ತುಮಕೂರು ನಗರದ ಹೋರಪೇಟೆ ಬಾಪೂಜಿ ಶಾಲಾ ಹಿಂಭಾಗದಲ್ಲಿರುವ ಸಂಪಾದನೆ ಮಠ ಸ್ಲಂನಲ್ಲಿರುವ ಕುಟುಂಬಗಳಿಗೆ ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ಒತ್ತಾಯದ ಮೇರೆಗೆ ಸೋಲಾರ್ ವಿದ್ಯುತ್ ದೀಪಗಳನ್ನು ಸಮಾಜ ಸೇವಕ ಹಾಗೂ ಕಾಂಗ್ರೆಸ್ ಮುಖಂಡ ಅತಿಕ್ ಅಹಮದ್ ವಿತರಿಸಿದರು.
ತುಮಕೂರು ನಗರ ಸ್ಮಾರ್ಟ್ಸಿಟಿ ನಿಜವೇ ಎಂಬುದು ಅನುಮಾನವಾಗಿದೆ ಸರ್ಕಾರ ಸಾವಿರಾರು ಕೋಟಿಗಳನ್ನು ಅಭಿವೃದ್ಧಿ ಹೆಸರಿನಲ್ಲಿ ನೀಡುತ್ತಿದೆ. ಆದರೆ ನಗರದ ಹೃದಯ ಭಾಗದಲ್ಲಿ ಸೌಲಭ್ಯಗಳಿಂದ ವಂಚಿತರಾಗಿ ಬದುಕುತ್ತಿರುವುದು ನಿಜಕ್ಕೂ ದುಃಖಕರ ವಿಚಾರ. ಇಲ್ಲಿನ ಸ್ಲಂ ನಿವಾಸಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಬೇಕಾಗಿರುವುದು ಆಡಳಿತದಲ್ಲಿರುವವರ ಕರ್ತವ್ಯ ಮತ್ತು ಜವಾಬ್ದಾರಿ ಅದನ್ನು ನಿಭಾಯಿಸಿಲ್ಲ ಎಂದು ಹೇಳಿದರು.
ಇಲ್ಲಿನ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರಲು ನಾನು ಪ್ರಯತ್ನಿಸುತ್ತೇನೆ. ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ನಿಮ್ಮ ಕೈಹಿಡಿದು ನಿಮ್ಮನ್ನು ರಕ್ಷಿಸುತ್ತಿರುವುದು ಸಮಾಜ ಮುಖಿ ಕಾರ್ಯವಾಗಿದೆ. ಅದಕ್ಕೆ ನಾನು ಅಭಿನಂದನೆಸಲ್ಲಿಸುತ್ತೇನೆ, ಈ ನನ್ನ ಸಣ್ಣ ಕೆಲಸ ನಿಮಗೆ ಸಹಕಾರಿಯಾಗಲಿ ಎಂದು ತಿಳಿಸಿದರು.
ಸ್ಲಂ ಸಮಿತಿಯ ದೀಪಿಕಾ ಮಾತನಾಡಿ, ಸಮಾಜದಲ್ಲಿ ಬಡವ ಶ್ರೀಮಂತ ಎಂಬ ಎರಡು ವರ್ಗಗಳು ಇವೆ. ಬದುಕಿರುವಾಗ ಮನುಷ್ಯರಂತೆ ಕಾಣದೇ ಮಾನವೀಯ ಮೌಲ್ಯಗಳನ್ನು ಗಟ್ಟಿಗೊಳಿಸದೇ ಬರಿ ಲಾಭವೆ ನಮ್ಮ ಗುರಿ ಎಂದರೆ ಬಡವರು ಬಡುಕುವುದಾದರು ಹೇಗೆ ಎಂದು ಪ್ರಶ್ನಿಸಿದರು.
ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ವಿದ್ಯುತ್ ಇಲ್ಲದ ಕುಟುಂಬಗಳಿಗೆ ಸೋಲಾರ್ ವಿದ್ಯುತ್ ಲೈಟ್ ನೀಡಲು ಬಹಳ ಆಸಕ್ತಿಯಿಂದ ಬಂದು ಇಲ್ಲಿನ ಜನರ ಬಗ್ಗೆ ಕಾಳಜಿ ವಹಿಸುತ್ತಿರುವ ಅತಿಕ್ಅಮಹದ್ ಸೇವೆ ಬಹಳ ಅರ್ಥಪೂರ್ಣವಾದದ್ದು ಶೋಷಿತರನ್ನು ಶೋಷಿತರಾಗಿಯೇ ಇರಲು ಬಯಸುವ ಇಂತಹ ಕಾಲಘಟ್ಟದಲ್ಲಿ ನಿಮ್ಮಂತಹ ಸಮಾಜಮುಖಿ ಚಿಂತನೆವುಳ್ಳ ಮನಸ್ಸುಗಳು ಹೊರಬರಬೇಕಿದೆ ಎಂದರು.