ಚುನಾವಣಾ ಪ್ರಚಾರ ನಡೆಸಲು ಆಗಮಿಸಿ ಬಿಜೆಪಿ ಮುಖಂಡ ಮಣಿಂದರ್ ಪಾಲ್ ಸಿಂಗ್ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಚುರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮಣಿಂದರ್ ಪಾಲ್ ಸಿಂಗ್ ಸಿವಾಲ್ಖಾನ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದು ದಾಳಿಯ ಸಮಯದಲ್ಲಿ ಅವರ ಕಾರಿನ ಕಿಟಕಿ ಗಾಜುಗಳು ಒಡೆದುಹೋಗಿವೆ. ಪ್ರಚಾರಕ್ಕಾಗಿ ಜಾಟ್ ಪ್ರಾಬಲ್ಯವಿರುವ ಗ್ರಾಮಕ್ಕೆ ಸಿಂಗ್ ಭೇಟಿ ನೀಡಿದ ಸಂದರ್ಭದಲ್ಲಿ ದಾಳಿ ನಡೆದಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ದಾಳಿಗೆ ಅತೃಪ್ತ ರಾಷ್ಟ್ರೀಯ ಲೋಕದಳ ಕಾರಣ ಎಂದು ಬಿಜೆಪಿ ದೂರಿದೆ. ಅಷ್ಟೇ ಅಲ್ಲ ಅನುಕಂಪದ ಮತಗಳನ್ನು ಗಳಿಸಲು ಈ ತಂತ್ರ ಮಾಡಲಾಗಿದೆ ಎಂದು ಟೀಕಿಸಿದೆ.
ಬಿಜೆಪಿಗೆ ಸೇರುವ ಮೊದಲು ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ಸದಸ್ಯರಾಗಿದ್ದ ಸಿಂಗ್, ಕಳೆದ ವಾರ ಮೀರತ್ನ ಪಾಥೋಲಿ ಗ್ರಾಮದಲ್ಲಿ ಇದೇ ರೀತಿಯ ಪ್ರತಿಭಟನೆ ಎದುರಿಸಿದ್ದರು.
ಕೋಪಗೊಂಡ ಗ್ರಾಮಸ್ಥರು ಅಲ್ಲಿಂದ ತೊರೆಯುವಂತೆ ಕೇಳಿಕೊಂಡರು. ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಸರ್ಧಾನದಿಂದ ಬಂದಿರುವ ಸಿಂಗ್ ವಿರುದ್ಧ ಅಸಮಾಧಾನ ಉಂಟಾಗಿದೆ.


