Monday, May 25, 2026
Google search engine
Homeಮುಖಪುಟ'ಪ್ರಜಾಪ್ರಭುತ್ವವನ್ನು ಅಡ್ಡದಾರಿಗೆ ಎಳೆಯುವ ಪ್ರಯತ್ನ ಎಗ್ಗಿಲ್ಲದೆ ನಡೆಯುತ್ತಿದೆ'

‘ಪ್ರಜಾಪ್ರಭುತ್ವವನ್ನು ಅಡ್ಡದಾರಿಗೆ ಎಳೆಯುವ ಪ್ರಯತ್ನ ಎಗ್ಗಿಲ್ಲದೆ ನಡೆಯುತ್ತಿದೆ’

ಇಂದು ಸುಳ್ಳನ್ನು ಯುವಕರ ಎದೆಗೆ ತುಂಬುವ, ಪ್ರಜಾಪ್ರಭುತ್ವವನ್ನು ಅಡ್ಡದಾರಿಗೆ ಎಳೆಯುವ ಪ್ರಯತ್ನ ಎಗ್ಗಿಲ್ಲದಂತೆ ನಡೆಯುತ್ತಿದೆ ಎಂದು ಹಿರಿಯ ಸಾಹಿತಿ ಪ್ರೊ. ಎಸ್ ಜಿ ಸಿದ್ದರಾಮಯ್ಯ ಹೇಳಿದರು.

ತುಮಕೂರು ವಿವಿಯ ಸರ್ ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ತುಮಕೂರು ವಿಶ್ವವಿದ್ಯಾನಿಲಯ, ವಿಶ್ವವಿದ್ಯಾನಿಲಯ ಕಲಾ ಕಾಲೇಜು ಕನ್ನಡ ವಿಭಾಗ ಹಾಗೂ ಈದಿನ ಡಾಟ್ ಕಾಮ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ “ಜೈ ಹಿಂದ್ ಜಯ ಕರ್ನಾಟಕ” ವಿಶೇಷ ಸಂಚಿಕೆ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಸಾಂಸ್ಕೃತಿಕ ದಾಸ್ಯಕ್ಕೆ ನಮ್ಮ ದೇಶ ಬಲಿಯಾಗುತ್ತಿದೆ. ಇಂತಹ ದಾಸ್ಯದಿಂದ ಬಿಡುಗಡೆ ಹೊಂದಲು ನಡೆದ ಅತಿ ದೊಡ್ಡ ಮತ್ತು ಮಹತ್ವದ ಚಳವಳಿ ಶರಣ ಚಳವಳಿ. ಆದರೆ, ನಮಗೆ ಇಂದಿಗೂ ಸಾಂಸ್ಕೃತಿಕ ಸ್ವಾತಂತ್ರ‍್ಯ ಸಿಕ್ಕಿಲ್ಲ. ಶರಣರು ಸನಾತನವನ್ನು ತಿರಸ್ಕರಿಸಿ ಪುರಾತನವನ್ನು, ಕರ್ಮಕ್ಕೆ ಬದಲಾಗಿ ಕಾಯಕವನ್ನು, ದಾನಕೆ ಬದಲಾಗಿ ದಾಸೋಹವನ್ನು ತಂದರು. ಇದು ಸಾಂಸ್ಕೃತಿಕ ಬಿಡುಗಡೆಗಾಗಿ ನಡೆದ ಚಳವಳಿ. ಆದರೆ, ಇದು ಇಂದಿಗೂ ಸಾಧ್ಯವಾಗಿಲ್ಲ. ಸಫಲವಾಗಿಲ್ಲ. ನಮ್ಮ ಬದುಕಿನ ತುಂಬಾ ಚಾತುರ್ವರ್ಣದ ಕಸವನ್ನು ತುಂಬಿಕೊAಡಿದ್ದೇವೆ ಎಂದರು.

ನಮಗೆ ಚರಿತ್ರೆ ಅರ್ಥವಾಗದೆ ಸಮಕಾಲೀನ ಸಂದರ್ಭ ಅರ್ಥವಾಗುವುದಿಲ್ಲ. ಅದೇ ರೀತಿ ನಮ್ಮ ಭವಿಷ್ಯವನ್ನು ಕಟುವುದಕ್ಕೂ ಸಾಧ್ಯವಿಲ್ಲ. ಹಾಗಾಗಿ ನಮಗೆ ಚರಿತ್ರೆ ಅರ್ಥವಾಗಬೇಕು. ಈ ಹಿನ್ನೆಲೆಯಲ್ಲಿ ನಮ್ಮ ಚರಿತ್ರೆಯನ್ನು ಅರ್ಥ ಮಾಡಿಕೊಳ್ಳುವ, ಅರ್ಥ ಮಾಡಿಸುವ ಇಂಥ ಕೃತಿಗಳು ಬೇಕು. ಈ ವಿಶೇಷ ಸಂಚಿಕೆಯಲ್ಲಿರುವ ಎಲ್ಲಾ ಆಲೋಚನೆಗಳು ಹೆಚ್ಚು ಹೆಚ್ಚು ಸತ್ಯಕ್ಕೆ ಹತ್ತಿರವಾದ ಆಲೋಚನೆಗಳು. ಈ ಕೃತಿಯಲ್ಲಿ ಅತ್ಯಂತ ಮಹತ್ವದ ಅಂಶಗಳು, ವಾಸ್ತವ ವಿಚಾರಗಳು ಇವೆ. ಈ ನೆಲದಲ್ಲಿ ಅತ್ಯಂತ ಸೌಹಾರ್ದಯುತವಾಗಿ ಬಾಳುತ್ತಿದ್ದ ಎರಡು ಧರ್ಮಗಳನ್ನು ಒಡೆದು ಆಳುವ, ಇಂದಿಗೂ ಆಳುತ್ತಿರುವ ಶಕ್ತಿಗಳ ಬಂಡವಾಳವನ್ನು ಈ ವಿಶೇಷ ಸಂಚಿಕೆ ಬಯಲು ಮಾಡುತ್ತದೆ. ಚಿತ್ರಗಳು, ಭೂಪಟಗಳು, ಟಿಪ್ಪಣಿಗಳು ಇವೆಲ್ಲ ವಿಶೇಷವಾಗಿ ಈ ಕೃತಿಯಲ್ಲಿ ಮೂಡಿಬಂದಿವೆ. ಇದು ಮತ್ತೆ ಮತ್ತೆ ಓದಬೇಕಾದ ಕೃತಿ ಎಂದು ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರವಿಕುಮಾರ್ ನೀಹ ಮಾತನಾಡಿ, ನಮ್ಮ ಭಾರತದ ಹುಸಿ ಚರಿತ್ರೆಗಳನ್ನು ಎದುರುಗೊಳ್ಳುವ ಮಹತ್ವದ ಕೆಲಸವನ್ನು ಈ ಕೃತಿ ಮಾಡಿದೆ. ಇದು ಮುಖ್ಯವಾದ ಎರಡು ಪರಿಕಲ್ಪನೆಗಳನ್ನು ಚರ್ಚಿಸುತ್ತಿದೆ. ಒಂದು ರಾಷ್ಟ್ರವಾದ. ಇನ್ನೊಂದು ಪ್ರಾದೇಶಿಕತೆ. ನಮ್ಮ ದೇಶದಲ್ಲಿ ರಾಷ್ಟ್ರವಾದ ಎಂಬ ಪದವು ಜಾರಿಗೆ ಬಂದದ್ದು, ಬಹಳ ಇತ್ತೀಚೆಗೆ. ನಾವು ಬ್ರಿಟಿಷರನ್ನು ಇಲ್ಲಿಂದ ಕಳಿಸಬೇಕು ಎಂಬ ಚಿಂತನೆ ಬಂದಾಗ ಇಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆ ಬಂತು. ರಾಷ್ಟ್ರೀಯಯವಾದ ಚಿಂತನೆ ಇಂದು ಮತಿಯವಾದದ ಅರ್ಥಕ್ಕೆ ಬಂದಿದೆ. ಇಂದು ನಮ್ಮ ಮುಂದೆ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಇಂದು ಒಳಗಿನವರು ಹೊರಗಿನವರು ಹಿಂದೂ ಮುಸ್ಲಿಮರು ಎಂಬ ವಿಭಾಗೀಕರಣವನ್ನೂ ಮಾಡುತ್ತಿವೆ. ನಮ್ಮ ಭಾರತದ ಹುಸಿ ಚರಿತ್ರೆಗಳನ್ನು ಎದುರುಗೊಳ್ಳುವ ಜರೂರು ಇಂದು ಇದೆ ಎಂದರು.

ತುಮಕೂರು ವಿವಿ ಕಲಾ ಕಾಲೇಜಿನ ಪ್ರಾಂಶುಪಾಲೆ ಡಾ.ಜಿ ದಾಕ್ಷಾಯಿಣಿ, ಪರೀಕ್ಷಾಂಗ ಕುಲಸಚಿವ ಡಾ.ಹೆಚ್.ಎಸ್ ಮೋಹನ್, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಆಶಾರಾಣಿ ಬಗ್ಗನಡು, ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಎಚ್ ಆರ್ ರೇಣುಕಾ, ಮಾಜಿ ಸಿಂಡಿಕೇಟ್ ಸದಸ್ಯ ಹೆತ್ತೇನಹಳ್ಳಿ ಮಂಜುನಾಥ್, ಎಚ್.ಎಸ್. ಶಾಹೀದ್ ಅಫ್ರೀದಿ, ಪ್ರಾಧ್ಯಾಪಕರಾದ ಪ್ರೊ. ನಿತ್ಯಾನಂದ ಬಿ ಶೆಟ್ಟಿ, ಡಾ. ನಾಗಭೂಷಣ ಬಗ್ಗನಡು, ಡಾ ಶಿವಣ್ಣ, ಪ್ರೊ.ಬಿ.ಕರಿಯಣ್ಣ, ಡಾ.ಗೀತಾ ವಸಂತ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular