Friday, October 18, 2024
Google search engine
Homeಮುಖಪುಟಜನಾಭಿಪ್ರಾಯ ಸಂಗ್ರಹಿಸಿ ಪ್ರಣಾಳಿಕೆ ಸಿದ್ದಪಡಿಸಲು ತೀರ್ಮಾನ - ಎಪಿಪಿ

ಜನಾಭಿಪ್ರಾಯ ಸಂಗ್ರಹಿಸಿ ಪ್ರಣಾಳಿಕೆ ಸಿದ್ದಪಡಿಸಲು ತೀರ್ಮಾನ – ಎಪಿಪಿ

ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಮಾಹಿತಿ ಸಂಗ್ರಹಿಸಿ, ಜನರ ನಿಜವಾದ ಸಮಸ್ಯೆಗಳಿಗೆ ಪರಿಹಾರಗಳನ್ನು ಒಳಗೊಂಡ ಜನರಿಂದ ಜನರಿಗಾಗಿʼ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತದೆ ಎಂದು ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಜನರ ಅಭಿಪ್ರಾಯ ಸಂಗ್ರಹಿಸಿ, ಅವರಿಗೆ ಯಾವುದರ ಅಗತ್ಯವಿದೆ ಎಂಬ ಮಾಹಿತಿ ಆಧರಿಸಿ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತಿದೆ. ಹಲವು ಪಕ್ಷಗಳು ಕಾಟಾಚಾರಕ್ಕೆ ಎಂಬಂತೆ ಒಂದು ಸಂವಾದ ನಡೆಸಿ ಮಾಹಿತಿ ಸಂಗ್ರಹಿಸಿದ್ದೇವೆಂದು ಬಿಂಬಿಸಿಕೊಳ್ಳುತ್ತವೆ. ಕೆಲವು ಪಕ್ಷಗಳು ಫೈವ್‌ ಸ್ಟಾರ್‌ ಹೋಟಲ್‌ನಲ್ಲಿ ಚರ್ಚೆ ನಡೆಸುತ್ತವೆ. ಆದರೆ ನಿಜವಾಗಿಯೂ ಚರ್ಚೆ ನಡೆಸಬೇಕಿರುವುದು ಜನಸಾಮಾನ್ಯರ ಜೊತೆ ಹಾಗೂ ಹಳ್ಳಿಕಟ್ಟೆಗಳಲ್ಲಿ. ಇದಕ್ಕಾಗಿ ಒಂದು ವ್ಯವಸ್ಥೆ ಮಾಡಿಕೊಡಲು ಆಮ್‌ ಆದ್ಮಿ ಪಾರ್ಟಿಯು ಈ ಯೋಜನೆ ರೂಪಿಸಿದೆ ಎಂದರು.

ಎಲ್ಲ ವರ್ಗಗಳ ಜನರೂ ಇದರಲ್ಲಿ ಭಾಗವಹಿಸಬೇಕೆಂಬ ಅಪೇಕ್ಷೆಯಿದೆ. ಬೇರೆಲ್ಲ ರಾಜ್ಯಗಳಲ್ಲಿ ಚುನಾವಣೆ ನಡೆದಾಗಲೂ ಪಕ್ಷವು ಗ್ಯಾರೆಂಟಿ ಕಾರ್ಡ್‌ ರೂಪದಲ್ಲಿ ಮತದಾರರಿಗೆ ಆಶ್ವಾಸನೆಗಳನ್ನು ನೀಡಿದೆ. ನಾವು ಜಯಗಳಿಸಿದ ಕಡೆಯೆಲ್ಲ ನಮ್ಮ ಸಾಧನೆಗಳ ಬಗ್ಗೆ ಮತದಾರರಿಗೆ ರಿಪೋರ್ಟ್‌ ಕಾರ್ಡ್‌ ನೀಡಲಾಗಿದ್ದು, ಅವರು ಅದನ್ನು ಗ್ಯಾರೆಂಟಿ ಕಾರ್ಡ್‌ ಜೊತೆ ಹೋಲಿಕೆ ಮಾಡಿ ನೋಡಬಹುದಾಗಿದೆ ಎಂದು ಹೇಳಿದರು.

ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಅವರು ಕರ್ನಾಟಕದ ಜನತೆಗೆ ಗ್ಯಾರೆಂಟಿಗಳ ಮೊದಲ ಪಟ್ಟಿಯನ್ನು ಘೋಷಿಸಿದರು. ಅದರಲ್ಲಿ ಶೂನ್ಯ ಭ್ರಷ್ಟಾಚಾರ, 300 ಯೂನಿಟ್‌ ಉಚಿತ ವಿದ್ಯುತ್‌, ಯುವಜನತೆಗೆ ಖಚಿತ ಉದ್ಯೋಗ ಹಾಗೂ ಉದ್ಯೋಗ ಸಿಗುವ ತನಕ ತಿಂಗಳಿಗೆ 3000 ರೂಪಾಯಿ ಉದ್ಯೋಗ ಭತ್ಯೆ, ರೈತರ ಸಾಲ ಮನ್ನಾ, ಕನಿಷ್ಠ ಬೆಂಬಲ ಬೆಲೆ, ಉಚಿತ ಗುಣಮಟ್ಟದ ಶಿಕ್ಷಣ, ಉಚಿತ ಗುಣಮಟ್ಟದ ಆರೋಗ್ಯ ಸೇವೆ, ಗುತ್ತಿಗೆ ನೌಕರರಿಗೆ ಖಾಯಂ ಉದ್ಯೋಗ ಎಂಬ ಗ್ಯಾರೆಂಟಿಗಳನ್ನು ಘೋಷಿಸಿದ್ದಾರೆ. ಇದಕ್ಕೆ ಇನ್ನಷ್ಟು ಗ್ಯಾರೆಂಟಿಗಳನ್ನು ಸೇರಿಸಲು ರಾಜ್ಯಾದ್ಯಂತ ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ತಿಳಿಸಿದರು.

ಒಂದುವೇಳೆ ಸರ್ಕಾರದ ಬಳಿ ಸ್ವಲ್ಪ ಹಣ ಮಾತ್ರ ಇದ್ದರೆ, ಅದರಲ್ಲಿ ಮೇಲ್ಸೇತುವೆ ನಿರ್ಮಿಸಬೇಕೋ ಅಥವಾ ಶಾಲೆ ನಿರ್ಮಿಸಬೇಕೋ ಎಂಬ ಬಗ್ಗೆ ಪಕ್ಷದ ಸಭೆಯಲ್ಲಿ ಒಮ್ಮೆ ಚರ್ಚೆ ನಡೆದಿತ್ತು. ಮೇಲ್ಸೇತುವೆ ಬದಲು ಶಾಲೆ ನಿರ್ಮಿಸಿದರೆ, ಅದರ ಕೆಳಗೆ ಮನೆಯಿಲ್ಲದ ಮಕ್ಕಳು ಮಲಗಬಹುದು. ಆದರೆ ಶಾಲೆ ನಿರ್ಮಿಸಿದರೆ, ಆ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಮುಂದೊಂದು ದಿನ ನೂರಾರು ಮೇಲ್ಸೇತುವೆ ನಿರ್ಮಿಸುತ್ತಾರೆ ಎಂಬ ಅಭಿಪ್ರಾಯ ಕೇಳಿಬಂದಿತ್ತು. ಇದರಂತೆ ದೆಹಲಿಯಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಯಿತು ಎಂದು ಪೃಥ್ವಿ ರೆಡ್ಡಿ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular