ಮಂಡ್ಯ ಜಿಲ್ಲೆಯ ಪಾಂಡವಪುರದ ನಿರ್ಮಲಾ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಸಂಘ ಪರಿವಾರದ ಕಾರ್ಯಕರ್ತರು ಅಡ್ಡಿಪಡಿಸಿ ಬೆದರಿಕೆ ಹಾಕಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಸೆರೆಯಾಗಿದೆ.
ನಾಲ್ಕೈದು ಮಂದಿ ಸಂಘ ಪರಿವಾರದ ಕಾರ್ಯಕರ್ತರು ಶಿಕ್ಷಕಿಯರು ಮತ್ತು ಸಿಸ್ಟರ್ಸ್ ಗಳನ್ನು ಪ್ರಶ್ನಿಸುತ್ತಾ ಇದು ಹಿಂದೂ ದೇಶ ಇಲ್ಲಿ ನಿಮ್ಮ ಆಟ ನಡೆಯುವುದಿಲ್ಲ. ನಾವು ಹೇಳಿದಂತೆ ನೀವು ಕೇಳಬೇಕೆಂದು ಧಮಕಿ ಹಾಕಿರುವುದು ವಿಡಿಯೋದಲ್ಲಿದೆ.

ಇದು ಸರ್ವಧರ್ಮೀಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಶಾಲೆಯಾದರೆ ನೀವು ಕ್ರಿಸ್ತನ ಭಾವಚಿತ್ರವನ್ನು ಮಾತ್ರ ಹಾಕಿದ್ದೀರಿ. ನಾವು ಸರಸ್ವತಿ, ಈಶ್ವರನ ಫೋಟೋ ತಂದುಕೊಡುತ್ತೇವೆ. ಅವುಗಳನ್ನು ಹಾಕಿ. ನಿಮಗೆ ಸಂಬಳ ಕೊಡುವುದು ಯಾರು? ಸರ್ಕಾರ ಹಣ ಕೊಡುವುದಾದರೆ ನಾವು ಹೇಳಿದಂತೆ ನೀವು ಕೇಳಬೇಕು ಎಂದು ಸಂಘ ಪರಿವಾರದ ಕಾರ್ಯಕರ್ತರು ಶಿಕ್ಷಕಿಯರು ಮತ್ತು ಸಿಸ್ಟರ್ಸ್ ಗಳಿಗೆ ಕೇಳುತ್ತಿರುವ ಧ್ವನಿಯುಕ್ತ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.
‘ನೋಡಿ ಇವರು ಇಲ್ಲಿ ಕ್ರಿಸ್ಮಸ್ ಆಚರಣೆ ಮಾಡುತ್ತಾರೆ. ಇಲ್ಲಿ ಹಿಂದೂ ದೇವರ ಪೋಟೋ ಇಲ್ಲ. ಪೋಷಕರು ತಮ್ಮ ಮಕ್ಕಳನ್ನು ಬೇರೆ ಕಡೆ ಸೇರಿಸಿ. ಇಲ್ಲದಿದ್ದರೆ ಮುಂದಿನ ಪರಿಣಾಮವನ್ನು ನೀವೇ ಎದುರಿಸಬೇಕಾಗುತ್ತದೆ ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ನಾವು ಪ್ರತಿ ವರ್ಷ ಕ್ರಿಸ್ಮಸ್ ಆಚರಣೆ ಆಯೋಜಿಸುತ್ತೇವೆ. ಕೋವಿಡ್ ಕಾರಣ ಕ್ರಿಸ್ಮಸ್ ಆಚರಣೆ ರದ್ದುಗೊಳಿಸಿದ್ದೆವು. ಆದರೆ ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ನಾವು ಸಣ್ಣ ಆಚರಣೆ ಆಯೋಜಿಸಿದ್ದೇವೆ. ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ಹಣ ಸಂಗ್ರಹಿಸಿ ಕೇಕ್ ಆರ್ಡರ್ ಮಾಡಿದ್ದರು. ಇದಕ್ಕೆ ಪೋಷಕರೊಬ್ಬರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಮುಖ್ಯೋಪಾಧ್ಯಾಯನಿ ಕನ್ನಿಕಾ ಫ್ರಾನ್ಸಿಸ್ ಮೇರಿ ಹೇಳಿಕೆಯನ್ನು ಉಲ್ಲೇಖಿಸಿ ಎನ್.ಡಿ. ಟಿವಿ ವರದಿ ಮಾಡಿದೆ.
ರಾಮಪ್ರಿಯ ಸಂಪತ್ ಕುಮಾರನ್ ಎಂಬುವರ ವಿಡಿಯೋವನ್ನು ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ‘ನೋಡಿ ಸಣ್ಣ ಮಕ್ಕಳ ಮನಸ್ಸನ್ನು ಮಿಷನರಿ ಶಾಲೆಗಳು ಹೇಗೆ ಬೇರೆಡೆಗೆ ಸೆಳೆಯುತ್ತಿವೆ. ಪೋಷಕರೇ ಗಮನಿಸಿ! ನಿಮ್ಮ ಮಕ್ಕಳನ್ನು ಕ್ರಿಶ್ಚಿಯನ್ ಶಾಲೆಗೆ ಸೇರಿಸಬೇಡಿ. ಎಚ್ಚರಿಕೆ, ಇದು ನಿರ್ಮಲಾ ಶಾಲೆ. ಪಾಂಡವಪುರ, ಮಂಡ್ಯ ಜಿಲ್ಲೆ. ಕರ್ನಾಟಕ ಎಂದು ಬರೆದು ಎಚ್ಚರಿಕೆ ನೀಡಿದ್ದಾರೆ.
ಸಂಘ ಪರಿವಾರದ ಕಾರ್ಯಕರ್ತರು ಬೆದರಿಕೆ ಹಾಕಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.


