ಕೇಂದ್ರ ಸರ್ಕಾರದ ವಿವಾದಿನ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಕಳೆದ ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ನವೆಂಬರ್ 29ರಂದು ಸಂಸತ್ ಭವನದವರೆಗೆ ಮೆರವಣಿಗೆ ನಡೆಸಲು ನಿರ್ಧರಿಸಿವೆ.
ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಯು ಒಂದು ವರ್ಷ ಪೂರೈಸಿದ ಕೆಲವೇ ದಿನಗಳಲ್ಲಿ ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ ಸಂಸತ್ ಭವನದ ವರೆಗೆ ಮೆರವಣಿಗೆ ನಡೆಸುವಂತಹ ಮಹತ್ವದ ತೀರ್ಮಾನ ಕೈಗೊಂಡಿದೆ.
ನವೆಂಬರ್ 29ರಂದು ಗಾಜಿಪುರ ಗಡಿ, ಟಿಕ್ರಿ ಗಡಿಯಿಂದ ರೈತರು ತಮ್ಮ ಟ್ರ್ಯಾಕ್ಟರ್ ಗಳಲ್ಲಿ ಸಂಸತ್ ಭವನಕ್ಕೆ ತೆರಳಲಿದ್ದಾರೆ. ಮೆರವಣಿಗೆಯನ್ನು ಎಲ್ಲಿಯೇ ನಿಲ್ಲಿಸಿದರೂ ಅಲ್ಲಿಯೇ ಧರಣಿ ಸತ್ಯಾಗ್ರಹ ನಡೆಸುತ್ತೇವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಸಮಿತಿ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.
ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ದೇಶಾದ್ಯಂತ ಪ್ರತಿಭಟನೆ, ಹರತಾಳ, ಬಂದ್, ರಸ್ತೆ ತಡೆ, ಹೀಗೆ ಹಲವು ಬಗೆಯಲ್ಲಿ ಪ್ರತಿಭಟನೆಗಳನ್ನು ರೈತರು ನಡೆಸಿ, ಪ್ರತಿಭಟನೆಗಳನ್ನು ಮುಂದುವರಿಸುತ್ತಿದ್ದರೂ ಕೇಂದ್ರ ಸರ್ಕಾರ ಮಾತ್ರ ಈ ಪ್ರತಿಭಟನೆಗಳ ಬಗ್ಗೆ ಗಮನಹರಿಸುತ್ತಿಲ್ಲ.
ಜನವರಿ 26ರಂದು ಕೆಂಪುಕೋಟೆಗೆ ರೈತ ಸಂಘಟನೆಗಳ ನೇತೃತ್ವದಲ್ಲಿ ಸಾವಿರಾರು ರೈತರು ಟ್ರ್ಯಾಕ್ಟರ್ ಗಳನ್ನು ನುಗ್ಗಿಸಿದ ಸಂದರ್ಭದಲ್ಲಿ ಕಿಡಿಗೇಡಿಯೊಬ್ಬ ಕೆಂಪುಕೋಟೆಯ ಮೇಲೆ ಸಿಖ್ ಧರ್ಮದ ಬಾವುಟ ಹಾರಿಸುವ ಮೂಲಕ ಚಳವಳಿಯನ್ನು ದಿಕ್ಕು ತಪ್ಪಿಸಲು ಯತ್ನಿಸಿದ್ದ. ಆದರೆ ಈ ಬಗ್ಗೆ ತನಿಖೆ ನಡೆದು ಆತ ಬಿಜೆಪಿ ಕಾರ್ಯಕರ್ತ ಎಂಬುದು ಕೂಡ ಬಹಿರಂಗವಾಗಿತ್ತು.
ಇನ್ನೊಂದೆಡೆ ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಶಾಂತಿಯುತವಾಗಿ ಮೆರವಣಿಗೆಯಲ್ಲಿ ತೆರಳುತ್ತಿದ್ದ ರೈತರ ಮೇಲೆ ಎಸ್.ಯುವಿ ವಾಹನವನ್ನು ಹರಿಸಿ ನಾಲ್ವರು ರೈತರು ಸೇರಿ ಏಳು ಮಂದಿಯನ್ನು ಹತ್ಯೆ ಮಾಡಲಾಗಿತ್ತು. ಸಚಿವ ಅಜಯ್ ಮಿಶ್ರಾ ಪುತ್ರ ಆ ವಾಹನದಲ್ಲಿದ್ದ ಎಂಬುದು ತನಿಖೆಯಿಂದ ದೃಢಪಟ್ಟಿದೆ.
ಇದರ ನಡುವೆಯೇ ಸುಪ್ರೀಂಕೋರ್ಟ್ ರೈತರು ದೀರ್ಘಾವಧಿವರೆಗೆ ರಸ್ತೆ ತಡೆಯುವಂತಿಲ್ಲ ಎಂದು ಹೇಳಿತು. ಹಾಗಾಗಿ ಪೊಲೀಸರು ಗಡಿಗಳಲ್ಲಿ ಹಾಕಿದ್ದ ಮುಳ್ಳುತಂತಿ ಬೇಲಿ, ಸೀಮೆಂಟ್ ಗೋಡೆ ಕೆಡವಿದರು. ಈ ನಡುವೆಯೇ ರೈತರು ಸಂಸತ್ ವರೆಗೆ ಮೆರವಣಿಗೆ ತೆರಳಲು ನಿರ್ಧರಿಸಿದ್ದಾರೆ. ಇದು ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯನ್ನು ಹುಟ್ಟುಹಾಕಿದೆ.


