ಹಲವು ದಿನಗಳಿಂದ ರಾಜ್ಯಾದ್ಯಂತ ಅನಿರ್ದಿಷ್ಠಾವಧಿ ಪ್ರತಿಭಟನೆ ನಡೆಸಿದ ಅತಿಥಿ ಉಪನ್ಯಾಸಕರ ಬೇಡಿಕೆಗಳು ಇನ್ನೂ ಈಡೇರಿಲ್ಲ. ಹಾಗಾಗಿ ಸೋಮವಾರ(ಫೆ.14)ದಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ಮುಂದುವರೆಸಲು ಅತಿಥಿ ಉಪನ್ಯಾಸಕರು ಸಿದ್ದತೆ ಮಾಡಿಕೊಂಡಿದ್ದಾರೆ.
ಅನಿರ್ದಿಷ್ಟಾವಧಿ ಶಾಂತಿಯುತ ಧರಣಿ ನಡೆಸಿದ ಅತಿಥಿ ಉಪನ್ಯಾಸಕರು ಸೇವಾ ಭದ್ತತೆ, ಕೆಲಸ ಖಾಯಂಗೊಳಿಸುವಂತೆ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆದಿದ್ದರು. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ ಸಮಿತಿ ರಚನೆ ಮಾಡಿ ವರದಿಯನ್ನು ತರಿಸಿಕೊಂಡ ಮೇಲೆ ಗೌರವ ಧನ ಹೆಚ್ಚಿಸಿ ಆದೇಶ ಹೊರಡಿಸಿತು.
ಈ ಆದೇಶದಿಂದ ಅತಿಥಿ ಉಪನ್ಯಾಸಕರು ತೃಪ್ತಿ ಹೊಂದಿಲ್ಲ.ಯಾಕೆಂದರೆ 14,500 ಅತಿಥಿ ಉಪನ್ಯಾಸಕರಲ್ಲಿ ಅರ್ಧದಷ್ಟು ಮಂದಿ ಮನೆಗೆ ಹೋಗಬೇಕಾದಂತಹ ಪರಿಸ್ಥಿ ನಿರ್ಮಾಣವಾಗಿದೆ. ಇದು ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸಲು ಮುಂದಾಗುವಂತೆ ಆಗಿದೆ.
ರಾಜ್ಯ ಸರ್ಕಾರದಿಂದ ರಚನೆಗೊಂಡ ಸಮಿತಿ ಅತಿಥಿ ಉಪನ್ಯಾಸಕರನ್ನು ಐದು ಭಾಗಗಳನ್ನಾಗಿ ವಿಂಗಡಿಸಿ ಗೌರವ ಧನವನ್ನು ಹೆಚ್ಚಿಸಿದೆ. ಇದು ಅತಿಥಿ ಉಪನ್ಯಾಸಕರ ನಡುವೆ ಇರುವ ಒಗ್ಗಟ್ಟನ್ನು ಒಡೆಯುವ ಯತ್ನವಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಮೊದಲನೆಯದಾಗಿ 5 ವರ್ಷ ಸೇವಾ ಅನುಭವದ ಜೊತೆಗೆ ಯುಜಿಸಿ ಉತ್ತೀರ್ಣರಾಗಿದ್ದರೆ ಅಂತಹ ಅತಿಥಿ ಉಪನ್ಯಾಸಕರಿಗೆ 32 ಸಾವಿರ ರೂಪಾಯಿ, ಯುಜಿಸಿ ಉತ್ತೀರ್ಣಗೊಂಡು 5 ವರ್ಷ ಅನುಭವ ಹೊಂದಿಲ್ಲದವರಿಗೆ 30 ಸಾವಿರ ರೂ, ಐದು ವರ್ಷ ಸೇವಾನುಭವ ಇದ್ದು ಯುಜಿಸಿ ಉತ್ತೀರ್ಣರಾಗಿಲ್ಲದೇ ಇದ್ದರೆ ಅಂಥವರಿಗೆ 28 ಸಾವಿರ ರೂ ಹಾಗೂ ಐದು ವರ್ಷ ಅನುಭವ ಇಲ್ಲದೆ, ಯುಜಿಸಿ ಆಗಿಲ್ಲದಿದ್ದರೆ ಅಂಥವರಿಗೆ 36 ಸಾವಿರ ರೂಪಾಯಿಗಳನ್ನು ಸಮಿತಿ ನಿಗದಿ ಪಡಿಸಿದೆ.
ಅತಿಥಿ ಉಪನ್ಯಾಸಕರಲ್ಲಿ ಈ ರೀತಿ ನಾಲ್ಕು ಭಾಗಗಳಾಗಿ ವಿಂಗಡಣೆ ಮಾಡಿರುವುದಕ್ಕೆ ಅತಿಥಿ ಉಪನ್ಯಾಸಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈಗ ಸರ್ಕಾರ ಹೆಚ್ಚಿಸಿರುವ ಗೌರವಧನ ಕಣ್ಣೊರೆಸುವ ತಂತ್ರ. ಬೋಧನಾ ಅವಧಿಯನ್ನು ಹೆಚ್ಚಿಸಿ ಇರುವ ಕೆಲಸವನ್ನು ಕಸಿದುಕೊಳ್ಳುವ ಸರ್ಕಾರದ ನಿರ್ಧಾರ ಅವೈಜ್ಞಾನಿಕವಾಗಿದೆ. ಇಂತಹ ಅವೈಜ್ಞಾನಿಕ ಆದೇಶವನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಅತಿಥಿ ಉಪನ್ಯಾಶಕರು ಆಗ್ರಹಿಸಿದ್ದಾರೆ.
ಅತಿಥಿ ಉಪನ್ಯಾಸಕರ ಬೋಧನ ಅವಧಿಯನ್ನು ಹೆಚ್ಚಳ ಮಾಡಿರುವುದರಿಂದ ಅರ್ಧಕ್ಕೂ ಹೆಚ್ಚು ಮಂದಿ ಉಪನ್ಯಾಸಕರು ಮನೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ನಿಲ್ಲಬೇಕು. ಸರ್ಕಾರ ಒಂದು ಅವಧಿಗೆ ಕೇವಲ 100 ರೂಪಾಯಿ ಮಾತ್ರ ಹೆಚ್ಚು ಮಾಡಿದೆ. ಸರ್ಕಾರದ ಈ ಅನ್ಯಾಯದ ಕ್ರಮವನ್ನು ಖಂಡಿಸುತ್ತೇವೆ ಎಂದು ಹೇಳಿದ್ದಾರೆ.
ನಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆಯನ್ನು ಕೈಬಿಡುವುದಿಲ್ಲ. ಫೆ.14 ರಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ಮುಂದುವರೆಯಲಿದೆ. ಸರ್ಕಾರ ಅತಿಥಿ ಉಪನ್ಯಾಸಕರನ್ನು ಕಡೆಗಣಿಸಿದರೆ ಸುಮ್ಮನೆ ಕೂರಲು ಸಾಧ್ಯವಿಲ್ಲ. ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಅತಿಥಿ ಉಪನ್ಯಾಸಕರ ಸಂಘ ಹೇಳಿದೆ.