ಬಿಜೆಪಿಗೆ ಬುದ್ದ, ಬಸವ ಅಂಬೇಡ್ಕರ್ ತತ್ವದ ಜೊತೆಗೆ ಸಂವಿಧಾನದ ಮೇಲೆಯೂ ನಂಬಿಕೆ ಇಲ್ಲ. ಹಾಗಾಗಿಯೇ ಅದು ಧರ್ಮಗಳ ನಡುವೆ ವಿಷಬೀಜ ಬಿತ್ತುವ ಮೂಲಕ ಕೋಮುಭಾವನೆ ಕೆರಳಿಸಿ ಚುನಾವಣೆ ಎದುರಿಸುತ್ತದೆ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ ಖರ್ಗೆ ಆರೋಪಿಸಿದ್ದಾರೆ.
ಕಲಬುರುಗಿಯ ಸುರಪುರದಲ್ಲಿ ಯಾದಗಿರಿ ವಿಧಾನಪರಿಷತ್ ಚುನಾವಣೆಯ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಅಭ್ಯರ್ಥಿ ಶಿವಾನಂದ ಪಾಟೀಲ್ ಪರ ಮತಯಾಚನೆ ಮಾಡಿ ಮಾತನಾಡಿದರು.
ದೇಶದ ಸ್ವಾಂತಂತ್ರ್ಯಕ್ಕೆ ಬೆವರು ಹರಿಸದ ಆರ್.ಎಸ್.ಎಸ್ ಮುಖಂಡರು ನಮಗೆ ದೇಶಭಕ್ತಿಯ ಸರ್ಟಿಫಿಕೇಟ್ ನೀಡುತ್ತಿದ್ದಾರೆ. ಹಾಗೆ ಸರ್ಟಿಫಿಕೇಟ್ ನೀಡಲು ಅವರು ಯಾರು ಎಂದು ಪ್ರಶ್ನಿಸಿದರು.
ಸುರಪುರ ನೆಲದ ರಾಜರು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದಾಗ ಆರ್.ಎಸ್.ಎಸ್. ಮುಖಂಡರು ಎಲ್ಲಿದ್ದರು. ಇಂತಹ ನೆಲದ ಮೇಲೆ ಆರ್.ಎಸ್.ಎಸ್. ಹಾಗೂ ಬಿಜೆಪಿಯನ್ನು ಬೆಳೆಯಲು ಬಿಡಬಾರದು ಎಂದು ಹೇಳಿದರು.
ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು 2 ಸಾವಿರ ಕೋಟಿ ರೂ ಹಗರಣ ನಡೆದಿದ ಎಂದು ಸ್ವತಃ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದರು. ಸಿ.ಪಿ.ಯೋಗೀಶ್ವರ್ ಹಾಗೂ ಎಚ್.ವಿಶ್ವನಾಥ್ ಅವರು ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಬಹಿರಂಗವಾಗಿಯೇ ಮಾತನಾಡಿದ್ದರು. ಸಚಿವ ಕೆ.ಎಸ್.ಈಶ್ವರಪ್ಪ ರಾಜ್ಯಪಾಲರಿಗೆ ಪತ್ರ ಬರೆದಿದ್ದರು ಎಂದು ಉದಾಹರಣೆ ನೀಡಿದರು.
ಈಗ ಗುತ್ತಿಗೆದಾರರು ಪ್ರಧಾನಿಗೆ ಪತ್ರ ಬರೆದು ರಾಜ್ಯ ಸರ್ಕಾರ ಶೇ.40ರಷ್ಟು ಕಮಿಷನ್ ಕೇಳುತ್ತಿದೆ ಎಂದು ಆರೋಪಿಸಿದ್ದರು. ಇದು ರಾಜ್ಯ ಸರ್ಕಾರದ ಭ್ರಷ್ಟತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಬುದ್ದ, ಬಸವ ಅಂಬೇಡ್ಕರ್ ತತ್ವದ ಆಧಾರದ ಮೇಲೆ ನಡೆಯುತ್ತದೆ. ಹಾಗೆಯೇ ಚುನಾವಣೆಯನ್ನು ಎದುರಿಸುತ್ತದೆ ಎಂದು ಪ್ರತಿಪಾದಿಸಿದರು.


