ಕೇರಳದ ಪತ್ತನಂತ್ತಿಟ್ಟ ಜಿಲ್ಲೆಯ ಪೆರಿಂಗಾರ ಸಿಪಿಎಂ ಸ್ಥಳೀಯ ಕಾರ್ಯದರ್ಶಿ ಸಂದೀಪ್ ಕುಮಾರ್ ಅವರನ್ನು ಹತ್ಯೆ ಮಾಡಲಾಗಿದೆ. ಆರ್.ಎಸ್.ಎಸ್ ನರಭೋಜಿಗಳ ಕತ್ತಿಯೇಟಿಗೆ ಸಂದೀಪ್ ಬಲಿಯಾಗಿದ್ದಾರೆ ಎಂದು ಸಿಪಿಎಂ ಮುಖಂಡರು ಆರೋಪಿಸಿದ್ದಾರೆ.
ಜಿಷ್ಣುವಿನ ತಾಯಿಯನ್ನು ಕೆಲಸದಿಂದ ವಜಾಗೊಳಿಸುವಂತೆ ಕೇರಳ ಸರ್ಕಾರದ ಮೇಲೆ ಸಂದೀಪ್ ಪ್ರಯತ್ನಿಸಿದ್ದರು. ಹಾಗಾಗಿ ಆರೋಪಿಗಳಲ್ಲಿ ಒಬ್ಬನಾದ ಜಿಷ್ಣು ಮತ್ತು ಸಂದೀಪ್ ನಡುವೆ ಹಲವು ಬಾರಿ ಜಗಳ ನಡೆದಿತ್ತು ಎಂದು ಪೊಲೀಸರು ಹೇಳಿದ್ದಾರೆ. ಆದರೆ ಪೊಲೀಸರ ಈ ವಾದವನ್ನು ಪತ್ತನಂತಿಟ್ಟ ಸಿಪಿಎಂ ಜಿಲ್ಲಾ ನಾಯಕತ್ವ ತಳ್ಳಿಹಾಕಿದೆ.
ಜಿಷ್ಣು ತಾಯಿ ಟ್ರಾವೆಂಕೂರ್ ಸುಗರ್ಸ್ ಮತ್ತು ಕೆಮಿಕಲ್ಸ್ ಲಿಮಿಟೆಡ್ ಕಾರ್ಖಾನೆಯಲ್ಲಿ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪತ್ತನಂತಿಟ್ಟ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ.
ಗುರುವಾರ ರಾತ್ರಿ 8.30ರ ಸುಮಾರಿಗೆ ಸಂದೀಪ್ ಕೊಲೆಯಾಗಿದ್ದರು. ಆಸ್ಪತ್ರೆ ತಲುಪುವ ಮೊದಲೇ ಮೃತ ಸಂದೀಪ್ ದೇಹದ ಮೇಲೆ 11 ಇರಿತದ ಗಾಯಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ನೆಡುಂಪುರ ಬಳಿ ಮೂರು ಬೈಕ್ ನಲ್ಲಿ ಬಂದ ಐದು ಜನರ ಗುಂಪು ಸಂದೀಪ್ ಮೇಲೆ ದಾಳಿ ಮಾಡಿದೆ. ಸಂದೀಪ್ ಅವರನ್ನ ತಡೆದು ಹಲ್ಲೆ ನಡೆಸಿದೆ. ಕುತ್ತಿಗೆ ಮತ್ತು ಹೊಟ್ಟೆಗೆ ಅರಿತವಾದ ಆಯುಧದಿಂದ ತಿವಿದು ಭತ್ತದ ಗದ್ದೆಗೆ ನೆಗೆದು ಪರಾರಿಯಾಗಿದೆ. ಇದು ಆರ್.ಎಸ್.ಎಸ್. ಕೃತ್ಯವಾಗಿದೆ. ಪಕ್ಷದ ಕಾರ್ಯಕರ್ತರನ್ನು ಕೊಲ್ಲುತ್ತಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸಿಪಿಎಂ ರಾಜ್ಯ ಕಾರ್ಯದರ್ಶಿ ಒತ್ತಾಯಿಸಿದ್ದಾರೆ.
ನೆಡುಂಪುರ ಬಳಿ ಸಂದೀಪ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಜಿಷ್ಣು, ನಂದು, ಪ್ರಮೋದ್ ಮತ್ತು ಫೈಸಲ್ ಅವರನ್ನು ಆಲಪ್ಪುಳದ ಕರುವಟ್ಟದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂದೀಪ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆನ್ನಲಾದ ಐದನೇ ಆರೋಪಿ ತಲೆಮರೆಸಿಕೊಂಡಿದ್ದು ಶೋಧ ಕಾರ್ಯ ಮುಂದುವರೆದಿದೆ.


