ನವಭಾರತ ಬಲಿಷ್ಠ ಭಾರತ, ಸಂವೇದನಾಶೀಲ ಮತ್ತು ಸಶಕ್ತ ಭಾರತವಾಗಿ ಹೊರಹೊಮ್ಮುತ್ತಿದೆ ಎಂದು ರಾಷ್ಟಪತಿ ರಾಮನಾಥ ಕೋವಿಂದ್ ಹೇಳಿದ್ದಾರೆ.
73ನೇ ಗಣರಾಜ್ಯೋತ್ಸವ ಆಚರಣೆಯ ಆಂಗವಾಗಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಷ್ಟದ ಸಮಯದಲ್ಲಿ ಮಾತ್ರ ದೇಶದ ಸ್ಥಿತಿಸ್ಥಾಪಕತ್ವವು ಹೊರಹೊಮ್ಮುತ್ತದೆ. ನಾವು ಕೊರೊನ ವೈರಸ್ ವಿರುದ್ಧ ಸಾಟಿಯಿಲ್ಲದ ಸಂಕಲ್ಪವನ್ನು ತೋರಿಸಿದ್ದೇವೆ ಎಂದು ಹೇಳಿದರು.
ವೈದ್ಯರು, ದಾದಿಯರು ಮತ್ತು ಅರೆವೈದ್ಯರು ಸವಾಲನ್ನು ಎದುರಿಸುತ್ತಿದ್ದಾರೆ. ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ತಮ್ಮ ಜೀವನವನ್ನು ಪಣಕ್ಕಿಟ್ಟು ಕಠಿನ ಪರಿಸ್ಥಿತಿಗಳನ್ನು ಎದುರಿಸಿ ಕೆಲಸ ಮಾಡುತ್ತಿದ್ದು ಇಡೀ ದೇಶವನ್ನು ಮುನ್ನಡೆಸಿದ್ದಾರೆ ಎಂದು ಶ್ಲಾಘಿಸಿದರು.
ಪ್ರಜಾಪ್ರಭುತ್ವ, ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವು ದೇಶದ ತಳಹದಿಯಾಗಿದೆ. ಸಂವಿಧಾನದಲ್ಲಿ ಉಲ್ಲೇಖಿಸಿರುವ ಮೂಲಭೂತ ಹಕ್ಕುಗಳು ಮತ್ತು ಮೂಲಭೂತ ಕರ್ತವ್ಯಗಳ ಪಾಲನೆ ಸರಿಯಾದ ವಾತಾವರಣ ಸೃಷ್ಟಿಸುತ್ತದೆ ಎಂದು ಹೇಳಿದರು.
ನಮ್ಮ ಪ್ರಜಾಪ್ರಭುತ್ವದ ವೈವಿಧ್ಯತೆ ಮತ್ತು ಚೈತನ್ಯವನ್ನು ವಿಶ್ವಾದ್ಯಂತ ಪ್ರಶಂಸಿಸಲಾಗಿದೆ. ಏಕತೆಯ ಮನೋಭಾವದಿಂದ ಪ್ರತಿ ವರ್ಷ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಕೃಷಿ ಮತ್ತು ಉತ್ಪಾದನಾ ವಲಯಗಳಲ್ಲಿ ಸುಧಾರಣೆಯಿಂದ ಪ್ರಭಾವಶಾಲಿ ಆರ್ಥಿಕ ಸಾಧನೆ ಸಾಧ್ಯವಾಗಿದೆ. ರೈತರು, ವಿಶೇಷವಾಗಿ ಸಣ್ಣ ಹಿಡುವಳಿ ಹೊಂದಿರುವ ಯುವ ರೈತರು ಉತ್ಸಾಹದಿಂದ ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳುತ್ತಿರುವುದು ಸಂತೋಷ ತಂದಿದೆ ಎಂದರು.
ಭವಿಷ್ಯದ ಸವಾಲುಗಳನ್ನು ಎದುರಿಸಲು ಭಾರತ ಸನ್ನದ್ದವಾಗಿದೆ. ಮುಂದಿನ ಪೀಳಿಗೆಗೆ ಹೊಸ ಅವಕಾಶಗಳು ಕಾಯುತ್ತಿವೆ. ಎಲ್ಲಾ ವಿಭಾಗಗಳ ಜನರು ತಮ್ಮ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ಮಾಡುವುದು ದೇಶಕ್ಕೆ ನೀಡುವ ಅಗ್ರಗಣ್ಯ ಕೊಡುಗೆಯಾಗಿದೆ ಎಂದು ಹೇಳಿದರು.


