ಹಿಸ್ಸಾರ್ ಜಿಲ್ಲೆಯ ನಾರ್ನಾಂಡ್ ಪಟ್ಟಣದಲ್ಲಿ ಬಿಜೆಪಿ ರಾಜ್ಯಸಭಾ ಸಂಸದ ರಾಮ್ ಚಂದರ್ ಜಂಗ್ರಾ ವಿರುದ್ದ ಶುಕ್ರವಾರ ನಡೆದ ಪ್ರತಿಭಟನೆಯ ವೇಳೆ ಪೊಲೀಸರು ನಡೆಸಿದ ಲಾಠಿ ಚಾರ್ಜ್ ನಲ್ಲಿ ರೈತರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವುದನ್ನು ನಿರಾಕರಿಸಿದ್ದಾರೆ. ಪ್ರತಿಭಟನೆಯ ವೇಳೆ ಬೀದಿಯಲ್ಲಿ ಬಿದ್ದ ರೈತನಿಗೆ ಗಾಯಗಳಾಗಿವೆ ಎಂದು ಹೇಳಿದ್ದಾರೆ.
ರೈತರು ಉದ್ಯೋಗವಿಲ್ಲದ ಮದ್ಯ ವ್ಯಸನಿಗಳು ಎಂದು ಸಂಸದರು ಆರೋಪಿಸಿದ್ದನ್ನು ಖಂಡಿಸಿ ರೈತರು ಪ್ರತಿಭಟನೆ ಆಯೋಜಿಸಿದ್ದರು. ಧರಣಿ ನಿರತ ರೈತರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಯಲ್ಲಿ ಸಂಸದರ ಕಾರಿನ ಗಾಜು ಕೂಡ ಜಖಂಗೊಂಡಿದೆ ಎಂದು ಆರೋಪಿಸಲಾಗಿದೆ.
ಲಾಠಿಚಾರ್ಜ್ ನಲ್ಲಿ ರೈತ ಕುಲದೀಪ್ ರಾಣಾ ಗಂಭೀರವಾಗಿ ಗಾಯಗೊಂಡಿದ್ದು, ಹಿಸಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ರೈತ ಮುಖಂಡ ರವಿ ಅಜಾದ್ ಹೇಳಿದ್ದಾರೆ. ಪೊಲೀಸರು ಸುಧೀರ್ ಸಿಂಘ್ವಾ ಮತ್ತು ಕೈಲಾಸ ಉಮ್ರಾ ಎಂಬ ರೈತರನ್ನು ಬಂಧಿಸಿದ್ದು, ನಂತರ ಬಿಡುಗಡೆ ಮಾಡಲಾಗಿದೆ.
ನಾರ್ನಾಂಡ್ ಡಿವೈಎಸ್ ಪಿ ಜುಗಲ್ ಕಿಶೋರ್ ರಾಮ್ “ಯಾವುದೇ ಪೊಲೀಸ್ ಲಾಠಿಚಾರ್ಜ್ ನಡೆದಿಲ್ಲ. ರಸ್ತೆಯಲ್ಲಿ ಬಿದ್ದು ಗಾಯಗೊಂಡಿದ್ದರು. ಅವರು ಮಿರ್ಗಿ ಕಾಯಿಲೆಯಿಂದ ಬಳಲುತ್ತಿದ್ದರು. ಸಂಸದರ ಕಾರಿನ ಗಾಜು ಒಡೆದಿದ್ದಕ್ಕಾಗಿ ಇಬ್ಬರು ರೈತರನ್ನು ಬಂಧಿಸಿರುವುದಾಗಿ ತಿಳಿಸಿರುವುದಾಗಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಧರ್ಮಶಾಲೆಗೆ ಶಂಕುಸ್ಥಾಪನೆ ಮಾಡಲು ಜಾಂಗ್ರಾ ಪಟ್ಟಣಕ್ಕೆ ತೆರಳಿದ್ದಾಗ ರೈತರು ಜಮಾಯಿಸಿ ಅವರ ವಿರುದ್ಧ ಘೋಷಣೆ ಕೂಗಿದರು. ಪೊಲೀಸರು ಬ್ಯಾರಿಕೇಡ್ ಗಳನ್ನು ನಿರ್ಮಿಸಿ ತಡೆದರು. ಆದರೂ ರೈತರು ಘೋಷಣೆ ಕೂಗುತ್ತಲೇ ಮುಂದೆ ಸಾಗುವಲ್ಲಿ ಯಶಸ್ವಿಯಾದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ರೈತ ಮುಖಂಡ ಕುಲದೀಪ್ ಖರಾರ್ ಮಾತನಾಡಿ ” ಬಿಜೆಪಿಯ ಅಶ್ವದಳದ ಜೊತೆಗಿದ್ದ ಗೂಂಡಾಗಳು ಬಹುಶಃ ರೈತರಿಗೆ ಹೊಡೆದಿದ್ದಾರೆ. ನಂತರ ಅವರಲ್ಲಿ ಮೂರ್ನಾಲ್ಕು ಮಂದಿ ಗಾಯಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನೆಯನ್ನು ಖಂಡಿಸಿ ರೈತರು ಕೆಲ ಕಾಲ ರಸ್ತೆ ತಡೆ ನಡೆಸಿದರು.
ಗಾಯಗೊಂಡ ರೈತನನ್ನು ಹಿಸಾರ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾವು ಅವರ ಆರೋಗ್ಯದ ಬಗ್ಗೆ ಚಿಂತಿತರಾಗಿದ್ದೇವೆ. ಲಾಠಿಚಾರ್ಜ್ ಘಟನೆಯಿಂದ ರೈತರು ಕಂಗಾಲಾಗಿದ್ದಾರೆ ಎಂದು ಖರಾರ್ ಹೇಳಿದರು.