ರಾಜ್ಯ ಸರ್ಕಾರ ಇತ್ತೀಚೆಗೆ ತೆಗೆದುಕೊಂಡ ನಿರ್ಧಾರದಿಂದ ಅರ್ಧದಷ್ಟು ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳಲಿದ್ದಾರೆ. ಇದರಿಂದ ಇದನ್ನೇ ನಂಬಿಕೊಂಡಿದ್ದ ಅತಿಥಿ ಉಪನ್ಯಾಸಕರ ಸಾವಿರಾರು ಕುಟುಂಬಗಳು ಅಕ್ಷರಶಃ ಬೀದಿಗೆ ಬೀಳಲಿದ್ದು, ಅವರ ಮುಂದಿನ ಭವಿಷ್ಯ ಕರಾಳವಾಗಲಿದೆ. ಹಾಗೆಯೇ ಅತಿಥಿ ಉಪನ್ಯಾಸಕರು ಹೆಂಡತಿ-ಮಕ್ಕಳು ಮತ್ತು ವೃದ್ಧ ತಂದೆ-ತಾಯಿ ನೋಡಿಕೊಳ್ಳುವುದು ಕಷ್ಟವಾಗಲಿದೆ.
ರಾಜ್ಯದಲ್ಲಿ 14 ಸಾವಿರಕ್ಕೂ ಹೆಚ್ಚು ಮಂದಿ ಅತಿಥಿ ಉಪನ್ಯಾಸಕರು ಬೋಧನೆಯಲ್ಲಿ ತೊಡಗಿದ್ದು, ಈಗಿನ ಸರ್ಕಾರದ ನಿರ್ಧಾರದಿಂದ ಅರ್ಧಕ್ಕೂ ಹೆಚ್ಚು ಮಂದಿ ಮನೆಗೆ ಹೋಗಬೇಕಾದ ಅನಿವಾರ್ಯತೆಯನ್ನು ಸರ್ಕಾರ ಸೃಷ್ಟಿಸಿದೆ. 13 ಸಾವಿರ ರೂಪಾಯಿ ಗೌರವಧನ ತೆಗೆದು ಕೊಳ್ಳುತ್ತಿದ್ದ ಅತಿಥಿ ಉಪನ್ಯಾಸಕರಿಗೆ 32 ಸಾವಿರ ರೂಪಾಯಿಗೆ ಗೌರವಧನ ಹೆಚ್ಚಿಸುವ ಜೊತೆಗೆ ಬೋಧನಾವಧಿಗಳನ್ನು ಹೆಚ್ಚಿಸಲಾಗಿದೆ. ಇದೇ ಅತಿಥಿ ಉಪನ್ಯಾಸಕರ ಬದುಕಿಗೆ ಕುತ್ತು ತಂದಿದೆ.
ಅತಿಥಿ ಉಪನ್ಯಾಸಕರಿಗೆ ವಾರಕ್ಕೆ 15 ಗಂಟೆ ಬೋಧನಾವಧಿ ಹೆಚ್ಚಿಸಿ ಸರ್ಕಾರ ಉಳಿದ ಅತಿಥಿ ಉಪನ್ಯಾಸಕರ ಬಳಿಯಿದ್ದ ಬೋಧನಾ ಅವಧಿಯನ್ನು ಅನಾಮತ್ತಾಗಿ ಕಿತ್ತುಕೊಂಡಿದೆ. ಹೀಗಾಗಿ ಅರ್ಧದಷ್ಟು ಅತಿಥಿ ಉಪನ್ಯಾಸಕರು ಮನೆಯಲ್ಲೇ ಇರುವಂತಹ ವಾತಾವರಣ ಸೃಷ್ಟಿ ಮಾಡಿದೆ. ಇದು ಅತಿಥಿ ಉಪನ್ಯಾಸಕರ ಆತಂಕಕ್ಕೆ ಕಾರಣವಾಗಿದೆ. ಅಂದರೆ ಸರ್ಕಾರ ಅತಿಥಿ ಉಪನ್ಯಾಸಕರ ಸಂಘದಲ್ಲಿ ಒಡಕು ಮೂಡುವಂತೆ ಮಾಡಿದೆ ಎಂಬ ಚರ್ಚೆಗಳು ನಡೆಯುತ್ತಿವೆ.
ಕಳೆದ 25-30 ವರ್ಷಗಳಿಂದಲೂ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಬೋಧನೆ ಮಾಡಿಕೊಂಡು ಬಂದಿರುವ ಅತಿಥಿ ಉಪನ್ಯಾಸಕರು ಸರ್ಕಾರದ ಈಗಿನ ನಿಯಮಗಳಿಂದ ಕೆಲಸವನ್ನೇ ಕಳೆದುಕೊಳ್ಳುವಂತಹ ಸ್ಥಿತಿಗೆ ಬಂದು ನಿಲ್ಲುವಂತೆ ಆಗಿದೆ. ಮಕ್ಕಳಿಗೆ ಬೋಧನೆ ಮಾಡುತ್ತಿದ್ದ ಅತಿಥಿ ಉಪನ್ಯಾಸಕರಿಗೆ ಬೇರೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅವರ ಭವಿಷ್ಯಕ್ಕೆ ಮಂಕು ಕವಿದಿದೆ.
ಅತಿಥಿ ಉಪನ್ಯಾಸಕರಲ್ಲಿ ಅರ್ಥದಷ್ಟು ಮಂದಿ ಮನೆಗೆ ಹೋದರೆ ಅವರನ್ನೇ ನಂಬಿರುವ ಕುಟುಂಬದ ಸದಸ್ಯರು ಇಕ್ಕಟ್ಟಿಗೆ ಸಿಲುಕಲಿದ್ದಾರೆ. ಮಕ್ಕಳ ಶಾಲಾ ಶುಲ್ಕ, ಬಾಡಿಗೆ, ವಾಹನಕ್ಕೆ ಪೆಟ್ರೋಲ್ ಹೀಗೆ ಹಲವು ರೀತಿಯ ಖರ್ಚುವೆಚ್ಚಗಳನ್ನು ಭರಿಸಲು ಕಷ್ಟವಾಗುತ್ತದೆ. ಇದ್ದ ಕೆಲಸವೂ ಇಲ್ಲವಾದರೆ ಅಷ್ಟು ಮಂದಿ ನಿರುದ್ಯೋಗಿಗಳಾಗುವ ಸಾಧ್ಯತೆ ಹೆಚ್ಚಾಗಿದೆ. ಅತಿಥಿ ಮನೆಗೆ ಬಂದಷ್ಟೇ ವೇಗವಾಗಿ ಹೋಗಬೇಕು ಎಂಬಂತೆ ಸರ್ಕಾರ ವರ್ತಿಸುತ್ತಿದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದ ಅತಿಥಿ ಉಪನ್ಯಾಸಕರ ಬದುಕು ಅತಂತ್ರ ಸ್ಥಿತಿಗೆ ತಲುಪಲಿದೆ.
ಸರ್ಕಾರದ ಕ್ರಮದಿಂದ ಇದುವರೆಗೆ ಹಲವು ಮಂದಿ ಅತಿಥಿ ಉಪನ್ಯಾಸಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಆದರೂ ಸರ್ಕಾರ ಅತಿಥಿ ಉಪನ್ಯಾಸಕರ ನೆರವಿಗೆ ಧಾವಿಸಿಲ್ಲ. ಈಗ ಬೋಧನೆಯಲ್ಲಿ ತೊಡಗಿರುವ ಎಲ್ಲರಿಗೂ ಗೌರವ ಧನ ಹೆಚ್ಚಿಸಿ ಅತಿಥಿ ಉಪನ್ಯಾಸಕರಾಗಿ ಮುಂದುವರಿಸಲು ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ಅತಿಥಿ ಉಪನ್ಯಾಸಕರ ಕುಟುಂಬಗಳು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯ ಎಂಬುದನ್ನು ಸರ್ಕಾರ ಮನಗಾಣಬೇಕು.
ಆದರೆ ಈಗ ತೆಗೆದುಕೊಂಡಿರುವ ನಿರ್ಧಾರ ಅವೈಜ್ಞಾನಿಕವಾಗಿದ್ದು ಬೋಧನ ಅವಧಿಯನ್ನು ಹೆಚ್ಚಿಸಿ ಉಳಿದ ಅತಿಥಿ ಉಪನ್ಯಾಸಕರಿಂದ ಕೆಲಸವನ್ನು ಕಸಿದುಕೊಳ್ಳಲಾಗಿದೆ. ಈ ಮೂಲಕ ಅತಿಥಿ ಉಪನ್ಯಾಸಕರಲ್ಲೇ ಒಡಕು ಮೂಡುವಂತಹ ಕೆಲಸಕ್ಕೆ ಸರ್ಕಾರ ಕೈಹಾಕಿದೆ. ಇದರಿಂದ ಭವಿಷ್ಯದಲ್ಲಿ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬುದನ್ನು ಅರ್ಥ ಮಾಡಿಕೊಂಡರೆ ಸಮಸ್ಯೆ ಶೀಘ್ರವೇ ಬಗೆಹರಿಯಲಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅತಿಥಿ ಉಪನ್ಯಾಸಕರ ಬೆಂಬಲಕ್ಕೆ ನಿಂತಿದ್ದಾರೆ. ಸರ್ಕಾರದ ಈಗಿನ ತೀರ್ಮಾನದಿಂದ ಅರ್ಧಕ್ಕೂ ಹೆಚ್ಚು ಮಂದಿ ಅತಿಥಿ ಉಪನ್ಯಾಸಕರು ಮನೆಗೆ ಹೋಗುತ್ತಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದ್ದಾರೆ. ಆದರೆ ಉನ್ನತ ಶಿಕ್ಷಣ ಸಚಿವರು ಇಂತಹ ಸನ್ನಿವೇಶ ಉದ್ಭವಿಸುವುದಿಲ್ಲ ಎಂದು ಹೇಳಿದ್ದಾರೆ. ಹೀಗೆ ರಾಜಕೀಯ ಮಾತನಾಡುವುದು ಬಿಟ್ಟು ವೈಜ್ಞಾನಿಕವಾಗಿ ಎಲ್ಲ ಅತಿಥಿ ಉಪನ್ಯಾಸಕರನ್ನು ಮುಂದುವರಿಸಿ, ವಿದ್ಯಾರ್ಥಿಗಳೀಗೆ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸಿದರೆ ಒಳ್ಳೆಯದು. ಇಲ್ಲದಿದ್ದರೆ ಸಮಸ್ಯೆಗಳ ಬೇರುಗಳು ಆಳಕ್ಕೆ ಇಳಿದು ಇದೊಂದು ದೊಡ್ಡ ಸಮಸ್ಯೆಯಾಗಿ ಕಾಡಲಿದೆ.
ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರು ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡರೆ ಸಾವಿರಾರು ಕುಟುಂಬಗಳು ನೆಮ್ಮದಿಯ ಜೀವನ ಕಟ್ಟಿಕೊಳ್ಳಲಿವೆ. ಆದ್ದರಿಂದ ಸರ್ಕಾರ ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ ಕಲ್ಪಿಸಬೇಕು. ಆ ಮೂಲಕ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
ಕೆ.ಈ.ಸಿದ್ದಯ್ಯ