ಬೆಂಗಳೂರಿನಲ್ಲಿ ಡ್ರಗ್ಸ್ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪುತ್ರ ಬಿನೀಷ್ ಬಂಧನಕ್ಕೊಳಗಾದ ನಂತರ ಕೇರಳ ಸಿಪಿಎಂ ಕಾರ್ಯದರ್ಶಿ ಹುದ್ದೆ ತ್ಯಜಿಸಿದ್ದ ಕೊಡಿಯೇರಿ ಬಾಲಕೃಷ್ಣನ್ ಶುಕ್ರವಾರ ಮತ್ತೆ ಕಾರ್ಯದರ್ಶಿ ಹುದ್ದೆಗೆ ಮರಳಿದ್ದಾರೆ.
ಪಾಲಿಟ್ ಬ್ಯೂರೋ ಸದಸ್ಯರಾಗಿದ್ದ ಕೊಡಿಯೇರಿ ಬಾಲಕೃಷ್ಣನ್ ತಮ್ಮ ಪುತ್ರ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿದ ಬಳಿಕ ನವೆಂಬರ್ ನಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಸ್ಥಾನದಿಂದ ಹಿಂದೆ ಸರಿದಿದ್ದರು. ಇಂದು ಮತ್ತೆ ಅವರು ಆ ಸ್ಥಾನಕ್ಕೆ ಮರಳಿದ್ದಾರೆ.
ಪಕ್ಷದ ರಾಜ್ಯ ಕಾರ್ಯದರ್ಶಿ ಸಭೆಯಿಂದ ಹೊರಬಂದ ಹಿರಿಯ ನಾಯಕ ಮತ್ತು ಮಾಜಿ ಸಚಿವ ಎಂ.ಎಂ. ಮಣಿ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
2020ರ ಅಕ್ಟೋಬರ್ ನಲ್ಲಿ ಬಂಧನಕ್ಕೊಳಗಾಗಿ ಒಂದು ವರ್ಷ ನ್ಯಾಯಾಂಗ ಬಂಧನದಲ್ಲಿದ್ದ ಕಿರಿಯ ಪುತ್ರ ಬಿನೀಷ್ ಜಾಮೀನಿನ ಮೇಲೆ ಬಿಡುಗಡೆಯಾದ ಒಂದು ತಿಂಗಳ ಬಳಿಕ ಬಾಲಕೃಷ್ಣನ್ ಮತ್ತೆ ಪಕ್ಷದ ರಾಜ್ಯ ಕಾರ್ಯದರ್ಶಿ ಸ್ಥಾನಕ್ಕೆ ಮರಳಿದ್ದಾರೆ.
ಬಾಲಕೃಷ್ಣನ್ ಅವರಿಂದ ತೆರವಾದ ಸ್ಥಾನಕ್ಕೆ ಕೇಂದ್ರ ಸಮಿತಿ ಸದಸ್ಯ ಹಾಗೂ ಎಲ್.ಡಿಎಫ್ ಸಂಚಾಲಕ ವಿಜಯರಾಘವನ್ ಅವರನ್ನು ತರಲಾಗಿತ್ತು. ನಂತರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು ಸಿಪಿಎಂ ಅಧಿಕಾರ ಉಳಿಸಿಕೊಂಡಿತ್ತು. ಈ ವರ್ಷ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲೂ ಸಿಪಿಎಂ ನೇತೃತ್ವದ ಎಲ್.ಡಿ.ಎಫ್ ಅಧಿಕಾರ ಜಯ ಗಳಿಸಿ ಅಧಿಕಾರ ಹಿಡಿದಿತ್ತು.
ಪಕ್ಷದಲ್ಲಿ ಸಂಘಟನಾ ಸಭೆಗಳು ನಡೆಯುತ್ತಿರುವಾಗಲೇ ಬಾಲಕೃಷ್ಣನ್ ರಾಜ್ಯ ಕಾರ್ಯದರ್ಶಿಯಾಗಿ ಮರಳಿದ್ದಾರೆ. ಮುಂದಿನ ವರ್ಷ ಏಪ್ರಿಲ್ ನಲ್ಲಿ ಕಣ್ಣೂರಿನಲ್ಲಿ ಪಕ್ಷದ ಕಾಂಗ್ತೆಸ್ ಸಭೆಗಳು ನಡೆಯಲಿವೆ.


