ಸಾಮಾಜಿಕ ಹೋರಾಟಗಾರ ಹಾಗೂ ನಟ ಚೇತನ್ ಅವರನ್ನು ನಿಗೂಢ ರೀತಿಯಲ್ಲಿ ಬಂಧನ ಮಾಡಿದ್ದು ಕೂಡಲೇ ಅವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ತುಮಕೂರಿನಲ್ಲಿ ಪ್ರತಿಭಟನೆ ನಡೆಯಿತು. ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದ ಕಾರ್ಯಕರ್ತರು ತಪ್ಪು ಮಾಡಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಸರ್ಕಾರ ಚೇತನ್ ಅವರನ್ನು ಬಂಧಿಸಿ ತಾರತಮ್ಯ ಮಾಡುತ್ತಿದೆ ಎಂದು ದೂರಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಮಾತನಾಡಿ, ಸಾಮಾಜಿಕ ಹೋರಾಟಗಾರ ಚೇತನ್ ಅವರನ್ನು ನಿಗೂಢ ರೀತಿಯಲ್ಲಿ ಬಂಧಿಸಲಾಗಿದೆ. ಕುಟುಂಬದ ಸದಸ್ಯರಿಗೂ ಮಾಹಿತಿ ನೀಡಿಲ್ಲ. ಯಾವುದೇ ನೋಟೀಸನ್ನು ನೀಡಿಲ್ಲ. ಆದರೂ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಬಂಧಿಸಿದ್ದು, ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ರಾಯಚೂರು ಜಿಲ್ಲಾ ನ್ಯಾಯಾಧೀಶರಾಗಿದ್ದ ಮಲ್ಲಿಕಾರ್ಜುನ ಗೌಡ ಗಣರಾಜ್ಯೋತ್ಸವ ದಿನದಂದು ಅಂಬೇಡ್ಕರ್ ಫೋಟೊ ತೆಗೆಸಿ ಧ್ವಜಾರೋಹ ಮಾಡಿ ಸಂವಿಧಾನಕ್ಕೆ ಅಗೌರವ ತೋರಿದರು. ಅದನ್ನು ಟೀಕೆ ಮಾಡಿದರು ಎಂಬ ಕಾರಣಕ್ಕೆ ಚೇತನ್ ಅವರನ್ನು ಬಂಧಿಸಿರುವುದು ಸರಿಯಲ್ಲ ಎಂದು ಟೀಕಿಸಿದರು.
ನಿಜವಾಗಿ ನ್ಯಾಯದ ಪರ ಧ್ವನಿ ಎತ್ತುವವರಿಗೆ ಪ್ರಜಾಪ್ರಭುತ್ವದಲ್ಲಿ ಬೆಲೆ ಇಲ್ಲ. ಸಾರ್ವಜನಿಕರ ಬಗ್ಗೆ ಈ ಸರ್ಕಾರಕ್ಕೆ ಕಾಳಜಿ ಇಲ್ಲ. ಸಚಿವ ಈಶ್ವರಪ್ಪ ಅವರು ಕಾನೂನುಗಳನ್ನು ಗಾಳಿಗೆ ತೂರಿ ಶಿವಮೊಗ್ಗದಲ್ಲಿ ಶವಯಾತ್ರೆ ನಡೆಸಿದರು. ಸಂವಿಧಾನ ಮತ್ತು ಕಾನೂನು ವ್ಯವಸ್ಥೆಗೆ ಅವಮಾನ ಮಾಡಿದ ಈಶ್ವರಪ್ಪ ಅವರ ವಿರುದ್ಧ ಕೇಸು ದಾಖಲಿಸದೆ ಚೇತನ್ ವಿರುದ್ಧ ಕೇಸು ಹಾಕಿ ಬೆದರಿಸುವ ತಂತ್ರ ಮಾಡುತ್ತಿದೆ ಎಂದು ಆರೋಪಿಸಿದರು.
ಚೇತನ್ ಅವರಿಗೆ ಎಲ್ಲಾ ಜಾತಿ, ಸಮುದಾಯಗಳ ಲಕ್ಷಾಂತರ ಅಭಿಮಾನಿಗಳು ಇದ್ದಾರೆ. ಚೇತನ್ ಭಿನ್ನ ಅಭಿಪ್ರಾಯಗಳನ್ನು ಪೇಸ್ ಬುಕ್ ಪೋಸ್ಟ್ ಮಾಡಿದ್ದನ್ನೇ ನೆಪಮಾಡಿಕೊಂಡು ಸುಮೋಟು ಪ್ರಕರಣ ದಾಖಲಿಸಿರುವುದು ಸರಿಯಲ್ಲ ಎಂದು ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಸವಣ್ಣನ ಅನುಯಾಯಿ ಎಂದು ಭಾವಿಸಿದ್ದೆವು. ಆದರೆ ಅವರು ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಮನುವಾದಿ ಅನುಯಾಯಿಯಾಗಿದ್ದಾರೆ ಎಂಬ ಗುಮಾನಿ ಮೂಡುತ್ತದೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ಹೋರಾಟ ಮಾಡುತ್ತಿರುವ ಚೇತನ್ ಅವರನ್ನು ಬಂಧಿಸಿರುವುದು ಅಕ್ಷಮ್ಯ ಅಪರಾಧ ಎಂದು ದಲಿತ ಮುಖಂಡರು ಹೇಳಿದರು.