ ಸರ್ಕಾರಿ ಗೋಮಾಳವನ್ನು ಗುಳುಂ ಮಾಡುವ ದೊಡ್ಡ ಹುನ್ನಾರ ನಡೆದಿದೆ. ಇದರಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಶಾಮೀಲಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಜ್ಞಾನಸಿಂಧುಸ್ವಾಮಿ ಆರೋಪಿಸಿದ್ದಾರೆ.
ಊರ್ಡಿಗೆರೆ ಹೋಬಳಿಯಲ್ಲಿ ಬರುವ ದುರ್ಗದಹಳ್ಳಿಯ ಸರ್ವೇ ನಂ.4ರ ಗೋಮಾಳಲ್ಲಿರುವ ಸುಮಾರು 49 ಎಕರೆ ಪ್ರದೇಶವನ್ನು ಅಕ್ರಮವಾಗಿ ಜೆಸಿಬಿಯಿಂದ ಅಗೆಯಲಾಗಿದೆ. ಹಣವಿರುವ ಕುಳಗಳಿಂದ ಅಧಿಕಾರಿಗಳೂ ಇದರಲ್ಲಿ ಶಾಮಿಲಾಗಿದ್ದು, ಈಗಾಗಲೇ ರೆಸಾರ್ಟ್ ನಿರ್ಮಿಸಲು ನೂರಾರು ಗಿಡಗಳನ್ನು ಅನುಮತಿ ಪಡೆಯದೇ ಕಡೆದು ಹಾಕಿದ್ದಾರೆ. ಈ ಕುರಿತು ಊರಿನ ಯಾರಿಗೂ ಮಾಹಿತಿ ಇಲ್ಲ. ಸುಮಾರು 15 ದಿನಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿದ್ದು, ಅಕ್ರಮವಾಗಿ ನಿರ್ಮಾಣವಾಗುತ್ತಿರುವ ರೆಸಾರ್ಟ್ಗೆ ಅಧಿಕಾರಿಗಳು ಕೃಪಾಕಟಾಕ್ಷವಿದೆ ಎಂದು ದೂರಿದ್ದಾರೆ.
ಈ ಸೂಕ್ಷ ಸೂಕ್ಷ್ಮ ಜೀವವೈವಿದ್ಯತೆ ಇರುವ ಪ್ರದೇಶದಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ ಮಾಡಲು ಅಧಿಕಾರಿಗಳು ತೆಗೆದುಕೊಂಡ ಲಂಚವೆಷ್ಟು ಎಂಬುವುದನ್ನು ಬಹಿರಂಗಪಡಿಸಬೇಕು. ಸಾವಿರಾರು ಜಾತಿಯ ಸಸ್ಯಗಳನ್ನು ನಾಶ ಮಾಡಲಾಗಿದೆ. ಪ್ರವಾಸಿ ತಾಣವನ್ನು ಗುರಿಯಾಗಿಸಿ ಲಾಭ ಕಂಡುಕೊಳ್ಳುವ ಲಂಚಕೋರ ಅಧಿಕಾರಿಗಳು ಯಾರೆಂದು ಜಿಲ್ಲಾಡಳಿತ ಬಹಿರಂಗಪಡಿಸಬೇಕು.ಯಾವುದೇ ಒಂದು ಜಾಗದಲ್ಲಿಅಭಿವೃದ್ಧಿ ಅಥವಾ ಕಟ್ಟಡ ನಿರ್ಮಾಣಕ್ಕೆ ಗ್ರಾಪಂ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಅನುಮತಿ ಕೊಡಬೇಕು. ಇಲ್ಲಿ ಕಂದಾಯ ಅಧಿಕಾರಿಗಳೇ ಶಾಮಿಲಾಗಿರುವ ಎಲ್ಲ ಸಾಧ್ಯತೆಗಳಿದ್ದು, ಅರಣ್ಯ ಇಲಾಖೆಗೂ ಹಣ ವರ್ಗಾವಣೆಯಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು.
ದೇವರಾಯನದುರ್ಗದ ತಪ್ಪಲಿನಲ್ಲಿ ಬರುವ ದುರ್ಗದಹಳ್ಳಿಯು ಸಂರಕ್ಷಿತ ಅರಣ್ಯಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮವಾಗಿದೆ. ಈ ಗ್ರಾಮದ ಸುತ್ತಮುತ್ತಲಿನಲ್ಲಿ ವಾಸಿಸುವ ಕಾಡುಪಾಪ, ಚಿರತೆ, ಮೊಲ, ಉಡ, ಕಾಡುಬೆಕ್ಕು, ಹೆಬ್ಬಾವು, ಸುಮಾರು 30ಕ್ಕೂ ಹೆಚ್ಚು ಬಗೆಯ ಹಾವುಗಳು, 10ಕ್ಕಿಂತ ಹೆಚ್ಚು ವಿಧದ ಕಪ್ಪೆಗಳು, 163 ಬಗೆಯ ಪಕ್ಷಿಗಳು, 7 ಬಗೆಯ ಚೇಳುಗಳು, ಮುಳ್ಳು ಹಂದಿ, ಕಾಡು ಹಂದಿ, ಕರಡಿ ಸೇರಿ ನೂರಾರು ಜಾತಿಯ ಗಿಡ-ಮರಗಳು, ನವಿಲುಗಳು ಇಲ್ಲಿವೆ ಎಂದಿದ್ದಾರೆ.
ರೆಸಾರ್ಟ್ ನಿರ್ಮಾಣದಿಂದ ಜೀವರಾಶಿಗಳಿಗೆ ಕಂಟಕ ಎದುರಾಗುತ್ತದೆ. ಈಗಾಗಲೇ ನವಿಲುಗಳ ಮೊಟ್ಟೆಗಳು ನಾಶವಾಗಿವೆ. ಅಷ್ಟಲ್ಲದೇ ಭಾರತದಲ್ಲಿ ಅಪರೂಪವಾಗಿ ಕಂಡು ಬರುವ ಜೇಡ ಪ್ರಬೇಧವೂ ಈ ದೇವರಾಯನದುರ್ಗದ ಅರಣ್ಯದಲ್ಲಿವೆ. ಅಭಿವೃದ್ಧಿಯ ಹೆಸರಿನಲ್ಲಿ ಮತ್ತು ಕಾನೂನು ಬಾಹಿರ ಚಟುವಟಿಕೆಯಿಂದ ಇಲ್ಲಿನ ಜೀವವೈವಿದ್ಯಕ್ಕೆ ಬಹುದೊಡ್ಡ ಆಪತ್ತು ಎದುರಾಗಿದೆ ಜಿಲ್ಲಾಧಿಕಾರಿ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳದೇ ಇದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಗ್ರಾಮಸ್ಥರೊಂದಿಗೆ ಬೃಹತ್ ಹೋರಾಟ ಮಾಡಬೇಕಾಗುತ್ತದೆ ಎಂದು ಜ್ಞಾನಸಿಂಧುಸ್ವಾಮಿ ಎಚ್ಚರಿಸಿದ್ದಾರೆ.