ಸಾಹಿತಿ, ಸಮಾಜವಾದಿ ಚಿಂತಕ ಡಿ.ಎಸ್. ನಾಗಭೂಷಣ್ ನಿಧನರಾಗಿದ್ದು ಅವರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಿಮ್ಮಸಂದ್ರದಲ್ಲಿ ಜನಿಸಿದ ನಾಗಭೂಷಣ್ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಇಲ್ಲಿಯೇ ಪೂರೈಸಿದ್ದರು. ನಂತರ ಅವರು ಆಕಾಶವಾಣಿಯಲ್ಲಿ ವಿವಿಧ ಹುದ್ದೆಗಳಲ್ಲಿ 30 ವರ್ಷಗಳ ಕಾಲ ಕೆಲಸ ನಿರ್ವಹಿಸಿದ್ದಾರೆ. ಬಳಿಕ ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದರು.
ನಿವೃತ್ತಿಯ ಬಳಿಕ ಶಿವಮೊಗ್ಗದ ಕಲ್ಲಹಳ್ಳಿಯಲ್ಲಿ ನೆಲೆಸಿದ್ದರು. ನಿವೃತ್ತಿಯ ನಂತರ ಹೊಸ ಮನುಷ್ಯ ಮಾಸಿಕ ಪತ್ರಿಕೆಯನ್ನು ಹೊರತರುತ್ತಿದ್ದ ನಾಗಭೂಷಣ್ ಹಲವು ಪರಿಣಾಮಕಾರಿ ಲೇಖನಗಳನ್ನು ಬರೆದು ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದರು.
ಸಾಹಿತ್ಯ, ಸಮಾಜವಾದಿ ಚಿಂತನೆ, ವಿಮರ್ಶೆ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಡಿ.ಎಸ್.ನಾಗಭೂಷಣ್ ಹಲವು ಕೃತಿಗಳನ್ನು ರಚಿಸಿದ್ದಾರೆ.
ಗಮನ, ಅನೇಕ, ಈ ಭೂಮಿಯಿಂದ ಈ ಆಕಾಶದವರೆಗೆ, ಕುವೆಂಪು ಸಾಹಿತ್ಯ ದರ್ಶನ, ಬೇರು, ಬಿಳಿಲು, ಇದು ಭಾರತ ಇದು ಭಾರತ ಹೀಗೆ ಹಲವು ಕೃತಿಗಳನ್ನು ಬರೆದಿದ್ದಾರೆ.
ಮೈಸೂರಿನ ಪ್ರಗತಿಪರ ಚಿಂತಕ ಕೆ.ರಾಮದಾಸ್, ಕಡಿದಾಳ ಶಾಮಣ್ಣ ಸೇರಿ ಇತರರ ಜೀವನ ಚರಿತ್ರೆಗಳನ್ನು ಬರೆದು ಹೆಸರು ಮಾಡಿದ್ದರು.
ಮಹಾತ್ಮ ಗಾಂಧಿಯ ಕುರಿತು ಗಾಂಧಿ ಕಥನ ಕೃತಿ ರಚಿಸಿದ್ದು ಇದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿದೆ. 2021ರಲ್ಲಿ ಗಾಂಧಿ ಕಥನ ಕೃತಿಗೆ ಪ್ರಶಸ್ತಿ ಬಂದಿರುವ ಬಗ್ಗೆ ಡಿ.ಎಸ್. ನಾಗಭೂಷ ಅಚ್ಚರಿ ವ್ಯಕ್ತಪಡಿಸಿದ್ದರು.
ಡಿ.ಎಸ್.ನಾಗಭೂಷಣ್ ಅವರ ‘ಓಡಿ ಹೋದ ಹುಡುಗ’ ಕೃತಿಗೆ ಬಾಲ ಸಾಹಿತ್ಯ ಪುರಸ್ಕಾರ ದೊರೆತಿದೆ. ಗಾಂಧೀಜಿ ಅವರನ್ನು ಕುರಿತು ವಿಶೇಷವಾಗಿ ಅಧ್ಯಯನ ಮಾಡಿದ್ದ ಅವರು ಅಪ್ಪಟ ಗಾಂಧಿವಾದಿಯಾಗಿದ್ದರು.