ತುಮಕೂರು ಜಿಲ್ಲೆಯ ವಸಂತನರಸಾಪುರದ ಆಜುಬಾಜು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವುದಾಗಿ ರಾಜ್ಯ ಸರ್ಕಾರದ ಕೈಗಾರಿಕ ಸಚಿವ ಮುರುಗೇಶ್ ನಿರಾಣಿ ಅವರು ತಿಳಿಸಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ವಿಮಾನ ನಿಲ್ದಾಣವೇನು ನಿರ್ಮಾಣ ಮಾಡುತ್ತೀರಾ. ಆದರೆ ವಿಮಾನದಲ್ಲಿ ಓಡಾಡಲು ಪ್ರಯಾಣಿಕರನ್ನು ಎಲ್ಲಿಂದ ತರುತ್ತೀರಾ. ಕೇವಲ 100 ಕಿಲೋಮೀಟರ್ ದೂರದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಇಷ್ಟು ಹತ್ತಿರದಲ್ಲಿ ಇನ್ನೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೇಕೆ ಎಂಬುದು ಪ್ರಶ್ನೆಯಾಗಿದೆ ಎಂದು ಜನಸಂಗ್ರಾಮ ಪರಿಷತ್ ತುಮಕೂರು ಜಿಲ್ಲಾಧ್ಯಕ್ಷ ಪಂಡಿತ್ ಜವಾಹರ್ ತಿಳಿಸಿದ್ದಾರೆ.
ಈ ದೇಶದಲ್ಲಿ ಅನೇಕ ವಿಮಾನ ನಿಲ್ದಾಣಗಳಿದ್ದರೂ ಪ್ರಪಂಚದಲ್ಲಿರುವ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಹತ್ತರಲ್ಲಿ ನಮ್ಮ ದೇಶದಲ್ಲಿ ಎರಡು ಮೂರು ಶ್ರೀಮಂತರಿದ್ದರೂ, ಆರ್ಥಿಕ ಅಭಿವೃದ್ಧಿ ಚಟುವಟಿಕೆಗಳು ಭರದಿಂದ ಸಾಗಿದ್ದರೂ ಒಂದಾದರೂ ಏರ್ಲೈನ್ಸ್ ಲಾಭ ಮಾಡಿದೆಯಾ ಎಂದು ಪ್ರಶ್ನಿಸಿದ್ದಾರೆ.
ಇಂಡಿಯನ್ ಏರ್ಲೈನ್ಸ್ ರೂ. 30000 ಕೋಟಿ ನಷ್ಟವಾಗಿ ಟಾಟಾದವರಿಗೆ ಮಾರಬೇಕಾಯಿತು. ಕಿಂಗ್ ಫಿಶರ್ ಏರ್ಲೈನ್ಸ್ ಮುಚ್ಚಿ ಅದರ ಮಾಲಿಕ ಸಾಲ ತೀರಿಸಲಾಗದೆ ಬೇರೆ ದೇಶಕ್ಕೆ ಹೋಗಿ ನೆಲೆಸಿದ್ದಾರೆ. ಕ್ಯಾಪ್ಟನ್ ಗೋಪಿನಾಥ್ ತಮ್ಮ ಏರ್ಲೈನ್ಸ್ ನಡೆಸಲಾಗದೆ ಬೇರೆ ಕಂಪನಿ ಜೊತೆಗೆ ಮರ್ಜ್ ಮಾಡಿದ್ದಾರೆ ಎಂದಿದ್ದಾರೆ.
ಸ್ಪೈಸ್ ಜೆಟ್ ಆರ್ಥಿಕವಾಗಿ ನಷ್ಟ ಅನುಭವಿಸಿ ಅರ್ಧಕ್ಕೂ ಹೆಚ್ಚು ನೌಕರರನ್ನು ವೇತನ ರಹಿತ ರಜೆ ಮೇಲೆ ಕಳಿಸಿದ್ದಾರೆ. ಏಲ್ಲಾ ಏರ್ ಲೈನ್ಸ್ ಕಂಪನಿಗಳು ನೌಕರರಿಗೆ ಸರಿಯಾಗಿ ಸಂಬಳ ಕೊಡಲಾಗುತ್ತಿಲ್ಲ. ಶಿವಮೊಗ್ಗದ ಡೊಮೆಸ್ಟಿಕ್ ವಿಮಾನ ನಿಲ್ದಾಣ 12 ವರ್ಷದಿಂದ ಕೆಲಸ ನಡೆದು ರೆಡಿಯಾಗಿದ್ದರೂ ಇನ್ನೂ ಉದ್ಘಾಟನೆಯಾಗಿಲ್ಲ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಕುಸಿತ ಕಂಡಿದ್ದು ಇನ್ನು ನಾಲ್ಕು ಐದು ತಿಂಗಳಲ್ಲಿ ಜನಗಳಲ್ಲಿ ಕೊಳ್ಳುವ ಶಕ್ತಿ ತುಂಬ ಕಡಿಮೆಯಾಗುತ್ತದೆ. ಜನರು ಹುಷಾರಾಗಿ ಇರಬೇಕೆಂದು ಎಂದು ಆರ್ಥಿಕ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ದೇಶದ ಬಹುಜನರು ವಿಮಾನಗಳಲ್ಲಿ ಓಡಾಡುತ್ತಾರೆ ಎಂದು ನಿರೀಕ್ಷಿಸುವುದು ಸರಿಯಲ್ಲ. ಅನುತ್ಪಾದಕ ಯೋಜನೆಗಳ ಮೇಲೆ ಬಂಡವಾಳ ಹೂಡುವುದು ಸರಿಯೆ ಎಂದು ಕೇಳಿದ್ದಾರೆ.
ವಿಮಾನ ನಿಲ್ದಾಣ ಬದಲು ನಮ್ಮ ಜಿಲ್ಲೆಯಲ್ಲಿ ಬಾಕಿ ಇರುವ ರೈಲ್ವೆ ಯೋಜನೆಗಳನ್ನು ಪೂರ್ತಿಗೊಳಿಸಿ ಜನಗಳ ಓಡಾಟಕ್ಕೆ ಅನುಕೂಲ ಮಾಡಿಕೊಡಿ. ತುಮಕೂರಿನಿಂದ ಶಿರಾ ದಾವಣಗೆರೆ ಮೇಲೆ ಹೋಗುವ ರೈಲ್ವೆ ಯೋಜನೆ, ಮಧುಗಿರಿ ಮೇಲೆ ರಾಯದುರ್ಗ ಕಡೆ ಸಂಪರ್ಕ ಕಲ್ಪಿಸುವ ಯೋಜನೆ ಇರೆರಡು ಬಹಳ ವರ್ಷಗಳಿಂದ ಕಾದಿವೆ. ಉದ್ದೇಶಿತ ವಿಮಾನ ನಿಲ್ದಾಣ ನಿರ್ಮಾಣವನ್ನು ಕೈಬಿಟ್ಟು ಈ ರೈಲ್ವೆ ಯೋಜನೆಗಳನ್ನು ಪೂರ್ತಿಗೊಳಿಸಿದರೆ ಲಕ್ಷಾಂತರ ಜನಕ್ಕೆ ಅನುಕೂಲವಾಗುತ್ತದೆ ಎಂದು ಪಂಡಿತ್ ಜವಾಹರ್ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.