ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ನಾಗಾಲ್ಯಾಂಡ್ ನ ಮೋನ್ ಜಿಲ್ಲೆಯ ತಿರು ಪ್ರದೇಶದಲ್ಲಿ 10 ಮಂದಿ ನಾಗರಿಕರನ್ನು ಹತ್ಯೆ ಮಾಡಲಾಗಿದೆ. ಭದ್ರತಾ ಪಡೆಗಳು ನಾಗರಿಕರನ್ನು ಗುರುತಿಸುವಲ್ಲಿ ವೈಫಲ್ಯವುಂಟಾಗಿ ಈ ಪ್ರಮಾದ ಜರುಗಿದೆ ಎಂದು ಹೇಳಲಾಗುತ್ತಿದೆ.
ಅಧಿಕೃತವಾಗಿ ಹತ್ತು ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಗಿದ್ದು, ಇನ್ನೂ ಇರಬಹುದು ಎಂದು ನಾಗಾಲ್ಯಾಂಡ್ ಉಪಮುಖ್ಯಮಂತ್ತಿ ಮತ್ತು ಗೃಹ ಸಚಿವ ವೈ.ಪ್ಯಾಟನ್ ತಿಳಿಸಿದ್ದಾರೆಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಆದರೆ ಅನಧಿಕೃತ ಮೂಲಗಳ ಪ್ರಕಾರ 13 ಮಂದಿ ನಾಗರಿಕರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಅಸ್ಸಾಂ ರೈಫಲ್ಸ್ ಬಂಡುಕೋರರ ಚಲನವಲನದ ಕುರಿತು ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧಾರದ ಮೇಲೆ ತಿರು ಪ್ರದೇಶದಲ್ಲಿ ಭದ್ರತಾ ಪಡೆಗಳು ನಿರ್ದಿಷ್ಟ ಕಾರ್ಯಾಚರಣೆ ನಡೆಸಿದಾಗ ಈ ಘಟನೆ ನಡೆದಿದೆ.
ಸಾವುನೋವುಗಳ ಸಂಖ್ಯೆ ಅಥವಾ ಭಾಗಿಯಾದ ಘಟಕಗಳ ವಿವರಗಳನ್ನು ಬಹಿರಂಗಪಡಿಸದೆ ‘ಘಟನೆ ಮತ್ತು ಅದರ ನಂತರದ ಪರಿಣಾಮಗಳಿಗೆ ತೀವ್ರವಾದ ವಿಷಾದವಿದೆ ಎಂದು ಹೇಳಿಕೆ ತಿಳಿಸಿದೆ.
ದುರದೃಷ್ಟಕರ ಜೀವಹಾನಿಯ ಕಾರಣವನ್ನು ಉನ್ನತ ಮಟ್ಟದ ವಿಚಾರಣಾ ನ್ಯಾಯಾಲಯ ತನಿಖೆ ನಡೆಸುತ್ತದೆ ಮತ್ತು ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಭಾನುವಾರ ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೃತರ ಕುಟುಂಬಗಳಿಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ. ನಾಗಾಲ್ಯಾಂಡಿನ ಓಟಿಂಗ್ ನಲ್ಲಿ ನಡೆದ ಅಹಿತಕರ ಘಟನೆಯಿಂದ ದುಃಖಿತನಾಗಿದ್ದೇನೆ. ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನನ್ನ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ರಾಜ್ಯ ಸರ್ಕಾರ ರಚಿಸಿರುವ ಉನ್ನತ ಮಟ್ಟದ ಎಸ್.ಐ.ಟಿ ಈ ಘಟನೆಯನ್ನು ಕೂಲಂಕಷವಾಗಿ ತನಿಖೆ ನಡೆಸಿ ದುಃಖತಪ್ತ ಕುಟುಂಬಗಳಿಗೆ ನ್ಯಾಯ ಒದಗಿಸಲಿದೆ ಎಂದು ಶಾ ಟ್ವೀಟ್ ಮಾಡಿದ್ದಾರೆ.


