ರಾಜ್ಯದ ಗೃಹ ಸಚಿವರ ಅರಗ ಜ್ಞಾನೇಂದ್ರ ಕನ್ನಡಿಗರ ರಕ್ಷಣೆ ಮಾಡುವಲ್ಲಿ ಮತ್ತು ಜವಾಬ್ದಾರಿ ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು ಅಧಿಕಾರದಲ್ಲಿ ಮುಂದುವರಿಯುವ ಯಾವುದೇ ನೈತಿಕತೆ ಇಲ್ಲ. ಹಾಗಾಗಿ ಅರಗ ಜ್ಞಾನೇಂದ್ರ ರಾಜಿನಾಮೆ ನೀಡಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯ ಕಂಡ ಅತ್ಯಂತ ನಿಷ್ಪ್ರಯೋಜಕ, ಭ್ರಷ್ಟ ಸರ್ಕಾರ ಇದಾಗಿದ್ದು ಪ್ರಚೋದನಾಕಾರಿ ಹೇಳಿಕೆ ನೀಡುವ ಗೃಹ ಸಚಿವರು ಕನ್ನಡಿಗರ ರಕ್ಷಣೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.
ತೀರ್ಥಹಳ್ಳಿ, ನಂದಿತಾ ಪ್ರಕರಣ, ಶಿವಮೊಗ್ಗ ಹರ್ಷ ಕೊಲೆ, ಮೈಸೂರಿನಲ್ಲಿ ರೇಪ್ ಕೇಸ್ ಮತ್ತು ಹಿಜಾಬ್ ಸೇರಿ ಎಲ್ಲಾ ಪ್ರಕರಣಗಳಲ್ಲಿ ಗೃಹ ಸಚಿವರು ಜವಾಬ್ದಾರಿ ಮರೆತಿದ್ದಾರೆ. ಪ್ರತಿಯೊಂದು ಪ್ರಕರಣಕ್ಕೂ ಮತೀಯ ಬಣ್ಣ ಕೊಡುವುದು ರಾಜ್ಯಕ್ಕೆ ಮಾಡಿದ ಅಪಮಾನ ಎಂದರು.
ಪ್ರಚೋದನಾತ್ಮಕ ಹೇಳಿಕೆ ನೀಡುವ ಮೂಲಕ ಅಪರಾಧ ಪಿತೂರಿ, ಎರಡು ಧರ್ಮಗಳ ಮಧ್ಯೆ ಜಗಳ, ತಪ್ಪು ಮಾಹಿತಿ ನೀಡಿ ಸಾಕ್ಷ್ಯ ನಾಡುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಐಪಿಸಿ ಸೆಕ್ಷನ್ 120ಬಿ ಅಪರಾಧ ಪಿತೂರಿ, 153ಎ ಎರಡು ಧರ್ಮಗಳ ಮಧ್ಯೆ ಜಗಳ, 182 ತಪ್ಪು ಮಾಹಿತಿ ನೀಡಿ ವಿಚಾರ ತಿರುಚಲು ಅಧಿಕಾರ ದುರ್ಬಳಕೆ, 201 ಪ್ರಕರಣದ ಸಾಕ್ಷಿ ನಾಶ, 202 ಪ್ರಕರಣಗಳ ಉಲ್ಲಂಘನೆಯಾಗಿದೆ ಎಂದು ಹೇಳಿದರು.
ಗೃಹ ಸಚಿವರು ಯಾವು ಮುಖ ಇಟ್ಟುಕೊಂಡು ಮುಂದುವರಿಯುತ್ತಾರೆ ಎಂದು ಪ್ರಶ್ನಿಸಿದ ಉಗ್ರಪ್ಪ, ಆರ್.ಎಸ್.ಎಸ್. ಶಾಖೆಯಲ್ಲಿ ಕಲಿಸಿರುವುದು ಇದೇನಾ? ಜನರ ರಕ್ಷಣೆ ಮಾಡಬೇಕಾದ ನೀವೇ ಈ ರೀತಿ ಮಾಡಿದರೆ ನಿಮ್ಮನ್ನು ರಾಜ್ಯದ ಹಾಗೂ ದೇಶದ ಜನ ಕ್ಷಮಿಸುವುದಿಲ್ಲ ಎಂದು ತಿಳಿಸಿದರು.
ಸಿ.ಟಿ.ರವಿ ಅವರು ಮನಸ್ಸು ಬಂದಹಾಗೆ ಮಾತನಾಡುತ್ತಾರೆ. ಅವರೊಬ್ಬ ರಾಷ್ಟ್ರೀಯ ಪಕ್ಷದ ಪ್ರಧಾನ ಕಾರ್ಯದರ್ಶಿ ಎಂದು ಹೇಳಲು ಸಾಧ್ಯವಿಲ್ಲ. ಈ ಸಮಾಜದಲ್ಲಿ ಅರಾಜಕತೆ ಸೃಷ್ಟಿಸಲು ಸಮಾಜದಲ್ಲಿ ಸ್ವಸ್ಥ್ಯ ಕೆಡಿಸಲು ಜಾತಿ-ಧರ್ಮದ ವಿಚಾರದಲ್ಲಿ ಸಮಾಜ ಒಡೆಯಲು ರಾಜ್ಯದ ಅಭಿವೃದ್ದಿಗೆ ಮಾರಕ ಆಗಲು ಕಾರಣರಾಗಿದ್ದರೆ ಅದು ರಾಜ್ಯ ಮತ್ತು ಕೇಂದ್ರ ಸರ್ಕಾರ ಮಾತ್ರ ಎಂದು ಟೀಕಿಸಿದರು.
ಭಯೋತ್ಪಾದಕ ಸಂಘಟನೆ ಸಿಡಿ ವಿಚಾರವಾಗಿ ಕೇಂದ್ರ ಮತ್ತು ರಾಜ್ಯದ ಗುಪ್ತಚರ ಇಲಾಖೆ ಏನು ಮಾಡುತ್ತಿದೆ. ನಮಗೆ ಯಾವುದೇ ವಿಚಾರವಾಗಿ ಮಾಹಿ ಇಲ್ಲ. ಈ ದೇಶದ ರಕ್ಷಣೆ ಮಾಡಲು ನಮಗೆ ಯೋಗ್ಯತೆ, ತಾಕತ್ತು ಸಾಮರ್ಥ್ಯ ಇಲ್ಲ ಎಂದು ಹೇಳಿ. ಗುಪ್ತಚರ ಇಲಾಖೆ ಜೀವಂತವಾಗಿದ್ದರೆ ಮಾಹಿತಿ ನೀಡಲು ವಿಫಲವಾಗಿರುವ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.