ಕೋವಿಡ್ ಕಾಲದಲ್ಲಿ ಅನುದಾನರಹಿತ ಶಾಲೆಗಳ ಶಿಕ್ಷಕರಿಗೆ ಪರಿಹಾರ ನೀಡಲು ನಿಗದಿಪಡಿಸಿದ್ದ 103.47 ಕೋಟಿ ರೂಪಾಯಿ ಹಣದಲ್ಲಿ 31.14 ಕೋಟಿ ರೂಗಳನ್ನು ಖಾಸಗಿ ಶಾಲೆಗಳ ಆರ್.ಟಿ.ಇ ಶುಲ್ಕ ಮರುಪಾವತಿಗೆ ನೀಡಿದ್ದೀರಲ್ಲಾ? ಇದು ಯಾರ ಮೇಲಿನ ಕಾಳಜಿಯಿಂದ ಶಿಕ್ಷಣ ಸಚಿವರೇ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಖಾಸಗಿ ಶಾಲೆಗಳ ಅಕ್ರಮಗಳ ವಿರುದ್ಧ ಸಮರ ಸಾರಿದವರಂತೆ ಹೇಳಿಕೆ ನೀಡುತ್ತಿರುವ ಶಿಕ್ಷಣ ಸಚಿವರೇ ಕೋವಿಡ್ ಪರಿಹಾರದ ಹಣವನ್ನು ಕೂಡ ಖಾಸಗಿ ಶಾಲೆಗಳ ಆರ್.ಟಿ.ಇ ಶುಲ್ಕ ಮರುಪಾವತಿಗೆ ದುರ್ಬಳಕೆ ಮಾಡಿರುವುದು ಯಾರ ಮೇಲಿನ ಪ್ರೀತಿಯಿಂದ ಎಂದು ಕೇಳಿದ್ದಾರೆ.
ಕೋವಿಡ್ ಪರಿಹಾರಕ್ಕಾಗಿಯೇ ನಿಗದಿಪಡಿಸಿದ್ದ ಹಣವನ್ನು ಪೂರ್ಣವಾಗಿ ಆ ಉದ್ದೇಶಕ್ಕಾಗಿಯೇ ಬಳಸದಿರಲು ಕಾರಣವೇನು? ಆರ್.ಟಿ.ಇ ಮರುಪಾವತಿಗಾಗಿಯೇ 2022-23ನೇ ಸಾಲಿಗೆ ನಿಗದಿಪಡಿಸಿದ್ದ 500 ಕೋಟಿ ಹಣವನ್ನು ನಿಮ್ಮ ಇಲಾಖೆ ಪೂರ್ಣವಾಗಿ ಬಳಸಿಕೊಂಡಿದೆಯೇ ಎಂದಿದ್ದಾರೆ.
ಶಾಲಾ ಮಕ್ಕಳ ಶೂ ಖರೀದಿಗೆ ಐದು ವರ್ಷಗಳ ಹಿಂದಿನ ದರದಲ್ಲಿ ಹಣ ನೀಡಿ ಶಿಕ್ಷಕರನ್ನು ದಾನಿಗಳ ಮುಂದೆ ಕೈಯೊಡ್ಡುವಂತೆ ಮಾಡಿರುವ ಶಿಕ್ಷಣ ಸಚಿವರೇ ನಿಮ್ಮ ಸಾಮಾಜಿಕ ಜಾಲತಾಣ ನಿರ್ವಹಣೆಗೆ ತಿಂಗಳಿಗೆ 93,000 ನೀಡುತ್ತಿದ್ದೀರಲ್ಲಾ ಇದು ನ್ಯಾಯವೇ ಎಂದು ಪ್ರಶ್ನಿಸಿದ್ದಾರೆ.
ಅತಿಥಿ ಉಪನ್ಯಾಸಕರು ಕನಿಷ್ಠ 6,000 ರೂಪಾಯಿಯಷ್ಟು ಗೌರವಧನ ಹೆಚ್ಚಿಸಿ ಎಂದು ಕೇಳಿದರೆ 3,000 ಕೊಟ್ಟು ಬಾಯಿ ಮುಚ್ಚಿಸಿದ ಶಿಕ್ಷಣ ಸಚಿವರೇ ನಿಮ್ಮ ಸಾಮಾಜಿಕ ಜಾಲತಾಣ ನಿರ್ವಹಣೆಗೆ ಟೆಂಡರ್ ಕರೆಯದೆ ಮೂರು ತಿಂಗಳಿಗೆ 2,83,200 ಖರ್ಚು ಮಾಡುವುದು ಅನ್ಯಾಯ ಅಲ್ಲವೇ? ಎಂದು ಕೇಳಿದ್ದಾರೆ.