ನೀರು ಪೋಲಾಗುತ್ತಿರುವ ಬಗ್ಗೆ ವರದಿ ಮಾಡಿದ ಗುಬ್ಬಿ ಪಟ್ಟಣದ ಸ್ಥಳೀಯ ಪತ್ರಕರ್ತ ರಮೇಶ್ ಗೌಡ ಮೇಲೆ ಎಂಟು ಮಂದಿ ಪಟ್ಟಣ ಪಂಚಾಯ್ತಿ ಸದಸ್ಯರು ಹಲ್ಲೆ ನಡೆಸಿದ್ದು, ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ.
ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ಸುಭಾಷ್ ನಗರದಲ್ಲಿ ವ್ಯಾಪಕವಾಗಿ ನೀರು ಪೋಲಾಗುತ್ತಿತ್ತು. ಈ ಬಗ್ಗೆ ವೈದ್ಯಕೀಯ ವಿದ್ಯಾರ್ಥಿಯೊಬ್ಬರು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಯೋಗೀಶ್ ಅವರಿಗೆ ದೂರವಾಣಿ ಮೂಲಕ ದೂರು ನೀಡಿದರು ಎಂದು ವರದಿಯಾಗಿದೆ.
ಪೋಲಾಗುತ್ತಿರುವ ನೀರು ತಡೆದು ಜನರಿಗೆ ಪೂರೈಕೆ ಮಾಡುವ ಬದಲು ಮುಖ್ಯಾಧಿಕಾರಿ ಯೋಗೀಶ್ ಶಾಮೀಲಾಗಿ ಎಂಟು ಮಂದಿ ಸದಸ್ಯರು ವೈದ್ಯಕೀಯ ವಿದ್ಯಾರ್ಥಿಗೆ ಬೆದರಿಕೆ ಹಾಕಿದರು ಎನ್ನಲಾಗಿದೆ. ಈ ಸುದ್ದಿಯನ್ನು ಸ್ಥಳೀಯ ಪತ್ರಕರ್ತ ರಮೇಶ್ ಗೌಡ ಸುದ್ದಿ ಮಾಡಿದ್ದಾರೆ.
ಇದರಿಂದ ಕೆರಳಿದ ಪ.ಪಂ ಸದಸ್ಯರಾದ ಕುಮಾರ್, ಲೋಕೇಶ್ ಬಾಬು ಮತ್ತು ಇತರೆ ಬೆಂಬಲಿಗರು ಭಾನುವಾರ ಪತ್ರಕರ್ತ ರಮೇಶ್ ಗೌಡ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ರಮೇಶ್ ತಲೆ ಮತ್ತು ಹೊಟ್ಟೆಗೆ ತೀವ್ರ ಪೆಟ್ಟು ಬಿದ್ದಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪತ್ರಕರ್ತನ ಮೇಲಿನ ಹಲ್ಲೆಯನ್ನು ಖಂಡಿಸಿ ಪತ್ರಕರ್ತರು ಪ್ರತಿಭಟನೆ ನಡೆಸಿದರು. ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ತಹಶೀಲ್ದಾರ್ ಆರತಿ ಮಾತನಾಡಿ, ಪ್ರಕರಣ ದಾಖಲಾಗಿದೆ. ಈ ಸಂಬಂಧ ಆರು ಮಂದಿಯನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಇದೆ ಎಂದು ಹೇಳಿದರು.
ಕೈಮಾಡುವುದು ತಪ್ಪು-ಶಾಸಕ ಶ್ರೀನಿವಾಸ್
ಶಾಸಕ ಶ್ರೀನಿವಾಸ್ ಬೆಂಬಲಿಗರು ಪತ್ರಕರ್ತ ರಮೇಶ್ ಗೌಡ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ಆದರೆ ಶಾಸಕ ಶ್ರೀನಿವಾಸ್ ಈ ಆರೋಪವನ್ನು ತಳ್ಳಿಹಾಕಿದ್ದಾರೆ. ಸಮಾಜದಲ್ಲಿನ ಲೋಪದೋಷಗಳ ಬಗ್ಗೆ ಬೆಳಕು ಚೆಲ್ಲುವುದು ಪತ್ರಕರ್ತರ ಕೆಲಸ. ಹಾಗೆಂದು ಕೈಮಾಡುವುದು ತಪ್ಪು ಎಂದು ದಿ ನ್ಯೂಸ್ ಕಿಟ್ ಗೆ ಹೇಳಿದ್ದಾರೆ.


