ಸಿಪಿಐ ಪಕ್ಷ ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 7 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಈ ಕ್ಷೇತ್ರಗಳಲ್ಲಿ ಸ್ಪರ್ಧಾತ್ಮಕ ಹೋರಾಟ ಇರಲಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ರಾಜ್ಯದ 215 ಕ್ಷೇತ್ರಗಳಲ್ಲಿ ಸಿಪಿಐ ಪಕ್ಷದ ಕಾರ್ಯಕರ್ತರು ಯಾವುದೇ ಷರತ್ತು ಇಲ್ಲದೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದೆ. ಬಿಜೆಪಿಯ ವಿರುದ್ಧ ಹೋರಾಟದಲ್ಲಿ ಇದು ಬಹಳ ದೊಡ್ಡ ತೀರ್ಮಾನವಾಗಿದೆ. ಈ ನಿರ್ಧಾರ ಕೈಗೊಂಡಿರುವ ಈ ಪಕ್ಷದ ನಾಯಕರುಗಳು ಹಾಗು ಕಾರ್ಯಕರ್ತರಿಗೆ ನಾನು ಧನ್ಯವಾದಗಳನ್ನು ಹೇಳುತ್ತೇನೆ ಎಂದಿದ್ದಾರೆ.
ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ಸಾಮಾಜಿಕ ನ್ಯಾಯ, ಬಡವರು ಹಾಗೂ ಶೋಷಿತ ವರ್ಗದವರ ಹಕ್ಕಿನ ರಕ್ಷಣೆ, ಕಾರ್ಮಿಕರ ಹಕ್ಕು, ಮಧ್ಯಮ ವರ್ಗದವರ ಹಕ್ಕಿನ ರಕ್ಷಣೆಗೆ ಹೋರಾಟ ಮಾಡಿಕೊಂಡು ಬಂದಿರುವ ಇತಿಹಾಸವಿದೆ. ಕಾಂಗ್ರೆಸ್ ಹಾಗೂ ಸಿಪಿಐ ಸೈದ್ದಾಂತಿಕವಾಗಿ ಅನೇಕ ವಿಚಾರಗಳಲ್ಲಿ ಭಿನ್ನಾಭಿಪ್ರಾಯವಿದ್ದರೂ ನಮ್ಮ ಗುರಿ ಒಂದೇ ಆಗಿದೆ.
ಮೋದಿ ಸರ್ಕಾರದ ಬೆಲೆ ಏರಿಕೆ, ಬೊಮ್ಮಾಯಿ ಸರ್ಕಾರದ 40ರಷ್ಟು ಕಮಿಷನ್ ಭ್ರಷ್ಟಾಚಾರದ ವಿರುದ್ಧ ಆಡಳಿತದಲ್ಲಿ ಪಾರದರ್ಶಕತೆ ತರುವ ಸಲುವಾಗಿ ಹೋರಾಟ ಮಾಡುವುದು ಈ ಎರಡು ಪಕ್ಷಗಳ ಗುರಿಯಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದ ಯುವಕರು 80 ಲಕ್ಷ ಲಂಚ ನೀಡಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆ ಪಡೆಯುವ ಸ್ಥಿತಿ ನಿರ್ಮೂಲನೆಯಾಗಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಯನ್ನು ಮಾರಾಟ ಮಾಡುವ ವ್ಯವಸ್ಥೆ ತೊಲಗಬೇಕು. ರಾಜ್ಯದ ಜನರ ಹಿತ ಕಾಯುವುದು ಸರ್ಕಾರದ ಏಕಮಾತ್ರ ಗುರಿಯಾಗಿರಬೇಕೇ ಹೊರತು ಬಿಜೆಪಿ ರೀತಿ ರಾಜ್ಯವನ್ನು ಲೂಟಿ ಮಾಡುವುದಲ್ಲ ಎಂದು ಸರ್ಕಾರಕ್ಕೆ ಚಾಟಿ ಬೀಸಿದರು.
ರಾಜ್ಯದ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ, ಬಡವರು, ಕಾರ್ಮಿಕರಿಗೆ ಸಿಗಬೇಕಾದ ನ್ಯಾಯ ದೊರಕಿಸಿಕೊಡಬೇಕು. ರಾಜ್ಯದಲ್ಲಿ ಮುಮದೆ ರಚನೆಯಾಗುವ ಸರ್ಕಾಋ ಸಮಾನತೆ, ಸಾಮಾಜಿಕ ನ್ಯಾಯದ ಆಧಾರದ ಮೇಲೆ ರಚನೆಯಾಗಬೇಕು. ದೇಶದ ಮಧ್ಯಮ ವರ್ಗದ ಜನರನ್ನು ಸರ್ಕಾರದ ಬೆಲೆ ಏರಿಕೆಯಿಂದ ರಕ್ಷಣೆ ಮಾಡಬೇಕು. ಇದು ಕಾಂಗ್ರೆಸ್ ಮತ್ತು ಸಿಪಿಐನ ಗುರಿಯಾಗಿದೆ ಎಂದರು.
ಸಿಪಿಐ ಮತ್ತು ಕಾಂಗ್ರೆಸ್ ಪಕ್ಷಗಳ ಕೆಲವು ಸಿದ್ದಾಂತಗಳಲ್ಲಿ ಸಾಮ್ಯತೆ ಇವೆ. ಸಮಾನತೆ, ಸಾಮಾಜಿಕ ನ್ಯಾಯ, ಬಡವರು, ಮಧ್ಯಮ ವರ್ಗದ ಜನರ ಹಿತ ರಕ್ಷಣೆಯಂತಹ ಸಹಜ ಗುರಿ ಹೊಂದಿರುವುದು ಎಲ್ಲಾ ಶಕ್ತಿಗಳು ಒಂದುಗೂಡಬೇಕು ಎಂದು ಸಲಹೆ ನೀಡಿದ್ದಾರೆ.