ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ್ನು ಪ್ರತಿನಿಧಿಸಿ ನಾಲ್ಕು ಬಾರಿ ವಿಧಾನಸಭೆಗೆ ಆಯ್ಕೆಯಾಗಿ, ಎರಡು ಅವಧಿಗೆ ಸಚಿವರಾಗಿದ್ದ ಮಾಜಿ ಶಾಸಕ ವೆಂಕಟರಮಣಪ್ಪ ಶುಕ್ರವಾರ ಮುಂಜಾನೆ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.
ಗುತ್ತಿಗೆದಾರರಾಗಿ ವೃತ್ತಿ ಜೀವನ ಆರಂಭಿಸಿದ ವೆಂಕಟರಮಣಪ್ಪ, 1984 ರಲ್ಲಿ ಪೊನ್ನಸಮುದ್ರ ಮಂಡಲ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಎತ್ತಿನಹಳ್ಳಿ ನರಸಿಂಹರೆಡ್ಡಿಯವರ ಮೂಲಕ ಕಾಂಗ್ರೆಸ್ ಪಕ್ಷದ ಟಿಕೆಟ್ ಗಿಟ್ಟಿಸಿ 1989 ರಲ್ಲಿ ಪ್ರಥಮ ಬಾರಿಗೆ ಪಾವಗಡ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದರು. 1994ರಲ್ಲಿ ಸೋಮ್ಲನಾಯ್ಕ ವಿರುದ್ಧ ಸೋಲು ಕಾಣುವ ವೆಂಕಟರಮಣಪ್ಪ 1999ರಲ್ಲಿ ಎರಡನೇ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾದರು.
ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಎಂ ಕೃಷ್ಣ ಅವರಿಗೆ ಅಪ್ತರಾಗಿದ್ದ ವೆಂಕಟರಮಣಪ್ಪ ಪಾವಗಡ ಪಟ್ಟಣಕ್ಕೆ ಕುಡಿಯುವ ನೀರು ಕಲ್ಪಸಲು ಉತ್ತರ ಪಿನಾಕಿನಿ ನದಿಗೆ ಅಡ್ಡವಾಗಿ ಚೆಕ್ಡ್ಯಾಮ್ ಕಟ್ಟಿಸಿ ಪಾವಗಡ ಜನರ ಕುಡಿಯುವ ನೀರಿನ ದಾಹ ನೀಗಿಸಿದರು. 2004 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿ ತಿಮ್ಮರಾಯಪ್ಪ ಎದರು ಸೋಲು ಕಂಡರು. ಮತ್ತೆ 2008ರಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನಿರಾಕರಿಸಿದಾಗ ಧೃತಿಗೆಡದೆ ಪಕ್ಷೇತರವಾಗಿ ಸ್ಪರ್ಧೆ ಮಾಡಿ ಜಯಭೇರಿ ಗಳಿಸಿ ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಸರ್ಕಾರ ಬರಲು ಅಡಿಗಲ್ಲು ಹಾಕಿದರು.
ಬಿಜೆಪಿಯ ಬಿ.ಎಸ್ ಯಡ್ಡಿಯೂರಪ್ಪ ಸರ್ಕಾರದಲ್ಲಿ ಸಣ್ಣ ಕೈಗಾರಿಕೆ ಸಚಿವರಾಗಿ ಕೆಲಸ ಮಾಡಿದರು. ಈ ವೇಳೆ ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಹ ಕರ್ತವ್ಯ ನಿರ್ವಹಿಸಿದರು, ಪಾವಗಡ ಪಟ್ಟಣ ಸಮೀಪ ಕೈಗಾರಿಕಾ ಪಾರ್ಕ್ ಸಹ ನಿರ್ಮಾಣ ಆಗಲು ಕಾರಣರಾದರು.
2013 ರಲ್ಲಿ ವೆಂಕಟರಮಣಪ್ಪ ಅವರು ತಮ್ಮ ಪುತ್ರ ವೆಂಕಟೇಶರವರಿಗೆ ಕಾಂಗ್ರೆಸ್ನಿಂದ ಟಿಕೆಟ್ ಕೊಡಿಸಿದ್ದರು ವೆಂಕಟೇಶ್ ಅವರು ಚುನಾವಣೆಯಲ್ಲಿ ಸೋಲು ಕಂಡರು. 2013ರಲ್ಲಿ ಮಗ ವೆಂಕಟೇಶ್ ಚುನಾವಣೆಯಲ್ಲಿ ಸೋಲು ಕಂಡರು ಅಂದು ಸಿದ್ದರಾಮಯ್ಯ ಮುಖ್ಯಮಂತ್ರಿಗಳು ಆಗಿದ್ದರಿಂದ ಸಿದ್ದರಾಮಯ್ಯ ಜೊತೆ ಅಪ್ತವಾಗಿದರಿಂದ ಪಾವಗಡ ಅಭಿವೃದ್ಧಿಗೆ ಒತ್ತುಕೊಟ್ಟು ಕೆಲಸ ಮಾಡಿದರು. ಇದೆ ಸಂದರ್ಭದಲ್ಲಿ ಪಾವಗಡಕ್ಕೆ ಶಾಶ್ವತ ಕುಡಿಯುವ ನೀರು ಕಲ್ಪಿಸುವ ತುಂಗಭದ್ರ ಹಿನ್ನಿರು ಯೋಜನೆ ಮಂಜೂರು ಮಾಡಿಸಲು ಪ್ರಮುಖ ಪಾತ್ರ ವಹಿಸಿದರು.
2018 ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದಿಂದ ತಿಮ್ಮರಾಯಪ್ಪ ವಿರುದ್ಧ ಗೆದ್ದಿದ್ದ ವೆಂಕಟರಮಣಪ್ಪ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಕಾರ್ಮಿಕ ಮತ್ತು ರೇಷ್ಮೆ ಸಚಿವರಾಗಿ, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಹಲವು ಅಭಿವೃದ್ಧಿ ಕೆಲಸ ಮಾಡಿದರು.


