ಮಕ್ಕಳ ಸಾವು ಪ್ರಕರಣದಲ್ಲಿ ನ್ಯಾಯಾಲಯ ನನಗೆ ಕ್ಲೀನ್ ಚಿಟ್ ನೀಡಿದ್ದರೂ ಉತ್ತರ ಪ್ರದೇಶ ಸರ್ಕಾರ ನನ್ನನ್ನು ಸೇವೆಯಿಂದ ವಜಾಗೊಳಿಸಿರುವ ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗುವುದಾಗಿ ಡಾ.ಕಫೀಲ್ ಖಾನ್ ಸ್ಪಷ್ಟಪಡಿಸಿದ್ದಾರೆ.
2017ರಲ್ಲಿ ಗೋರಖ್ ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳು ಸಾವನ್ನಪ್ಪಿದ್ದವು. ಇದಕ್ಕಾಗಿ ತನಿಖಾ ಸಮಿತಿ ರಚಿಸಿತ್ತು. ಸಮಿತಿಯು ವೈದ್ಯಕೀಯ ಕ್ಷೇತ್ರದ ಸ್ವತಂತ್ರ ಮತ್ತು ನಿಷ್ಪಕ್ಷಪಾತ ತಜ್ಞರನ್ನು ಹೊಂದಿರಬೇಕು. ಇಂತಹ ತಾಂತ್ರಿಕ ವಿಷಯವನ್ನು ಪರಿಶೀಲಿಸಲು ಗೋವಾ ಐಐಟಿ ನಿರ್ದೆಶಕರು ಅಥವಾ ಕಂದಾಯ ಕಾರ್ಯದರ್ಶಿ ಹೇಗೆ ಅರ್ಹರಾಗಿರುತ್ತಾರೆ. ನನ್ನನ್ನು ವೈದ್ಯಕೀಯ ಕ್ಷೇತ್ರದಿಂದ ಹೊರಹಾಕಲು ಸರ್ಕಾರ ಪ್ರಯತ್ನಿಸುತ್ತಿದ್ದು, ಈ ಆಘಾತದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದು ಖಾನ್ ಹೇಳಿದ್ದಾರೆ.
‘ದೊಡ್ಡ ಮತ್ತು ಪ್ರಸಿದ್ದ ವೈದ್ಯಕೀಯ ಸೌಲಭ್ಯವು ರೋಗಿಗಳು ಸಾಯುವುದಕ್ಕೆ ಮೊದಲೇ ಆಮ್ಲಜನಕ ಸೌಲಭ್ಯವನ್ನು ಸ್ಥಾಪಿಸಿರಬೇಕು ಇದು ಎಲ್ಲೆಡೆ ರೂಢಿಯಲ್ಲಿರುವ ಯುಗದಲ್ಲಿ ಆಮ್ಲಜನಕದ ಕೊರತೆ ಉಂಟಾಗಲು ಹೇಗೆ ಸಾಧ್ಯ. ಮುಖ್ಯವಾಗಿ ಆಸ್ಪತ್ರೆಯಲ್ಲಿ ನೀರು ಅಥವಾ ವಿದ್ಯುತ್ ಪೂರೈಕೆ ವಿಫಲವಾಗಬಹುದು. ಆದರೆ ಆಮ್ಲಜನಕದ ಪೂರೈಕೆಗೆ ಅಡ್ಡಿಪಡಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ.

ಆಮ್ಲಜನಕದ ಕೊರತೆಯು ರೋಗಿಯ ಹೈಪೋಕ್ಸಿಯಾಕ್ಕೆ ಕಾರಣವಾಗಬಹುದು. ಹೈಪೋಕ್ಸಿಯಾ ದೇಹದ ಪಚನ ಕ್ರಿಯೆಯನ್ನು ಹಳಿತಪ್ಪುವಂತೆ ಮಾಡುತ್ತದೆ. ಇದು ಅಂಗಗಳ ವೈಫಲ್ಯಕ್ಕೆ ಮತ್ತು ಅಂತಿಮವಾಗಿ ಸಾವಿಗೆ ಕಾರಣವಾಗುತ್ತದೆ. ವೈದ್ಯಕೀಯ ಸೌಲಭ್ಯಗಳು ಮತ್ತು ವೈದ್ಯರು ಇದ್ದರೂ ಏನನ್ನೂ ಮಾಡಲು ಸಾಧ್ಯವಿಲ್ಲ. ಇದರಿಂದಾಗಿಯೇ ಬಿಆರ್.ಡಿ ವೈದ್ಯಕೀಯ ಕಾಲೇಜಿನಲ್ಲಿ ಆಮ್ಲಜನಕ ಪೂರೈಕೆ ಸ್ಥಗಿತಗೊಂಡ ಕೆಲವು ದಿನಗಳ ನಂತರ ಹಲವು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಹೇಳಿದರು.
ತನ್ನನ್ನು ವಜಾಗೊಳಿಸಿರುವ ವರದಿಗಳ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿರುವ ಡಾ.ಖಾನ್, ನ್ಯಾಯಾಲಯ ಈ ಹಿಂದೆ ಕ್ಲೀನ್ ಚಿಟ್ ನೀಡಿದೆ. ನನ್ನನ್ನು ವಜಾಗೊಳಿಸಲು ಅವರಿಗೆ ಯಾವುದೇ ಅಧಿಕಾರವಿಲ್ಲ ಎಂದು ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ ಅಮಾನತುಗೊಂಡ ಎಂಟು ಜನರ ಪೈಕಿ ನನ್ನ ಅಮಾನತು ರದ್ದುಗೊಳಿಸಿದೆ. ನ್ಯಾಯಾಲಯ ಅವರೆಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಶಿಕ್ಷೆ ವಿಧಿಸಿದೆ. ಆದರೆ ಗೌರವಾನ್ವಿತ ನ್ಯಾಯಾಲಯವು ವೈದ್ಯಕೀಯ ನಿರ್ಲಕ್ಷ್ಯ ಮತ್ತು ಭ್ರಷ್ಟಾಚಾರ ಆರೋಪದಿಂದ ನನಗೆ ಕ್ಲೀನ್ ಚಿಟ್ ನೀಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.


